ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಡೆಂಘೀ, ಚಿಕೂನ್ ಗುನ್ಯಾ, ಮಲೇರಿಯಾ ಮುಂತಾದ ರೋಗಗಳಿಗೆ ಕಾರಣವಾಗುವ ಸೊಳ್ಳೆಗಳ ಹರಡುವಿಕೆ ಮತ್ತು ಸೊಳ್ಳೆ ಉತ್ಪತ್ತಿ ತಡೆಯಲು ಲಾರ್ವಾಹಾರಿ ಗಪ್ಪಿ, ಗ್ಯಾಂಬೂಸಿಯ ಮೀನುಗಳನ್ನು ಬಳಸಲು ಆರೋಗ್ಯ ಇಲಾಖೆ ಮುಂದಾಗಿದೆ ಎಂದು ಪ್ರಭಾರಿ ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ಟಿ ಮಂಜುನಾಥ್ ಹೇಳಿದರು.ತಾಲೂಕಿನ ತಡಗವಾಡಿ ಗ್ರಾಮದ ಕಲ್ಯಾಣಿಯಲ್ಲಿ ಗಪ್ಪಿ, ಗ್ಯಾಂಬೂಸಿಯಾ ಮೀನುಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ನಿರಂತರವಾಗಿ ನೀರು ನಿಲ್ಲುವ ಕೆರೆ, ಕುಂಟೆ, ಬಾವಿ, ಕಲ್ಯಾಣಿ, ಕ್ವಾರಿ ಮುಂತಾದ ಶಾಶ್ವತ ನೀರಿನ ತಾಣಗಳಲ್ಲಿ ಈ ಮೀನುಗಳನ್ನು ಬಿಡಲಾಗುವುದು. ಸಾರ್ವಜನಿಕರ ಆರೋಗ್ಯದ ಮೇಲೆ ಪ್ರಭಾವ ಬೀರುವ ಸೊಳ್ಳೆಗಳ ನಿಯಂತ್ರಿಸಲು ಇದು ಸಹಕಾರಿಯಾಗಲಿದೆ. ಜೊತೆಗೆ ಸೊಳ್ಳೆಗಳ ಉತ್ಪತ್ತಿ ತಡೆಗಟ್ಟಬಹುದು ಎಂದರು.
ಈಗಾಗಲೇ ತಾಲೂಕಿನ ಮಹದೇವಪುರ, ಕೆ.ಆರ್.ಸಾಗರ, ಪಾಲಹಳ್ಳಿ, ಬೆಳಗೋಳ, ಕೆ.ಶೆಟ್ಟಹಳ್ಳಿ, ಟಿ.ಎಂ.ಹೊಸೂರು, ಜೊತೆಗೆ ಸಾರ್ವಜನಿಕ ಆಸ್ಪತ್ರೆ ಶ್ರೀರಂಗಪಟ್ಟಣ, ಸಮುದಾಯ ಆರೋಗ್ಯ ಕೇಂದ್ರ ಅರಕೆರೆ ಆರೋಗ್ಯ ಕೇಂದ್ರಗಳ ಆವರಣಗಳಲ್ಲಿ ತೊಟ್ಟಿ ನಿರ್ಮಿಸಿ ಗಪ್ಪಿ, ಗ್ಯಾಂಬೂಸಿಯ ಮೀನುಗಳನ್ನು ಪೋಷಿಸಲಾಗುತ್ತಿದೆ ಎಂದರು.ಸೊಳ್ಳೆಗಳ ಮರಿಗಳೆ ಈ ಮೀನುಗಳಿಗೆ ಆಹಾರವಾಗಿದ್ದು, ಇದರಿಂದ ಸೊಳ್ಳೆಗಳನ್ನು ನಿಯಂತ್ರಿಸಬಹುದು. ರೈತರು ತಮ್ಮ ಕೃಷಿ ಹೊಂಡದಲ್ಲಿ ಈ ಮೀನು ಬಳಕೆ ಮಾಡಬಹುದು. ಇಂದು ತಡಗವಾಡಿ ಕಲ್ಯಾಣಿ, ಬಳ್ಳೇಕೆರೆ ಕೆರೆ, ಹಂಗರಹಳ್ಳಿ ಕ್ವಾರಿ ಮುಂತಾದ ಕಡೆಗಳಲ್ಲಿ ಮೀನುಗಳನ್ನು ಬಿಡಲಾಗುವುದು ಎಂದರು.
ಈ ವೇಳೆ ತಡಗವಾಡಿ ಗ್ರಾಪಂ ಉಪಾಧ್ಯಕ್ಷ ರಘು, ಮುಖಂಡರಾದ ಬಳ್ಳಾರಿಗೌಡ, ಆನಂದ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ, ಸಮುದಾಯ ಆರೋಗ್ಯ ಅಧಿಕಾರಿ ನವೀನ್ ಕುಮಾರ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎನ್ ಕೃಷ್ಣೇಗೌಡ ಸೇರಿದಂತೆ ಇತರರು ಹಾಜರಿದ್ದರು.ಇಂದು ಉಚಿತ ಮೆಧುಮೇಹ ತಪಾಸಣೆ ಶಿಬಿರಹಲಗೂರು:ಚನ್ನಪಟ್ಟಣ ರಸ್ತೆಯ ಲಯನ್ಸ್ ಕ್ಲಬ್ನ ಆವರಣದಲ್ಲಿ ಆ.15ರಂದು ನ್ಯೂ ಡಯಾಕೇರ ಸೆಂಟರ್, ಪಾಲಿ ಕ್ಲಿನಿಕ್ ಹಾಗೂ ನವಾಯು ಕೇರ್ ಸೆಂಟರ್ ಸಹಯೋಗದೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯುವ ಶಿಬಿರಕ್ಕೆ ಬರುವ ಶಿಬಿರಾರ್ಥಿಗಳು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬರಬೇಕು ಶಿಬಿರದಲ್ಲಿ ವೈದಾಧಿಕಾರಿಗಳಾದ ಡಾ.ರೇಣುಕ ಪ್ರಸಾದ್, ಡಾ.ನವ್ಯ ಪ್ರಸಾದ್ ಹಾಗೂ ಲಯನ್ಸ್ ಸಂಸ್ಥೆಯ ಮೊದಲನೇ ರಾಜ್ಯಪಾಲರಾದ ಕೆ.ಎಲ್.ರಾಜಶೇಖರ್, ಲಯನ್ಸ್ ಡಾ.ವೈ.ಎಂ.ಶಿವಕುಮಾರ್ ಮಧುಮೇಹ ತಪಾಸಣೆ ನಡೆಸಲಿದ್ದಾರೆ. ಹೋಬಳಿಯ ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಅಧ್ಯಕ್ಷ ಎನ್.ಕೆ.ಕುಮಾರ್ ತಿಳಿಸಿದ್ದಾರೆ.