ಕೆಪಿಸಿಸಿ ಅಧ್ಯಕ್ಷನಾಗಿ ಮಾರ್ಚ್‌ಗೆ 6ವರ್ಷ, 100 ಕಾಂಗ್ರೆಸ್‌ ಕಚೇರಿ: ಡಿಕೆ

KannadaprabhaNewsNetwork |  
Published : Feb 07, 2026, 03:15 AM IST
ಪೂಜಾರಿ-ಡಿಕೆಶಿ ಭೇಟಿ  | Kannada Prabha

ಸಾರಾಂಶ

ಮಾರ್ಚ್ 10ಕ್ಕೆ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಆರು ವರ್ಷ ಪೂರ್ಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷದ ನೂರು ಕಚೇರಿಗಳಿಗೆ ಶಂಕುಸ್ಥಾಪನೆ ಮಾಡಲು ನಿರ್ದೇಶನ ನೀಡುತ್ತಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು:

ಮಾರ್ಚ್ 10ಕ್ಕೆ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಆರು ವರ್ಷ ಪೂರ್ಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷದ ನೂರು ಕಚೇರಿಗಳಿಗೆ ಶಂಕುಸ್ಥಾಪನೆ ಮಾಡಲು ನಿರ್ದೇಶನ ನೀಡುತ್ತಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಪುತ್ತೂರಲ್ಲಿ ಶುಕ್ರವಾರ ಕಾಂಗ್ರೆಸ್ ಭವನದ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಪುತ್ತೂರಲ್ಲಿ ಕಾಂಗ್ರೆಸ್ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದೇನೆ. ಮಾರ್ಚ್ 10ಕ್ಕೆ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಆರು ವರ್ಷ ಪೂರ್ಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸುತ್ತಿದ್ದೇನೆ. ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷದ ನೂರು ಕಚೇರಿಗಳಿಗೆ ಶಂಕುಸ್ಥಾಪನೆ ಮಾಡಲು ನಿರ್ದೇಶನ ನೀಡುತ್ತಿದ್ದೇನೆ. ಎಐಸಿಸಿಯವರು ದಿನಾಂಕ ಕೊಡಲಿ, ಬಿಡಲಿ. ನಾನಂತೂ ಎಲ್ಲ ಸಿದ್ಧತೆ ಮಾಡಿಕೊಂಡು ಪ್ರಾರಂಭ ಮಾಡುತ್ತೇನೆ ಎಂದರು. ಮಾಜಿ ಸಚಿವ ರಮಾನಾಥ ರೈ, ಮುಖಂಡ ಇನಾಯತ್ ಆಲಿ ಇದ್ದರು.ಅತಿ ಶೀಘ್ರವೇ ಡಿಕೆಶಿ ಸಿಎಂ ಆಗುವ ವಿಶ್ವಾಸವಿದೆ:

ಅತಿ ಶೀಘ್ರದಲ್ಲೇ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ವಿಶ್ವಾಸವಿದೆ. ಇದೇ ಅವಧಿಯಲ್ಲಿ ಅವರು ಸಿಎಂ ಆಗಲಿದ್ದಾರೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದರು.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯತೀಂದ್ರ ಅವರು ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ, ಡಿಕೆಶಿ ಸಿಎಂ ಆಗುವ ಕುರಿತು ಈ ಹಿಂದೆ ನಾನು ಎರಡು ಡೇಟ್ ಕೊಟ್ಟಿದ್ದೆ. ಅದು ಫೇಲ್ ಆಗಿತ್ತು. ಮೂರನೇ ಡೇಟ್ ಫೇಲ್ ಆಗುವ ತರಹ ಕೊಡಲ್ಲ. ಶೀಘ್ರದಲ್ಲೇ ಮೂರನೇ ಡೇಟ್ ಕೊಡುತ್ತೇನೆ. ಅದು ಫೇಲ್ ಆಗಲ್ಲ ಎಂದರು. ಡಿ.ಕೆ.ಶಿವಕುಮಾರ್ ಅವರಿಗೆ ಒಂದು ಅವಕಾಶ ಕೊಡಬೇಕು. ಪಕ್ಷದ ಅಧ್ಯಕ್ಷರಾಗಿ ಅವರ ಹೋರಾಟ, ಶ್ರಮದಿಂದ ಕಾಂಗ್ರೆಸ್ ಸರ್ಕಾರ ಬಂದಿದೆ. ನಾವೆಲ್ಲರೂ ಅವರ ಬೆಂಬಲಕ್ಕೆ ನಿಂತಿದ್ದೇವೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.ನೀವೂ ಸಿಎಂ ಆಗಬೇಕು:

