ಹುಬ್ಬಳ್ಳಿ:
ನಗರದಲ್ಲಿ ಗುತ್ತಿಗೆದಾರರ ಸಂಘದ ಸಭೆ ನಡೆಸಿದ ರಾಜ್ಯಾಧ್ಯಕ್ಷ ಆರ್. ಮಂಜುನಾಥ, ಬಳಿಕ ಸುದ್ದಿಗೋಷ್ಠಿ ನಡೆಸಿ ಬಿಲ್ ಮಾಡದೇ ಇರುವುದಕ್ಕೆ ಸರ್ಕಾರದ ವಿರುದ್ಧ ಕಿಡಿಕಾರಿದರು.
ಮೂರು ವರ್ಷದಿಂದ ಬಿಲ್ ಬಾಕಿಯುಳಿಸಿಕೊಂಡಿದೆ. ಈ ಬಗ್ಗೆ ಹಲವು ಬಾರಿ ಮುಖ್ಯಮಂತ್ರಿಗಳ ಗಮನಕ್ಕೆ ತಂದರೂ ಬಾಕಿ ಹಣ ಮಾತ್ರ ಬಿಡುಗಡೆ ಮಾಡುತ್ತಿಲ್ಲ. ಸಾಲ ಮಾಡಿ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ವಿಷ ಕುಡಿಯುವ ಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಮಾ. 6ರಂದು ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೇವೆ. 25ರಿಂದ 30 ಸಾವಿರ ಗುತ್ತಿಗೆದಾರರು ಅಂದಿನ ಪ್ರತಿಭಟನೆಯಲ್ಲಿ ಸೇರುವ ನಿರೀಕ್ಷೆಯಿದೆ ಎಂದರು.ಎಷ್ಟೆಷ್ಟು ಬಾಕಿ?:
ಜಲ ಸಂಪನ್ಮೂಲ ಇಲಾಖೆ ₹13,000 ಕೋಟಿ, ಲೋಕೋಪಯೋಗಿ ಇಲಾಖೆ ₹8,370 ಕೋಟಿ, ಗ್ರಾಮೀಣ ಅಭಿವೃದ್ಧಿ ಇಲಾಖೆ ₹3,800 ಕೋಟಿ, ಸಣ್ಣ ನೀರಾವರಿ ಇಲಾಖೆ ₹3,000 ಕೋಟಿ, ನಗರಾಭಿವೃದ್ಧಿ ಇಲಾಖೆ ₹2,000 ಕೋಟಿ, ವಸತಿ ಮತ್ತು ವಕ್ಫ್ ಇಲಾಖೆ ₹ 2,600 ಕೋಟಿ, ಬಿಬಿಎಂಪಿ ₹ 1,600 ಕೋಟಿ. ಹಾಗೂ ಕಾರ್ಮಿಕ ಇಲಾಖೆಯಿಂದ ₹2,000 ಕೋಟಿ ಬಾಕಿ ಬರಬೇಕಿದೆ ಎಂದು ಅವರು ವಿವರಿಸಿದರು.ಪ್ಯಾಕೇಜ್:
ಹಿಂದೆ ವಿಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಅವರು, ನಾವು ಅಧಿಕಾರಕ್ಕೆ ಬಂದರೆ ಪ್ಯಾಕೇಜ್ ಮಾಡಲ್ಲ ಎಂದಿದ್ದರು. ಆದರೆ, ಈಗಲೂ ಪ್ಯಾಕೇಜ್ ವ್ಯವಸ್ಥೆ ಮುಂದುವರೆದಿದೆ. ಸಚಿವ ಸಂಪುಟ ಸಭೆಯಲ್ಲೇ ಕಾಮಗಾರಿಗಳ ಟೆಂಡರ್ ಸಂಬಂಧ ಮ್ಯಾಚ್ ಫಿಕ್ಸಿಂಗ್ ಆಗುತ್ತಿದೆ. ₹100, ₹ 200 ಕೋಟಿಗಳ ಪ್ಯಾಕೇಜ್ ಮಾಡಿ ಹೊರರಾಜ್ಯದ ಗುತ್ತಿಗೆದಾರರಿಗೆ ಕೆಲಸ ಕೊಡಲಾಗುತ್ತಿದೆ. ಹಣ ಇಲ್ಲದ ಕಾಮಗಾರಿಗಳು ಮಾತ್ರ ನಮಗೆ ಲಭಿಸುತ್ತಿವೆ. ಇದನ್ನು ಕೈ ಬಿಡುವಂತೆ ಕೋರಿದ್ದೇವೆ. ಮುಖ್ಯಮಂತ್ರಿಗಳು ಈ ವರೆಗೂ ಗುತ್ತಿಗೆದಾರರೊಂದಿಗೆ ಒಂದೂ ಸಭೆ ಮಾಡಿಲ್ಲ. ಹೀಗಾಗಿ, ಸರ್ಕಾರದ ಗಮನ ಸೆಳೆಯಲು ಮಾ. 6ರಂದು ಕಾಮಗಾರಿ ಬಂದ್ ಮಾಡಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಿದ್ದೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಗುರುಸಿದ್ದಪ್ಪ ಬಿ.ಎಸ್, ಎಂ.ಕೆ. ಮುಲ್ಲಾ, ಕಾರ್ಯಾಧ್ಯಕ್ಷ ಸುರೇಶ ಭೂಮರಡ್ಡಿ, ಬಿ.ಸಿ. ದಿನೇಶ, ಧಾರವಾಡ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಂ.ಎಸ್. ಸಂಕಾಗೌಡಶಾನಿ ಸೇರಿದಂತೆ ಹಲವರಿದ್ದರು.
