ಕನ್ನಡಪ್ರಭ ವಾರ್ತೆ ತುಮಕೂರುಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಪ್ರಪಂಚದ ಬಹು ದೊಡ್ಡ ಅರ್ಥ ಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು ಎಂದು ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.ಹತ್ತು ವರುಷಗಳ ಕಾಲ ಭಾರತದ ಪ್ರಧಾನಿಯಾಗಿದ್ದರೂ ಅವರು ಪ್ರಧಾನಿ ಎಂಬ ಅಹಂನ್ನು ತಮ್ಮ ತನು, ಮನ, ಧನಗಳನ್ನು ತಲೆಗೇರಿಸಿಕೊಳ್ಳದೆ ಬದುಕಿದ ಮಹಾನುಭಾವರು ಎಂದರು.ಮನಮೋಹನ್ ಸಿಂಗ್ರವರು ಮೌನವ್ಯಾಖ್ಯಾನದಂತಿದ್ದರು. ಅವರು ಸಂತೆಯಲ್ಲಿದ್ದರೂ ಸಂತನಂತೆ ಬದುಕಿದರು ಎಂದು ಬಣ್ಣಿಸಿದರು.ಎಲ್ಲವನ್ನೂ ತಿಳಿದಿದ್ದರೂ ಏನೂ ತಿಳಿಯದಂತೆ ಬದುಕಿದವರು ಮನಮೋಹನ್ ಸಿಂಗ್ ಅವರು ದೇಶ ಕಂಡ ಅತ್ಯಂತ ಸಾಧು ಪ್ರಧಾನಿಯಾಗಿದ್ದರು ಎಂದಿದ್ದಾರೆ. ಇರುವೆಯಾದರೋ, ಅರಿಯದೆ ತನ್ನನ್ನು ತುಳಿದವರನ್ನು ಕಚ್ಚುತ್ತದೆ. ಅರಿವಿನ ಮೂರ್ತಿಯಾಗಿದ್ದರೂ, ತುಳಿಯುವುದು ಅರಿವಿಗೆ ಬಂದರೂ ಸಹ ಸಹಿಸಿಕೊಂಡು ಬದುಕಿದ ಪ್ರಧಾನಿ ಮನ್ಮೋಹನ ಸಿಂಗ್ರವರು ಸಹನೆಯ ಬೆಟ್ಟ ಎಂದಿದ್ದಾರೆ.
ಮನಮೋಹನ್ ಅಭಿವೃದ್ಧಿಯ ಚಿಂತನೆ ಮಾದರಿ: ಶಾಸಕ ಎಚ್.ವಿ.ವೆಂಕಟೇಶ್ಕನ್ನಡಪ್ರಭ ವಾರ್ತೆ ಪಾವಗಡ ಸರಳ ಸಜ್ಜನಿಕೆ ರಾಜಕಾರಣಿ, ಅಭಿವೃದ್ಧಿಯ ಹರಿಕಾರ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನದ ವಿಷಯ ಅತ್ಯಂತ ನೋವು ತಂದಿದೆ. ರಾಷ್ಟ್ರ ಅಭಿವೃದ್ಧಿಯ ಚಿಂತನೆ ಮಾದರಿಯಾಗಿದ್ದು ಒಬ್ಬ ದೂರದೃಷ್ಟಿಯುಳ್ಳ ಚೇತನರನ್ನು ಕಳೆದುಕೊಂಡಾಂತಾಗಿದೆ ಎಂದು ಶಾಸಕ ಎಚ್.ವಿ.ವೆಂಕಟೇಶ್ ಕಂಬನಿ ಮಿಡಿದಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ರಾಷ್ಟ್ರಕಂಡ ಆರ್ಥಿಕ ತಜ್ಞ. ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳವರಾದ ಡಾ.