ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾ ಮರಾಠ-ಮರಾಟಿ ಸಮಾಜ ಸೇವಾ ಸಂಘ, ಮಹಿಳಾ ವೇದಿಕೆ ಮತ್ತು ಯುವ ವೇದಿಕೆಯ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಕಾಸರಗೋಡಿನ ನಿವೃತ್ತ ಹಿರಿಯ ಮಕ್ಕಳ ತಜ್ಞ ಡಾ.ಬಿ.ನಾರಾಯಣ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಮೊಬೈಲ್ ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಿನ ನೀರನ್ನು ಸೇವಿಸಬೇಕು ಎಂದು ಸಲಹೆ ನೀಡಿದರು.ಬೆಂಗಳೂರಿನ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಯ ಮುಖ್ಯ ವಿಜ್ಞಾನಿ ಎಂ.ಟಿ.ಶೋಭಾವತಿ ಅವರು ಮಾತನಾಡಿ, 85 ಸದಸ್ಯರಿಂದ ಸ್ಥಾಪನೆಯಾದ ಸಂಘದ ಸದಸ್ಯತ್ವವನ್ನು 763ಕ್ಕೆ ಹೆಚ್ಚಿಸಿದ ಆಡಳಿತ ಮಂಡಳಿಯ ಶ್ರಮ ಶ್ಲಾಘನೀಯವೆಂದರು.
ಸಂಘದ ಹಿರಿಯ ಪದಾಧಿಕಾರಿ ಬಿ.ಎ.ಗಣೇಶ್ ಮಾತನಾಡಿ, ಸಂಘ ಸ್ಥಾಪನೆಯಾದ ರೀತಿಯನ್ನು ಮೆಲುಕು ಹಾಕಿದರು. ಸಂಘ ಸ್ಥಾಪನೆಗೆ ಶ್ರಮಿಸಿದ ಹಿರಿಯರನ್ನ ಸ್ಮರಿಸಬೇಕು. ಸ್ವಜಾತಿ ಸಮಾಜ ಬಾಂಧವರು ಅಂತರ್ಜಾತಿ ವಿವಾಹಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು. ಸಂಘದ ಆಡಳಿತ ಮಂಡಳಿ ಇನ್ನೂ ಹೆಚ್ಚಿನ ಸಮಾಜ ಸೇವಾ ಕಾರ್ಯವನ್ನು ಸಂಘದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಂಘದ ಎಲ್ಲಾ ಉಪಸಮಿತಿಯ ಅಧ್ಯಕ್ಷರು ಹಾಗೂ ಸಂಘಟನಾ ಕಾರ್ಯದರ್ಶಿಗಳು ಸಂಘಟನೆಗಾಗಿ ಹೆಚ್ಚಿನ ಶ್ರಮ ವಹಿಸಬೇಕೆಂದ ಅವರು, ಸಂಘದ ಏಳಿಗೆಗಾಗಿ ದುಡಿದ ಹಿರಿಯರನ್ನು ಸ್ಮರಿಸಿ, ಅವರ ಮಾರ್ಗದರ್ಶನದಲ್ಲಿ ಸಂಘವನ್ನು ಮುನ್ನಡೆಸುವುದಾಗಿ ತಿಳಿಸಿದರು.