ಕಮಿಷನ್ ಇಲ್ಲದೇ ಕೆಲಸವೇ ಇಲ್ಲಕಮಿಷನ್ ಕುರಿತು ಪ್ರತಿಕ್ರಿಯಿಸಿದ ಆರ್. ಮಂಜುನಾಥ, ಕಮಿಷನ್ ಇರುವುದು ನಿಜ. ಹಿಂದಿನ ಸರ್ಕಾರಕ್ಕಿಂತ ಈ ಸರ್ಕಾರದಲ್ಲಿ ಹೆಚ್ಚಿನ ಕಮಿಷನ್ ಕೊಡಬೇಕಿದೆ. ಕಾಮಗಾರಿಗೆ ಸಂಬಂಧಿಸಿದಂತೆ ಕಾರ್ಯಾದೇಶ ಗುತ್ತಿಗೆದಾರನ ಕೈ ಸೇರಿದರೂ, ಸಂಬಂಧಪಟ್ಟ ಕೆಲ ಶಾಸಕ, ಸಚಿವರಿಗೆ ಕಮಿಷನ್ ನೀಡುವ ವರೆಗೆ ಅವರು ಭೂಮಿ ಪೂಜೆಗೆ ಬರುವುದಿಲ್ಲ. ಕಮಿಷನ್ ಹಣ ಜಮೆ ಮಾಡಲು ಸಮಯ ಬೇಕಾಗುತ್ತದೆ. ಹೀಗಾಗಿ ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸುವುದು ಕಷ್ಟವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬ್ಲ್ಯಾಕ್ ಮೇಲ್ ಮಾಡುತ್ತಿಲ್ಲ‘ಬಾಕಿ ಬಿಲ್ ಪಾವತಿ ಕುರಿತಾಗಿ ಗುತ್ತಿಗೆದಾರರ ಯಾವುದೇ ಬ್ಲ್ಯಾಕ್ ಮೇಲ್ ಅಥವಾ ಬೆದರಿಕೆಗೆ ನಾವು ಹೆದರಲ್ಲ’ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಆರ್. ಮಂಜುನಾಥ, ‘‘ನಾವು ಬೆದರಿಕೆ ಅಥವಾ ಬ್ಲ್ಯಾಕ್ ಮೇಲ್ ಮಾಡುವಷ್ಟು ದೊಡ್ಡವರಲ್ಲ. ರಾಜ್ಯದ 1.5 ಲಕ್ಷ ಗುತ್ತಿಗೆದಾರರ ಹಿತ ಕಾಯುವುದೇ ನಮ್ಮ ಉದ್ದೇಶ. ಮಾಡಿದ ಕೆಲಸಕ್ಕೆ ಕೂಲಿ ಕೇಳುವುದು ತಪ್ಪಲ್ಲ. ಈ ಸಂಬಂಧ ಡಿ.ಕೆ. ಶಿವಕುಮಾರ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ್ದೇವೆ. ಕೈಲಾದಷ್ಟು ಸಹಾಯ ಮಾಡುವ ಭರವಸೆ ನೀಡಿದ್ದಾರೆ ಎಂದು ವಿವರಿಸಿದರು.