ಮನಮೋಹನ್ ಸಿಂಗ್ ಅವರ ಕ್ರೀಯಾಶೀಲ ವ್ಯಕ್ತಿತ್ವ ಹಾಗೂ ಅಭಿವೃದ್ಧಿ ವಿಚಾರದಲ್ಲಿ ರಾಷ್ಟ್ರಕ್ಕೆ ನೀಡಿದ ಕೊಡುಗೆ ಅಪಾರ. ಕಲ್ಯಾಣ ನೀತಿಗಳು ಜನಮನದಲ್ಲಿ ಶಾಶ್ವತವಾಗಿ ಉಳಿಯಲಿವೆ. ಅವರ ಅಭಿವೃದ್ಧಿ ಕಾರ್ಯಗಳು ಇತಿಹಾಸದಲ್ಲಿ ದಾಖಲೆಯಾಗಲಿದ್ದು, ಅವರ ಆದರ್ಶ ಹಾಗೂ ಅಭಿವೃದ್ಧಿ ಪರ ಚಿಂತನೆ ನಮಗೆ ಸದಾ ಸ್ಫೂರ್ತಿದಾಯಕ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.ಮಾಜಿ ಸಚಿವ ವೆಂಕಟರಮಣಪ್ಪ ತಮ್ಮ ಶೋಕ ಸಂದೇಶದಲ್ಲಿ, ಅವರೊಬ್ಬ ಸರಳ ಸಜ್ಜನಿಕೆ ಹಾಗೂ ಸೌಮ್ಯ ಸ್ವಭಾವ ವ್ಯಕ್ತಿತ್ವ ಹೊಂದಿದ್ದರು. ಮಾತಿಗಿಂತ ತನ್ನ ಕ್ರಿಯಾಶೀಲತೆ ಮೂಲಕ ಅನೇಕ ಯೋಜನೆ ಜಾರಿಗೆ ತಂದು ರಾಷ್ಟ್ರದ ಕಲ್ಯಾಣಕ್ಕಾಗಿ ಶ್ರಮಿಸಿದವರು. ಅವರ ಆದರ್ಶ ಹಾಗೂ ಅಭಿವೃದ್ಧಿ ಪರ ಚಿಂತನೆ ಯುವಕರಿಗೆ ಹಾಗೂ ಇಂದಿನ ರಾಜಕಾರಣಿಗಳಿಗೆ ಪ್ರೇರಣೆಯಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಪಾವಗಡ ತಾಲೂಕು ಕಾಂಗ್ರೆಸ್ ನಗರಾಧ್ಯಕ್ಷ ಸುದೇಶ್ ಸಹ ಸಂತಾಪ ಸೂಚಿಸಿದ್ದು, ಜನ ಕಲ್ಯಾಣಕ್ಕೆ ಮಾತಿಗಿಂತ ವ್ಯಕ್ತಿತ್ವ ಕೆಲಸ ಮಾಡಿ ರಾಷ್ಟ್ರಕ್ಕೆ ಮಾದರಿಯಾಗಿದ್ದರು. ಅವರ ನಿಧನದಿಂದ ರಾಷ್ಟ್ರ ಹಾಗೂ ರಾಜ್ಯಕ್ಕೆ ಅಪಾರ ನಷ್ಟವಾಗಿದೆ.ಅವರ ಅತ್ಮಕ್ಕೆ ಭಗವಂತ ಶಾಂತಿ ದಯಪಾಲಿಸಲಿ ಎಂದು ಹೇಳಿದ್ದಾರೆ. ಮುಖಂಡರಾದ ಎಂ.ಶಂಕರರೆಡ್ಡಿ,ಪುರಸಭೆ ಅಧ್ಯಕ್ಷ ಪಿ.ಎಚ್.ರಾಜೇಶ್,ತೆಂಗಿನಕಾಯಿ ರವಿ,ಕೆಪಿಸಿಸಿ ಅಲ್ಪ ಸಂಖ್ಯಾತರ ರಾಜ್ಯ ಘಟಕದ ಕಾರ್ಯದರ್ಶಿ ಷಾಬಾಬು,ನಗರ ಘಟಕದ ಅಧ್ಯಕ್ಷ ರಿಜ್ವಾನ್ ಉಲ್ಲಾ,ಗುಮ್ಮಘಟ್ಟ ಶ್ರೀನಿವಾಸಲು,ಈಶ್ವರ ಹಾಗೂ ಇತರೆ ಅನೇಕ ಮಂದಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಾಜಿ ಪ್ರದಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ.