ಮಂಗಳೂರು: ಕರ್ನಾಟಕ ವನ್‌ ಕಚೇರಿ ಅವ್ಯವಸ್ಥೆ ವಿರುದ್ಧ ಹೋರಾಟಗಾರ ಜೆರಾರ್ಡ್‌ ಟವರ್ಸ್‌ ವಿಭಿನ್ನ ಪ್ರತಿಭಟನೆ

KannadaprabhaNewsNetwork | Published : Nov 26, 2023 1:15 AM

ಸಾರಾಂಶ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಸೇರಿದಂತೆ ಸಾರ್ವಜನಿಕರಿಗೆ ವಿವಿಧ ರೀತಿಯ ರೀತಿಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಕದ್ರಿಯ ಕರ್ನಾಟಕ ವನ್‌ ಕಚೇರಿಯ ಅವ್ಯವಸ್ಥೆ ವಿರೋಧಿಸಿ ಸಾಮಾಜಿಕ ಹೋರಾಟಗಾರ ಜೆರಾರ್ಡ್‌ ಟವರ್ಸ್‌ ಅವರು ಶನಿವಾರ ಕಚೇರಿಯಲ್ಲೇ ವಿಭಿನ್ನ ರೀತಿಯ ಪ್ರತಿಭಟನೆಯ ಮೂಲಕ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಸೇರಿದಂತೆ ಸಾರ್ವಜನಿಕರಿಗೆ ವಿವಿಧ ರೀತಿಯ ರೀತಿಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಕದ್ರಿಯ ಕರ್ನಾಟಕ ವನ್‌ ಕಚೇರಿಯ ಅವ್ಯವಸ್ಥೆ ವಿರೋಧಿಸಿ ಸಾಮಾಜಿಕ ಹೋರಾಟಗಾರ ಜೆರಾರ್ಡ್‌ ಟವರ್ಸ್‌ ಅವರು ಶನಿವಾರ ಕಚೇರಿಯಲ್ಲೇ ವಿಭಿನ್ನ ರೀತಿಯ ಪ್ರತಿಭಟನೆಯ ಮೂಲಕ ಗಮನ ಸೆಳೆದರು.

