ಮರಿಯಮ್ಮನಹಳ್ಳಿಗೆ ಈಡೇರದ ವಿಜ್ಞಾನ ಕಾಲೇಜು ಕನಸು

KannadaprabhaNewsNetwork |  
Published : Dec 09, 2025, 01:45 AM IST
ಫೋಟೋವಿವರ-(8ಎಂಎಂಎಚ್‌1)   ಮರಿಯಮ್ಮನಹಳ್ಳಿಗೆ ಪಿಯುಸಿ ವಿಜ್ಞಾನ ವಿಭಾಗ ಬೇಕಾಗಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು | Kannada Prabha

ಸಾರಾಂಶ

ಜಾಗತೀಕರಣದ ಪರಿಣಾಮವಾಗಿ ವಿಜ್ಞಾನ ಶಿಕ್ಷಣ ಮುನ್ನೆಲೆಗೆ ಬಂದಿರುವ ಇವತ್ತಿನ ದಿನಮಾನದಲ್ಲಿ ಮರಿಯಮ್ಮನಹಳ್ಳಿ ಹೋಬಳಿಯ ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕಗೆ ಅವಕಾಶವೇ ಇಲ್ಲದಿರುವುದು ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಬೇಸರ ಮೂಡಿಸಿದೆ.

ಸಿ.ಕೆ. ನಾಗರಾಜ

ಮರಿಯಮ್ಮನಹಳ್ಳಿ: ಜಾಗತೀಕರಣದ ಪರಿಣಾಮವಾಗಿ ವಿಜ್ಞಾನ ಶಿಕ್ಷಣ ಮುನ್ನೆಲೆಗೆ ಬಂದಿರುವ ಇವತ್ತಿನ ದಿನಮಾನದಲ್ಲಿ ಮರಿಯಮ್ಮನಹಳ್ಳಿ ಹೋಬಳಿಯ ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕಗೆ ಅವಕಾಶವೇ ಇಲ್ಲದಿರುವುದು ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಬೇಸರ ಮೂಡಿಸಿದೆ.

ಮರಿಯಮ್ಮನಹಳ್ಳಿ ಪಟ್ಟಣದ ಪದವಿಪೂರ್ವ ಕಾಲೇಜಿಗೆ ವಿಜ್ಞಾನ ವಿಭಾಗ ಮಂಜೂರು ಮಾಡಬೇಕು ಎಂಬ ಬೇಡಿಕೆ ಕಳೆದ 25 ವರ್ಷಗಳಿಂದಲೂ ಈಡೇರಿಲ್ಲ. ಮರಿಯಮ್ಮನಹಳ್ಳಿಯಲ್ಲಿ ವಿಜ್ಞಾನ ವಿಭಾಗವಿಲ್ಲದ ಕಾರಣ ಪಿಯುಸಿಯಲ್ಲಿ ವಿಜ್ಞಾನ ಶಿಕ್ಷಣ ಪಡೆಯಲು ಹೊಸಪೇಟೆ, ಹಗರಿಬೊಮ್ಮನಹಳ್ಳಿ ಅಥವಾ ಕೂಡ್ಲಿಗಿಗೆ ತೆರಳಬೇಕಿದೆ. ಹೀಗೆ ದೂರದ ಊರುಗಳಿಗೆ ತೆರಳಲು ಸಾಧ್ಯವಾಗದ ಅನೇಕ ಬಡವಿದ್ಯಾರ್ಥಿಗಳು ಮತ್ತು ಬಹುತೇಕ ಹೆಣ್ಣು ಮಕ್ಕಳು ವಿಜ್ಞಾನ ಶಿಕ್ಷಣದಿಂದ ವಂಚಿತರಾಗಿ ಕಲಾ ವಿಭಾಗದಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳುವಂತಹ ಅನಿವಾರ್ಯತೆ ಉಂಟಾಗಿದೆ.

ಹೋಬಳಿ ಕೇಂದ್ರವೂ ಆಗಿರುವ ಮರಿಯಮ್ಮನಹಳ್ಳಿ ಪಟ್ಟಣಕ್ಕೆ ಸುಮಾರು 33 ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಪಟ್ಟಣದಲ್ಲಿಯೇ ಒಟ್ಟು 8 ಪ್ರೌಢಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಪಕ್ಕದ ಗ್ರಾಮಗಳಾದ ಡಣಾಪುರ, ಸ್ಮಯೋರ್‌, ವ್ಯಾಸನಕೆರೆ, ಚಿಲಕನಹಟ್ಟಿ, ತೆಲುಗುಬಾಳು, ತಿಮ್ಮಲಾಪುರ, ಪೋತಲಕಟ್ಟೆ ಗ್ರಾಮಗಳಲ್ಲಿಯೂ ಪ್ರೌಢಶಾಲೆಗಳಿವೆ.

ಮರಿಯಮ್ಮನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಪ್ರೌಢಶಾಲೆಗಳಿಂದ ಪ್ರತಿವರ್ಷ ಸುಮಾರು ಸಾವಿರ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಗಾರುತ್ತಾರೆ. ಮರಿಯಮ್ಮನಹಳ್ಳಿಯಲ್ಲಿ ಉತ್ತಮ ಗುಣಮಟ್ಟದ ಪದವಿಪೂರ್ವ ಕಾಲೇಜುಗಳೂ ಇವೆ. ಈ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗ ಇದ್ದರೆ ಎಲ್ಲ ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ.