ಸಂಘದ ಉಪಾಧ್ಯಕ್ಷರಾದ ಜಿ.ಆರ್.ದೇವಕಿ ನಾಯ್ಕ್, ಯುವ ವೇದಿಕೆ ಅಧ್ಯಕ್ಷ ಎಂ.ಆರ್.ಮೋಹನ, ಮಹಿಳಾ ವೇದಿಕೆ ಅಧ್ಯಕ್ಷರಾದ ರತ್ನಮಂಜರಿ ನರಸಿಂಹ, ಕಟ್ಟಡ ಸಮಿತಿ ಅಧ್ಯಕ್ಷ ಎಂ.ಟಿ.ಗುರುವಪ್ಪ, 2ನೇ ಮೊಣ್ಣಂಗೇರಿ ಉಪಸಮಿತಿ ಅಧ್ಯಕ್ಷ ಎಂ.ಎಸ್.ವೆಂಕಪ್ಪ ಉಪಸ್ಥಿತರಿದ್ದರು. ಹರ್ಷಿತಾ ಮಂಜುನಾಥ್ ಪ್ರಾರ್ಥಿಸಿ, ಸಂಘದ ಸಹ ಕಾರ್ಯದರ್ಶಿ ಎ.ಎಂ.ನರಸಿಂಹ ಸ್ವಾಗತಿಸಿ, ಯುವ ವೇದಿಕೆ ಅಧ್ಯಕ್ಷ ಎಂ.ಆರ್.ಮೋಹನ ವಂದಿಸಿದರು.ಸಂಘದ ಹಂಗಾಮಿ ಕಾರ್ಯದರ್ಶಿ ಹೂವಮ್ಮ 2023-24ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿದರು. ಸಭೆಯ ಅನುಮೋದನೆಯ ಬಳಿಕ ಸಂಘದ ಯುವ ವೇದಿಕೆ ಕಾರ್ಯದರ್ಶಿ ಎಂ.ಕೆ.ಸಂತೋಷ್ ಯುವ ವೇದಿಕೆಯ 2023-24ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಮಂಡನೆ ಮಾಡಿದರು.
ನಂತರ ಸಂಘದ ಹಿರಿಯ ಪದಾಧಿಕಾರಿಗಳಾದ ಬಿ.ಎ.ಗಣೇಶ್, ಬಾಲಕೃಷ್ಣ, ಪಿ.ಎಸ್.ತಿಮ್ಮಪ್ಪ ನಾಯ್ಕ್ ಹಾಗೂ ವಿಶೇಷ ಪ್ರತಿಭೆ ನಾಗರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನೂತನ ಪದಾಧಿಕಾರಿಗಳ ಆಯ್ಕೆ :2024-25ರ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಎಂ.ಎಂ.ಪರಮೇಶ್ವರ್, ಉಪಾಧ್ಯಕ್ಷರಾಗಿ ಜಿ.ಆರ್.ದೇವಕಿ ನಾಯ್ಕ್, ಕಾರ್ಯದರ್ಶಿಯಾಗಿ ಹೂವಮ್ಮ, ಖಜಾಂಚಿಯಾಗಿ ಎಂ.ಎಸ್.ಕಾಂತಿ ಹಾಗೂ ಸಹಕಾರ್ಯದರ್ಶಿಯಾಗಿ ಎಂ.ಪಿ.ನವೀನ್ ಆಯ್ಕೆಯಾದರು. ನಾಲ್ವರು ಸಂಘಟನಾ ಕಾರ್ಯದರ್ಶಿಗಳು ಹಾಗೂ 12 ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಂಘದ ಸಮಾಜ ಬಾಂಧವರಿಂದ 25 ಸಾವಿರ ರು. ಕಟ್ಟಡ ನಿಧಿಯನ್ನು ಸ್ವೀಕರಿಸಲಾಯಿತು. ಮೂವರು ಅಜೀವ ಸದಸ್ಯರನ್ನು ನೋಂದಾಯಿಸಿಕೊಳ್ಳಲಾಯಿತು.
ಕ್ರೀಡಾಕೂಟ: ಯುವ ವೇದಿಕೆ ಅಧ್ಯಕ್ಷ ಎಂ.ಆರ್.ಮೋಹನ ಹಾಗೂ ಕಾರ್ಯದರ್ಶಿ ಎಂ.ಕೆ.ಸಂತೋಷ್ ಮುಂದಾಳತ್ವದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು.
ಸಂಜೆ ಸಮಾಜ ಬಾಂಧವರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಣೀಯವಾಗಿ ಮೂಡಿ ಬಂತು. ಕಾರ್ಯಕ್ರಮದಲ್ಲಿ ಗೋಣಿಕೊಪ್ಪ, ಚೆನ್ನಂಗೊಲ್ಲಿ, ಕಾನೂರು, ಹುಲಿತಾಳ ಮತ್ತು 2ನೇ ಮೊಣ್ಣಂಗೇರಿ ಗ್ರಾಮದ ಮಕ್ಕಳು ಭಾಗವಹಿಸಿದ್ದರು.