ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಪರಿಕಲ್ಪನೆಯಂತೆ ಸಮೃದ್ಧ ಬೈಂದೂರು ವತಿಯಿಂದ ನಿವೃತ್ತ ಶಿಕ್ಷಕರ ಸಮಾಗಮ-ಪ್ರೇರಣಧಾರೆ ಕಾರ್ಯಕ್ರಮ ಇಲ್ಲಿನ ಉಪ್ಪುಂದದ ರೈತ ಸಿರಿ ಸಭಾಭವನದಲ್ಲಿ ನಡೆಯಿತು.
ಸಮೃದ್ಧ ಬೈಂದೂರು ವತಿಯಿಂದ ನಿವೃತ್ತ ಶಿಕ್ಷಕರ ಸಮಾಗಮ-ಪ್ರೇರಣಧಾರೆ
ಬೈಂದೂರು: ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಪರಿಕಲ್ಪನೆಯಂತೆ ಸಮೃದ್ಧ ಬೈಂದೂರು ವತಿಯಿಂದ ನಿವೃತ್ತ ಶಿಕ್ಷಕರ ಸಮಾಗಮ-ಪ್ರೇರಣಧಾರೆ ಕಾರ್ಯಕ್ರಮ ಇಲ್ಲಿನ ಉಪ್ಪುಂದದ ರೈತ ಸಿರಿ ಸಭಾಭವನದಲ್ಲಿ ನಡೆಯಿತು.ಉದ್ಯಮಿ ಗೋಕುಲ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಶಿಕ್ಷಕರೆಂದರೆ ನಿವೃತ್ತಿ ಇಲ್ಲದವರು, ಅವರು ಸಮಾಜಕ್ಕೆ ಸದಾಕಾಲ ಬೆಳಕು ನೀಡುವ ದೀಪಗಳು, ಆದ್ದರಿಂದ ಈ ವಿಶೇಷ ಕಾರ್ಯಕ್ರಮವು ದೇಶದ ಭವಿಷ್ಯ ರೂಪಿಸುವ ಶಿಕ್ಷಕರನ್ನು ಸ್ಮರಿಸುವ ಮೂಲಕ ಅರ್ಥಪೂರ್ಣವೆನಿಸಿದೆ ಎಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಂತರ ‘ವೃತ್ತಿ ಮತ್ತು ಪ್ರವೃತ್ತಿ’ ಎಂಬ ಬಗ್ಗೆ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ದಿವಾಕರ್ ಶೆಟ್ಟಿ ಮತ್ತು ಹಿರಿಯ ನ್ಯಾಯವಾದಿಗಳಾದ ಎ.ಎಸ್. ಎನ್. ಹೆಬ್ಬಾರ್ ಅವರು ‘ನಿವೃತ್ತಿ ನಂತರದ ಉಲ್ಲಾಸಮಯ ಜೀವನ’ ಎಂಬ ಬಗ್ಗೆ ಮಾತನಾಡಿದರು.
ನಿವೃತ್ತರಿಗೆ ಶಾಸಕರ ಸನ್ಮಾನ: ಶಾಸಕ ಗುರುರಾಜ ಗಂಟಿಹೊಳೆ ಅವರು ನಿವೃತ್ತ ಶಿಕ್ಷಕರ ಜೊತೆ ‘ಶಿಕ್ಷಣ ಕ್ಷೇತ್ರದ ಸವಾಲು ಮತ್ತು ವಿಶ್ರಾಂತ ಜೀವನದ ಮೆಲುಕು’ ಎಂಬ ಸಂವಾದ ನಡೆಸಿ, ನಿವೃತ್ತರನ್ನು ಸನ್ಮಾನಿಸಿ, ಈ ಸಮಾಗಮವು ಕೇವಲ ಒಂದು ಔಪಚಾರಿಕ ಭೇಟಿಯಾಗದೆ, ನಮ್ಮ ಗುರುಗಳ ಬದುಕಿನ ಜ್ಞಾನ ಮತ್ತು ಅನುಭವದ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳುವ ಒಂದು ಸುಂದರ ಪ್ರಯತ್ನವಾಗಿತ್ತು ಎಂದು ಅಭಿಪ್ರಾಯಪಟ್ಟರು.ರೇಡಿಯೋ ಕುಂದಾಪುರ ನಿರ್ದೇಶಕ ಜ್ಯೋತಿ ಸಂವಾದ ನಡೆಸಿಕೊಟ್ಟರು. ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಡಿ. ಸ್ವಾಗತಿಸಿದರು. ಸುಧಾಕರ್. ಪಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು, ಶ್ರೀಧರ್ ವಸ್ರೆ ವಂದಿಸಿದರು.