‘ನೀವು ಕೂಡ ಪಕ್ಷವನ್ನು ಕಟ್ಟಿದವರು, ಮುಂದಿನ ದಿನಗಳಲ್ಲಿ ನೀವೂ ಕೂಡ ಮುಖ್ಯಮಂತ್ರಿಯಾಗಬೇಕು, ಮುಖ್ಯಮಂತ್ರಿಯಾಗುತ್ತೀರಿ...’ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಆಶೀರ್ವದಿಸಿದ್ದಾರೆ.ಮಂಗಳೂರಿನ ಬಿ.ಸಿ.ರೋಡಿನಲ್ಲಿರುವ ಜನಾರ್ದನ ಪೂಜಾರಿಯವರ ನಿವಾಸಕ್ಕೆ ಶುಕ್ರವಾರ ಭೇಟಿ‌ ನೀಡಿದ‌ ಡಿ.ಕೆ.ಶಿವಕುಮಾರ್, ಪೂಜಾರಿಯವರ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾತನಾಡಿದ ಪೂಜಾರಿ, ನೆರೆದ ಕಾಂಗ್ರೆಸ್ ಮುಖಂಡರಲ್ಲಿ ‘ಡಿಕೆಶಿಯವರು ಮುಖ್ಯಮಂತ್ರಿ ಆಗಬೇಕೇ, ಬೇಡವೇ?’ ಎಂದು ಕೇಳಿದರು. ಎಲ್ಲರೂ ‘ಆಗಬೇಕು’ ಎಂದು ಪ್ರತಿಕ್ರಿಯಿಸಿದರು. ಆಗ ಪೂಜಾರಿ, ‘ಮುಂದಿನ ದಿನಗಳಲ್ಲಿ ನೀವು ಮುಖ್ಯಮಂತ್ರಿ ಆಗುತ್ತೀರಿ’ ಎಂದು ಆಶೀರ್ವದಿಸಿದರು. ಮಾಜಿ ಸಚಿವರಾದ ರಮಾನಾಥ ರೈ, ವಿನಯಕುಮಾರ್ ಸೊರಕೆ, ಪ್ರಮುಖರಾದ ಮಮತಾ ಗಟ್ಟಿ, ಪದ್ಮರಾಜ್ ಆರ್. ಪೂಜಾರಿ, ಹರೀಶ್ ಕುಮಾರ್, ಇನಾಯತ್ ಆಲಿ, ಬೇಬಿ ಕುಂದರ್ ಮತ್ತಿತರರು ಜತೆಗಿದ್ದರು.ಬಳಿಕ, ಪುತ್ತೂರಲ್ಲಿ ನಡೆದ ಕಾಂಗ್ರೆಸ್ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಪುತ್ತೂರು ಕಾಂಗ್ರೆಸ್ ಮುಖಂಡ ಹೇಮನಾಥ ಶೆಟ್ಟಿ, ‘ಸದ್ಯದಲ್ಲೇ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗ್ತಾರೆ’ ಎಂದರು. ‘ನೀವು ಸಿಎಂ ಆದ ತಕ್ಷಣ ಶಾಸಕ ಆಶೋಕ್ ಕುಮಾರ್ ರೈ ಗೆ ಪ್ರಮುಖ ಮಂತ್ರಿ ಸ್ಥಾನ ನೀಡಿ, ಜಿಲ್ಲಾ ಉಸ್ತುವಾರಿ ಹುದ್ದೆ ನೀಡಿ’ ಎಂದು ಡಿಕೆಶಿಗೆ ಮನವಿ ಮಾಡಿದರು.ಬಳಿಕ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ‘ಡಿ.ಕೆ.ಶಿವಕುಮಾರ್ ಗೆ ಸಿಎಂ ಆಗಲು ಇನ್ನು ಒಂದು ಸ್ಟೆಪ್ ಮಾತ್ರ ಬಾಕಿ ಇದೆ’ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಷ್ಟ್ರೀಯ ಹೆದ್ದಾರಿಯಲ್ಲಿ ಲೇನ್‌ ನಿಯಮ ಉಲ್ಲಂಘಿಸಿದರೆ ದಂಡ
ಹಿಂದೂಗಳ ಭಾವನೆಗೆ ಧಕ್ಕೆ: ಯುವಕನ ಗಡಿಪಾರು ಮಾಡಲು ಆಗ್ರಹ