ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮದ್ಯದ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ರಸ್ತೆಗೆ ಮದ್ಯ ಸುರಿದು ಖಾಲಿ ಬಾಟಲುಗಳನ್ನು ಜೋಡಿಸಿ ಬುಧವಾರ ಪ್ರತಿಭಟನೆ ನಡೆಸಿದರು.ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ಪಟ್ಟಣದ ಅಬಕಾರಿ ಕಚೇರಿ ಮುಂಭಾಗ ಸೇರಿದ ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆಗಳ ಕೂಗಿದರು.
ವರ್ಷಕ್ಕೆ ಮೂರು ಬಾರಿ ಮದ್ಯದ ರವನ್ನು ಏರಿಸುತ್ತಿರುವ ರಾಜ್ಯ ಸರ್ಕಾರ ಮಧ್ಯಮ ಕುಟುಂಬದವರಿಗೆ ಅನ್ಯಾಯ ಮಾಡುತ್ತಿದೆ. ಮೇಲಿಂದ ಮೇಲೆ ಮದ್ಯದ ದರ ಏರಿಕೆ ಮಾಡಿ ಮಧ್ಯಮ ವರ್ಗಕ್ಕೆ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೂಡಲೇ ಸರ್ಕಾರ ದರ ಇಳಿಕೆ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನಾ ಸ್ಥಳದಲ್ಲಿ ಎಳನೀರು ಕುಡಿದು ಮದ್ಯ ಸೇವನೆ ಬಿಟ್ಟು ಎಳನೀರು ಕುಡಿಯಿರಿ ಎಂಬ ಘೋಷಣೆಗಳನ್ನು ಕೂಗಿ ಸರ್ಕಾರಕ್ಕೆ ಛೀಮಾರಿ ಹಾಕಿದರು.
ಖಾಲಿ ಬಾಟಲ್ ವಾಪಸ್:ಮದ್ಯ ಪ್ರಿಯರು ಮದ್ಯ ಸೇವಿಸಿದ ಖಾಲಿ ಬಾಟಲುಗಳನ್ನು ರಸ್ತೆ ಬೀದಿಗಳಲ್ಲಿ ಎಸೆಯುತ್ತಿದ್ದು ಇದರಿಂದ ಪರಿಸರದ ನೈರ್ಮಲ್ಯ ಹಾಳಾಗುತ್ತಿದೆ. ಕಂಪನಿಗಳು ಇಂತಹ ಬಾಟಲ್ಗಳನ್ನು ಮರು ಬಳಕೆ ಮಾಡುವಂತೆ ಸರ್ಕಾರ ಸೂಚಿಸಬೇಕು. ಈ ಕುರಿತು ಅಬಕಾರಿ ಇಲಾಖೆಯಿಂದ ಪ್ರತಿ ಮದ್ಯದ ಅಂಗಡಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿ ಮದ್ಯದ ಅಂಗಡಿಯಲ್ಲಿ ಖಾಲಿ ಬಾಟಲುಗಳನ್ನು ಖರೀದಿಸುವ ಕೌಂಟರನ್ನು ಕಡ್ಡಾಯ ತೆರೆಯಬೇಕು. ಇದರಿಂದ ಖಾಲಿ ಬಾಟಲ್ಗಳು ಅಲ್ಲಲ್ಲಿ ಬಿದ್ದ ಮದ್ಯದ ಬಾಟಲ್ಗಳು ಚಲ್ಲಾಡುವುದನ್ನು ತಪ್ಪಿಸಬಹುದು. ಶುಚಿತ್ವ ಕಾಪಾಡಲು ಸರ್ಕಾರ ಆದೇಶವನ್ನು ಹೊರಡಿಸಬೇಕು ಎಂದು ಒತ್ತಾಯಿಸಿ ಅಬಕಾರಿ ಉಪನಿರೀಕ್ಷಕ ಶಿವಣ್ಣ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಚ್ ಜಗದೀಶ್ ಗೌಡ, ಛಾಯಾದೇವಿ ಕೆಂಪೇಗೌಡ, ಸರಸ್ವತಮ್ಮ, ಕಮಲಮ್ಮ, ಸಾವಿತ್ರಮ್ಮ, ಲಕ್ಷ್ಮಿ ಸೇರಿದಂತೆ ಇತರರು ಇದ್ದರು.