ಸಾಧಾರಣವಾಗಿ ಸರ್ಕಾರ ಮೊದಲು ಕಲಾ ವಿಭಾಗವನ್ನು ಮಂಜೂರು ಮಾಡುತ್ತದೆ. ನಂತರ ಅವಶ್ಯಕತೆಗೆ ಅನುಗುಣವಾಗಿ ವಿಜ್ಞಾನ- ವಾಣಿಜ್ಯ ವಿಭಾಗವನ್ನು ತೆರೆಯಲಾಗುತ್ತದೆ. ಆದರೆ, ಮರಿಯಮ್ಮನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಪದವಿಪೂರ್ವ ಹಾಗೂ ಪ್ರಿಯದರ್ಶಿನಿ ಪದವಿಪೂರ್ವ ಕಾಲೇಜಿನಲ್ಲೂ ಕಲಾ ಮತ್ತು ವಾಣಿಜ್ಯ ವಿಭಾಗ ಮಾತ್ರ ಇದೆ. ಇಲ್ಲೂ ವಿಜ್ಞಾನ ವಿಭಾಗವಿಲ್ಲ. ಇಲ್ಲಿವಿಜ್ಞಾನ ವಿಭಾಗ ತೆರೆಯಬೇಕು ಎಂದು ಅನೇಕ ವರ್ಷಗಳಿಂದ ಬೇಡಿಕೆ ಇದೆ.

ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮರಿಯಮ್ಮನಹಳ್ಳಿ ಕಾಲೇಜಿಗೆ ವಿಜ್ಞಾನ ವಿಭಾಗ ಮಂಜೂರು ಮಾಡುವಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮತ್ತು ಸರ್ಕಾರಕ್ಕೆ ನೂರಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸ್ಥಳೀಯ ಶಾಸಕ ಕೆ. ನೇಮರಾಜ್‌ ನಾಯ್ಕಗೆ ಮರಿಯಮ್ಮನಹಳ್ಳಿ ಸ್ವಂತ ಊರಾಗಿದ್ದು, ಇಲ್ಲಿನ ನಿವಾಸಿಗಳಾಗಿದ್ದರೂ ಇದುವರೆಗೂ ಶಾಸಕರ ತವರೂರಲ್ಲಿ ಇನ್ನೂ ಪಿಯುಸಿ ವಿಜ್ಞಾನ ವಿಭಾಗ ಇಲ್ಲ ಎನ್ನುವುದು ದುರಂತದ ಸಂಗತಿಯಾಗಿದೆ. ತನ್ನ ಹುಟ್ಟೂರಿನಲ್ಲಿ ಅನೇಕ ವಿದ್ಯಾರ್ಥಿಗಳು ವಿಜ್ಞಾನ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂಬುದನ್ನು ಅರಿತು ಈಗಲಾದರೂ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಿ ತಕ್ಷಣವೇ ಮರಿಯಮ್ಮನಹಳ್ಳಿಗೆ ಪಿಯುಸಿ ವಿಜ್ಞಾನ ವಿಭಾಗವನ್ನು ಮಂಜೂರು ಮಾಡಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ. ಒತ್ತಾಯ

ಮರಿಯಮ್ಮನಹಳ್ಳಿಗೆ ಪಿಯುಸಿ ವಿಜ್ಞಾನ ವಿಭಾಗ ಅಗತ್ಯವಾಗಿ ಬೇಕಾಗಿದೆ. ಈಗಾಗಲೇ ಸರ್ಕಾರದ ಗಮನಕ್ಕೂ ತರಲಾಗಿದೆ. ಸರ್ಕಾರ ತಕ್ಷಣವೇ ಮುತುವರ್ಜಿವಹಿಸಿ ಗ್ರಾಮೀಣ ಪ್ರದೇಶಕ್ಕೆ ವಿಜ್ಞಾನ ವಿಭಾಗ ತೆರೆಯಲು ಮುಂದಾಗುವಂತೆ ಒತ್ತಾಯಿಸಲಾಗಿದೆ ಎಂದು ಶಾಸಕ ಕೆ. ನೇಮರಾಜ್‌ ನಾಯ್ಕ ಎಂದು ತಿಳಿಸಿದ್ದಾರೆ.ಮೇಲಧಿಕಾರಿಗಳ ಗಮನಕ್ಕೆ

ಮರಿಯಮ್ಮನಹಳ್ಳಿಯ ಗ್ರಾಮೀಣ ಕಾಲೇಜಿನ ಮೂಲಭೂತ ಸೌಕರ್ಯಗಳನ್ನು ಗಮನಿಸಿ ಮೇಲಧಿಕಾರಿಗಳ ಗಮನಕ್ಕೆ ತಕ್ಷಣವೇ ತರಲಾಗುತ್ತದೆ ಎಂದು ವಿಜಯನಗರ ಜಿಲ್ಲೆ ಪದವಿ ಪೂರ್ವ ಶಿಕ್ಷಣ ಇಲಾಖೆ ನೋಡಲ್‌ ಅಧಿಕಾರಿ ನಾಗರಾಜ ಹವಾಲ್ದಾರ್‌ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ನಿವೃತ್ತಿ ಇಲ್ಲದವರು: ಗೋಕುಲ್ ಶೆಟ್ಟಿ
ಭದ್ರಕಾಳಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸೋಲಾರ್ ಘಟಕ ಲೋಕಾರ್ಪಣೆ