ಶಾಲಾ, ಕಾಲೇಜಿಗೆ ಅಗತ್ಯವಾದ ವಿದ್ಯುತ್ ಪೂರೈಕೆಗಾಗಿ ಸೋಲಾರ್ ಘಟಕ ನಿರ್ಮಿಸಿ ಪರಿಸರ ಕಾಳಜಿಗೆ ಪೂರಕ ಕಾರ್ಯದ ಮೂಲಕ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಉತ್ತಮ ಸಂದೇಶ ನೀಡುತ್ತಿರುವುದು ಪ್ರಶಂಸನೀಯ.

ಕನ್ನಡಪ್ರಭ ವಾರ್ತೆ ಗೋಕರ್ಣ

ಶಾಲಾ, ಕಾಲೇಜಿಗೆ ಅಗತ್ಯವಾದ ವಿದ್ಯುತ್ ಪೂರೈಕೆಗಾಗಿ ಸೋಲಾರ್ ಘಟಕ ನಿರ್ಮಿಸಿ ಪರಿಸರ ಕಾಳಜಿಗೆ ಪೂರಕ ಕಾರ್ಯದ ಮೂಲಕ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಉತ್ತಮ ಸಂದೇಶ ನೀಡುತ್ತಿರುವುದು ಪ್ರಶಂಸನೀಯ ಎಂದು ಉತ್ತರ ಪ್ರದೇಶ ಸರ್ಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ಹಾಗೂ ಕಾಶಿ ಕಾರಿಡಾರ ರೂವಾರಿ (ಐಎಎಸ್‌ ಅಧಿಕಾರಿ) ಮೂಲ ಇಲ್ಲಿನ ಬಿಜ್ಜೂರಿನವರಾದ ನಿತಿನ ರಮೇಶ ಗೋಕರ್ಣ ಹೇಳಿದರು.

ಕೆನರಾ ಶಿಕ್ಷಣ ಪ್ರಸಾರಕ ಮಂಡಳದ ಭದ್ರಕಾಳಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀಚಾಮಿ ವಿದ್ಯಾವಾಹಿನಿ ಟ್ರಸ್ಟ್‌ನಿಂದ ನಿರ್ಮಿಸಿದ ಬೃಹತ್ ಸೋಲಾರ್ ಘಟಕ ಲೋಕಾರ್ಪಣೆಗೊಳಿಸಿ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದರು.

ಪರಿಸರ ಸ್ನೇಹಿ ಹಲವು ಕಾರ್ಯಗಳ ಮೂಲಕ ಹಸಿರು ಯುಗದ (ಗ್ರೀನ್ ಏಜ್) ಕಾಲಘಟ್ಟದಲ್ಲಿರುವಾಗ ಇಂತಹ ಕಾರ್ಯ ಮಾಡುತ್ತಿರುವುದು ಮಾದರಿಯಾಗಿದೆ ಎಂದರು.

ಗೋಕರ್ಣ ಪುರಾತನ ಕಾಲದಲ್ಲಿಯೂ ಗುರುತಿಸಿಕೊಂಡಿದ್ದು, ಆತ್ಮಲಿಂಗವಿರುವ ಇಲ್ಲಿನ ಮಹತ್ವದ ಕುರಿತು ತಾವು ಬರೆದಿರುವ ಗ್ರಂಥದ ಕುರಿತು ವಿವರಿಸಿ, ಇಲ್ಲಿನ ಶಕ್ತಿ ದೇವತೆ ಭದ್ರಕಾಳಿಯ ಕುರಿತು ಪುಸಕ್ತ ಬರೆಯುತ್ತಿದ್ದೇನೆ ಎಂದು ತಿಳಿಸಿದರು. ಅಲ್ಲದೇ ಈ ಸ್ಥಳದ ಅಭಿವೃದ್ದಿಯ ಬಗ್ಗೆಯೂ ಪ್ರಸ್ತಾಪಿಸಿದರು.

ಶ್ರೀಚಾಮಿ ವಿದ್ಯಾವಾಹಿನಿ ಟ್ರಸ್ಟ್ ಅಧ್ಯಕ್ಷೆ ಜ್ಯೋತಿ ಮಿರ್ಜಾನಕರ್ ಪ್ರಸ್ತುತ ಕೈಗೊಂಡ ಅಭಿವೃದ್ಧಿ ಕಾರ್ಯ ಹಾಗೂ ಮುಂದೆ ಹಮ್ಮಿಕೊಳ್ಲುತ್ತಿರುವ ಕೆಲಸ ಕಾರ್ಯದ ಬಗ್ಗೆ ವಿವರಿಸಿದರು.

ಕೆನರಾ ಶಿಕ್ಷಣ ಪ್ರಸಾರಕ ಮಂಡಳದ ಅಧ್ಯಕ್ಷ ಡಾ. ವಿ.ಆರ್. ಮಲ್ಲನ್ನ, ಆಡಳಿತ ಮಂಡಳಿ ಕಾರ್ಯದರ್ಶಿ ಗಣಪತಿ ನಾಯಕ, ಖಜಾಂಚಿ ರವೀಂದ್ರ ಕೊಡ್ಲೆಕೆರೆ, ಶ್ರೀಚಾಮಿ ಟ್ರಸ್ಟ್‌ ಉಪಾಧ್ಯಕ್ಷ ಪ್ರಕಾಶ ಕಾಮತ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶ್ರೀಲಾ ನಿತಿನ್ ಗೋಕರ್ಣ, ಕಾಲೇಜಿನ ಪ್ರಾಚಾರ್ಯ ಎಸ್‌.ಸಿ. ನಾಯ್ಕ, ಪ್ರೌಢಶಾಲೆ ಮುಖ್ಯಾಧ್ಯಾಪಕ ಸಿ.ಜಿ. ನಾಯಕ ದೊರೆ, ವಸಂತನರಾಜನ ಕೊಡ್ಲೆಕೆರೆ, ಉದ್ಯಮಿ ಸುರೇಶ ಪಿ.ಗಿರಿಯನ್, ಉಪನ್ಯಾಸಕ ಎನ್.ಎಸ್‌. ಲಮಾಣಿ, ರಾಮಮೂರ್ತಿ ನಾಯಕ ಶ್ರೀಚಾಮಿ ಟ್ರಸ್ಟ್‌ನ ಗಣಪತಿ ಅಡಿ, ರವಿ ಗುನಗಾ, ವೇ.ಅಮೃತೇಶ ಹಿರೇ, ಸುವರ್ಣಾ ಪ್ರಸಾದ, ವಿನಯ ನಾಡ್ಕರ್ಣಿ ಮತ್ತಿತರರಿದ್ದರು. ಇದೇ ವೇಳೆ ಟ್ರಸ್ಟ್‌ನ ವೆಬ್ ಸೈಟ್ ಬಿಡುಗಡೆ ಮಾಡಲಾಯಿತು.