ಹೊಳೆನರಸೀಪುರ: ತಾಲೂಕಿನಲ್ಲಿ ಆಗಸ್ಟ್ ೧೫ರಂದು ಆಚರಿಸುವ ೭೯ನೇ ಸ್ವಾತಂತ್ರ್ಯೋತ್ಸವ ಅರ್ಥಪೂರ್ಣವಾಗಿರಲಿ. ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ನಿಷ್ಠ ಹಾಗೂ ಪ್ರಾಮಾಣಿಕರಾಗಿರುವ ೭ ಜನರನ್ನು ಸನ್ಮಾನಿಸಿ. ಅರ್ಹರನ್ನು ಮಾತ್ರ ಸನ್ಮಾನಿಸಿ, ಸನ್ಮಾನದ ಗೌರವವನ್ನು ಹೆಚ್ಚಿಸಿ ಎಂದು ಶಾಸಕ ಎಚ್. ಡಿ. ರೇವಣ್ಣ ಸಲಹೆ ನೀಡಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸ್ವಾತಂತ್ರ್ಯೋತ್ಸವದಲ್ಲಿ ಎಲ್ಲಾ ಅಧಿಕಾರಿಗಳು ಆಸಕ್ತಿಯಿಂದ ಭಾಗವಹಿಸಿ ಯಾರೂ ತಪ್ಪಿಸಿಕೊಳ್ಳಬೇಡಿ ಎಂದರು. ತಹಸೀಲ್ದಾರ್‌ ವೈ. ಎಂ. ರೇಣುಕುಮಾರ್‌ ಮಾತನಾಡಿ ಪರಿಸರ ಜಾಗೃತಿ, ರಾಷ್ಟ್ರಭಕ್ತಿ, ಅಭಿವೃದ್ದಿಯನ್ನು ಬಿಂಬಿಸುವ ೬ ಸ್ತಬ್ಧಚಿತ್ರಗಳನ್ನು ಸಂಘ ಸಂಸ್ಥೆಗಳು ಹಾಗೂ ಶಿಕ್ಷಣ ಇಲಾಖೆಯಿಂದ ಮಾಡಿಸಿ ಎಂದು ಸಲಹೆ ನೀಡಿದರು. ಸ್ವಾತಂತ್ರೋತ್ಸವ ಮೆರವಣಿಗೆ ಚನ್ನಾಂಬಿಕ ವೃತ್ತದಿಂದ ಪ್ರಾರಂಭವಾಗಿ ಪ್ರತೀವರ್ಷದಂತೆ ಸಾಗುವ ಮಾರ್ಗದಲ್ಲೇ ಸಾಗುವುದು ಎಂದರು. ಬಯಲುರಂಗಮಂದಿರದಲ್ಲಿ ಧ್ವಜಾರೋಹಣ ನಡೆಯಲಿದ್ದು ಅಲ್ಲಿನ ಸ್ವಚ್ಛತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಪುರಸಭೆ ನಿರ್ವಹಿಸಬೇಕು ಎಂದರು. ಪ್ರತೀವರ್ಷದಂತೆ ಈ ವರ್ಷವೂ ಸ್ವಾತಂತ್ರೋತ್ಸವದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಅಧಿಕಾರಿಗಳಿಗೆ ಸೋಷಿಯಲ್ ಕ್ಲಬ್ ವತಿಯಿಂದ ಬೆಳಗಿನ ಉಪಾಹಾರದ ವ್ಯವಸ್ಥೆ ಮಾಡಲಾಗುವುದು ಎಂದು ಕ್ಲಬಿನ ಶಂಕರ ನಾರಾಯಣ್ ಐತಾಳ್ ತಿಳಿಸಿದರು. ದೈಹಿಕ ಶಿಕ್ಷಣ ಸಂಯೋಜಕ ಸುಜತ್ ಅಲಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಪಂಚಾಯ್ತಿ ಇಒ ಮುನಿರಾಜು, ಬಿಇಒ ಸೋಮಲಿಂಗೇಗೌಡ, ಎ.ಎಸ್.ಐ. ಸತ್ಯನಾರಾಯಣ, ತಾಲೂಕು ಕಸಾಪ ಅಧ್ಯಕ್ಷ ಆರ್‌. ಬಿ. ಪುಟ್ಟೇಗೌಡ, ಮಾಜಿ ಅಧ್ಯಕ್ಷ ಎಚ್. ಎಸ್. ಪುಟ್ಟಸೋಮಪ್ಪ, ಕಾರ್ಮಿಕ ನಿರೀಕ್ಷಕಿ ಯಮುನಾ, ವಿವಿಧ ಇಲಾಖೆಯ ಅಧಿಕಾರಿಗಳು, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಮೀಸೆ ಈಶ್ವರ್‌, ಕರ್ನಾಟಕ ರಕ್ಷಣಾ ವೇದಿಕೆಯ ಓಹಿಲೇಶ್, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಎಚ್‌. ಡಿ.ರೇವಣ್ಣ ಉಪಸ್ಥಿತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಪೂರ್ವಭಾವಿ ಸಭೆ ನಡೆಯಿತು. ವೈ.ಎಂ. ರೇಣುಕುಮಾರ್‌, ಮುನಿರಾಜು, ಸೋಮಲಿಂಗೇಗೌಡ ಇತರರು ಇದ್ದರು.