ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ತುಂಬೆ ಶಾಖೆಯ 5ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆ, ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ತುಂಬೆ ಶಾಖೆಯಲ್ಲಿ ಜರುಗಿತು.ಕಾರ್ಯಕ್ರಮವನ್ನು ಸಂಘದ ಸದಸ್ಯರಾದ ಗಣೇಶ್ ಸುವರ್ಣ, ಹೊನ್ನಪ್ಪ ಪೂಜಾರಿ, ಅಬ್ದುಲ್ ಹಕೀಮ್, ಅಶೋಕ್ ಕುಲಾಲ್, ಭಾಸ್ಕರ್ ಕುಲಾಲ್ ಹಾಗೂ ಭಾರತಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಸದಸ್ಯರಾದ ಭಾಸ್ಕರ್ ಕುಲಾಲ್ ಮಾತನಾಡಿ, ಆತ್ಮಶಕ್ತಿ ಸಂಘವು ಶೀಘ್ರಗತಿಯ ಸೇವೆ ನೀಡುವ ಮೂಲಕ ಗ್ರಾಹಕ ಸ್ನೇಹಿ ಸಂಘವಾಗಿದೆ ಎಂದರು.
ಸದಸ್ಯೆ ಭಾರತಿ ಮಾತನಾಡಿ, ಸಂಘದ ಹಿರಿಯ ಸದಸ್ಯರಿಗೆ ಮನೆಯ ಬಾಗಿಲಿಗೆ ಬಂದು ಬ್ಯಾಂಕಿಂಗ್ ಸೇವೆ ನೀಡುತ್ತಿರುವುದರಿಂದ ಹಿರಿಯ ನಾಗರಿಕರಿಗೆ ತುಂಬ ಅನುಕೂಲವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ, ಸಂಘದ ತುಂಬೆ ಶಾಖೆಯಲ್ಲಿ ಉತ್ತಮ ರೀತಿಯಲ್ಲಿ ನಿರಖು ಠೇವಣಿ ಸಂಗ್ರಹಣೆ ಹಾಗೂ ಆಭರಣ ಸಾಲ ವಿತರಿಸಿದ್ದು, ಆಭರಣ ಸಾಲದ ಮರುಪಾವತಿಯು ಉತ್ತಮ ರೀತಿಯಲ್ಲಿದೆ. ಸಂಘವು ಆರೋಗ್ಯ ಶಿಬಿರವನ್ನು ಸಹ ನಿರಂತರವಾಗಿ ಹಮ್ಮಿಕೊಂಡು ಬರುತ್ತಿದ್ದು, ಕೇವಲ ಹಣಕಾಸಿನ ವ್ಯವಹಾರವಲ್ಲದೆ ಜನರ ಆರೋಗ್ಯದ ಬಗ್ಗೆಯು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿದೆ. ಸಂಘವು ಒಟ್ಟು 300 ಕೋಟಿ ರು.ಗೂ ಅಧಿಕ ದುಡಿಯುವ ಬಂಡವಾಳ ಹೊಂದಿದ್ದು, ಅಭಿವೃದ್ದಿಯತ್ತ ಸಾಗುತ್ತಿದೆ ಎಂದರು.