ದಾವಣಗೆರೆ: ಜನಸೇವೆ ಜನಪ್ರತಿನಿಧಿ ಪಡೆದ ನಾವೇ ಧನ್ಯರು. ಎಂಸಿಸಿ ಬಿ ಬ್ಲಾಕ್ ಇಡೀ ದಾವಣಗೆರೆಯಲ್ಲಿ ಮಾದರಿ ವಾರ್ಡ್ ಆಗಿಸುವಲ್ಲಿ ಮಹಾನಗರ ಪಾಲಿಕೆ ಸದಸ್ಯರಾಗಿದ್ದ ಜಿ.ಎಸ್. ಮಂಜುನಾಥ್ ಗಡಿಗುಡಾಳ್ ಕಾರ್ಯ ಶ್ಲಾಘನೀಯ ಮತ್ತು ಮಾದರಿಯಾಗಿದೆ ಎಂದು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಲಿಂಗಾರೆಡ್ಡಿ ಹೇಳಿದರು.
ಮಂಜುನಾಥ್ ಗಡಿಗುಡಾಳ್ ಸನ್ಮಾನ ಸ್ವೀಕರಿಸಿ ಮಾತನಾಡಿ, ವಾರ್ಡ್ ಜನರು ತೋರಿಸಿರುವ ಪ್ರೀತಿ, ನೀಡಿರುವ ಗೌರವಕ್ಕೆ ಸದಾ ಚಿರಋಣಿ. ಏಕೆಂದರೆ ಕಸ ವಿಲೇವಾರಿ, ಕೊರೋನಾ ಸಂಕಷ್ಟ, ವಾರ್ಡ್ ಸ್ವಚ್ಛವಾಗಿಟ್ಟುಕೊಳ್ಳುವಿಕೆ, ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಜನರೆಲ್ಲರ ಸಹಕಾರದಿಂದಲೇ ಇಷ್ಟೊಂದು ಅಭಿವೃದ್ಧಿ ಆಗಲು ಸಾಧ್ಯವಾಗಿದ್ದು. ಅವರ ನನ್ನ ಮೇಲೆ ಇಟ್ಟಿರುವ ನಂಬಿಕೆ ಹುಸಿಯಾಗಲು ಬಿಡುವುದಿಲ್ಲ ಎಂದು ಹೇಳಿದರು.
ರಾಜಕಾರಣಕ್ಕೆ ಬರಲು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರೇ ಪ್ರೇರಣೆ. ಮಲ್ಲಿಕಾರ್ಜುನ್ ನಾಯಕತ್ವ, ನೇರ ನುಡಿ, ಅಭಿವೃದ್ಧಿ ವಿಚಾರದಲ್ಲಿ ರಾಜಿಯಾಗದ, ದೂರದೃಷ್ಟಿತ್ವ, ಜನರ ಮೇಲಿರುವ ಕಾಳಜಿ, ಗುಣಮಟ್ಟದ ಕೆಲಸವೇ ಕಾರಣ. ನನಗೆ ಮಾತ್ರವಲ್ಲ, ಜಿಲ್ಲೆಯ ಎಲ್ಲಾ ಯುವ ನಾಯಕರು, ಹಿರಿಯ ನಾಯಕರಿಗೆ ಅವರೇ ಆದರ್ಶ ಎಂದು ತಿಳಿಸಿದರು.ಕಾಂಗ್ರೆಸ್ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಹ ವಾರ್ಡ್ ಸಮಗ್ರ ಅಭಿವೃದ್ಧಿಗೆ ಸಹಕಾರ, ಮಾರ್ಗದರ್ಶನ ನೀಡಿ, ಅನುದಾನ ಕೊಟ್ಟಿದ್ದಾರೆ. ಜನರಿಗಾಗಿ ಎಷ್ಟೋ ಅಭಿವೃದ್ಧಿ ಕೆಲಸಗಳನ್ನು ಕೊಟ್ಟಿದ್ದಾರೆ. ಜನರ ಆಶೋತ್ತರಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲರಿಗೂ ಒಳಿತು ಮಾಡುವ ಸಂಕಲ್ಪದಲ್ಲಿಯೇ ಮುನ್ನಡೆಯುತ್ತಿದ್ದಾರೆ. ಇದು ನಮಗೆಲ್ಲಾ ದಾರಿದೀಪ ಎಂದು ಹೇಳಿದರು.
ಚನ್ನಪ್ಪ, ಶಿವಣ್ಣ, ಕಡ್ಲಿ ಮತ್ತು ಎಲ್ಲ ನಾಗರೀಕರು ಮಂಜುನಾಥ್ ಗಡಿಗುಡಾಳ್ ಅವರನ್ನು ಸನ್ಮಾನಿಸಿದರು. ನಳಿನಿ ಚನ್ನಪ್ಪ ಪ್ರಾರ್ಥಿಸಿದರು. ಬಾಡಾ ಪ್ರಕಾಶ್ ಸ್ವಾಗತಿಸಿ, ಪ್ರೊ. ಗುರುಸ್ವಾಮಿ ವಂದಿಸಿದರು. ಗೌತಮ್ ಎಲ್.ಆರ್. ನಿರೂಪಿಸಿದರು. 10ನೇ ಕ್ರಾಸ್ನ ಎಲ್ಲ ಮನೆಯ ನಾಗರೀಕರು, ಮಹಿಳೆಯರು, ಯುವತಿಯರು, ಯುವಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.