ಬಿಲ್‌ ಪಾವತಿಗಾಗಿ ಕಚೇರಿ ಒಳ ಹೋದ ಜೆರಾರ್ಡ್‌ ಟವರ್ಸ್‌ ಅವರು ಸೂಕ್ತ ಗಾಳಿಯ (ವೆಂಟಿಲೇಶನ್‌) ವ್ಯವಸ್ಥೆ ಇಲ್ಲದೆ ತಲೆಸುತ್ತಿ ಬಿದ್ದಾಗ ಅಲ್ಲಿದ್ದ ಸಾರ್ವಜನಿಕರು ಅವರನ್ನು ವಿಚಾರಿಸಿ, ನೀರು ಕುಡಿಸಿ ಉಪಚರಿಸಿದರು.ಸಾಮಾಜಿಕ ಹೋರಟಗಾರನಾಗಿ ಕಳೆದ ಹಲವು ದಶಕದಿಂದ ಮಂಗಳೂರು ನಗರದ ಅಭಿವೃದ್ಧಿ ವಿಚಾರದಲ್ಲಿ ಧ್ವನಿ ಎತ್ತುತ್ತಿರುವ ನಾನು ಜನರ ಸಮಸ್ಯೆಗಳಿಗಾಗಿ ಇಂದು ಮೂರ್ಛೆ ಹೋಗುವ ನಾಟಕ ಮಾಡಬೇಕಾಯಿತು. ಈ ಕಚೇರಿಯಲ್ಲಿ ಕಳೆದ ಹಲವು ಸಮಯದಿಂದ ಹಲವು ಮಂದಿ ಇದೇ ರೀತಿ ನೈಜವಾಗಿ ಮೂರ್ಛೆ ಹೋದಾಗ ನಾನು ಸೇರಿದಂತೆ ಹಲವು ಸಾರ್ವಜನಿಕರು ಉಪಚರಿಸಿದ್ದೇವೆ. ಇಲ್ಲಿನ ಅವ್ಯವಸ್ಥೆಯ ಬಗ್ಗೆ ಕಳೆದ ಸುಮಾರು ನಾಲ್ಕೈದು ತಿಂಗಳಿನಿಂದ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಕ್ರಮವಾಗಿಲ್ಲ ಎಂದು ಜೆರಾರ್ಡ್‌ ಟವರ್ಸ್‌ ಬಳಿಕ ಸುದ್ದಿಗಾರರಲ್ಲಿ ತನ್ನ ಅನಿಸಿಕೆ ಹಂಚಿಕೊಂಡರು.ಈ ಕಚೇರಿಯ ಎಸಿ ಹಾಳಾಗಿ ಸುಮಾರು 10 ತಿಂಗಳು ಕಳೆದಿದೆ. ಕಚೇರಿಯಲ್ಲಿ ಪ್ರಾಕೃತಿಕ ಗಾಳಿ ಬರುವ ನಿಟ್ಟಿನಲ್ಲಿ ಕಿಟಿಕಿಗಳೇ ಇಲ್ಲ. ಇಲ್ಲಿ ದಿನವೊಂದಕ್ಕೆ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳೆಯರು, ವಿಕಲಚೇತನರು ಸೇರಿದಂತೆ ನೂರಾರು ಮಂದಿ ಸಾರ್ವಜನಿಕರು ನಾನಾ ರೀತಿಯ ಕೆಲಸ ಕಾರ್ಯಗಳಿಗೆ ಆಗಮಿಸುತ್ತಾರೆ. ಗ್ಯಾರಂಟಿ ಯೋಜನೆಗಳ ಅರ್ಜಿ ಸಲ್ಲಿಕೆಯ ಸಂದರ್ಭದಲ್ಲಿ ದಿನದಲ್ಲಿ ಗಂಟೆಯೊಂದಕ್ಕೆ ಸುಮಾರು 300ರಷ್ಟು ಮಂದಿ ಇಲ್ಲಿ ಅರ್ಜಿ ಸಲ್ಲಿಸುವುದನ್ನು ಕಂಡಿದ್ದೇನೆ. ಹಾಗಿದ್ದರೂ ಇಲ್ಲಿ ಕುಡಿಯಲು ನೀರಿಲ್ಲ. ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲ. ಬರೆಯಲು ಟೇಬಲ್‌ ವ್ಯವಸ್ಥೆ ಇಲ್ಲ. ಕಚೇರಿ ಹೊರಗಡೆ ಸ್ವಚ್ಛತೆ ಇಲ್ಲ ಎಂದು ಅವರು ಆರೋಪಿಸಿದರು. ಕರ್ನಾಟಕ ವನ್‌ ಕಚೇರಿಯ ನಿರ್ವಹಣೆ ಮಾಡುತ್ತಿದ್ದ ಹಿಂದಿನ ಸಂಸ್ಥೆ ಇಲ್ಲಿ ದುಡಿಯುವವರಿಗೆ ಸರಿಯಾಗಿ ವೇತನ ನೀಡದೆ ಸತಾಯಿಸುತ್ತಿದ್ದ ಸಂದರ್ಭದಲ್ಲಿಯೂ ನಾನು ಧ್ವನಿ ಎತ್ತಿದ್ದೆ. ಸಾರ್ವಜನಿಕರಿಗೆ ಪಾಲಿಕೆ ಕಚೇರಿಯಿಂದ ಹೊರಗಡೆ ವಿವಿಧ ರೀತಿಯ ಬಿಲ್‌ ಪಾವತಿ ಸೇರಿದಂತೆ ಸರ್ಕಾರಿ ಸೌಲಭ್ಯ ಪಡೆಯಲು ಅನುಕೂಲವಾಗುವಂತೆ ಈ ಪರಿಕಲ್ಪನೆ 14 ವರ್ಷಗಳ ಹಿಂದೆ ಆರಂಭಗೊಂಡಿತ್ತು.

ಕರ್ನಾಟಕ ವನ್‌ ಎಂದು ಹೆಸರು ಬದಲಾಗಿ ಹೊಸ ಗುತ್ತಿಗೆ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿದೆ. ಕದ್ರಿಯ ಈ ಕರ್ನಾಟಕ ವನ್‌ ಕಚೇರಿಯಲ್ಲಿನ ಎಸಿ ಹಾಳಾಗಿರುವ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಮೂರು ತಿಂಗಳಾದರೂ ಕ್ರಮವಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಸಾಮಾಜಿಕ ಹೋರಾಟಗಾರ ಜಿ.ಕೆ. ಭಟ್‌ ಪ್ರತಿಭಟನೆಗೆ ಸಾಥ್‌ ನೀಡಿದರು.

Share this article