ಕಂಪ್ಲಿ: ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಗೌರಿ ಹುಣ್ಣಿಮೆ ನಿಮಿತ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎ. ಮಾನಯ್ಯ ಬಣ) ವತಿಯಿಂದ ಶಾಸಕರ ನೇತೃತ್ವದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ 12ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ಜರುಗಿತು. ಕಾರ್ಯಕ್ರಮದಲ್ಲಿ ಒಟ್ಟು 28 ಜೋಡಿಗಳು ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು.ಶಾಸಕ ಜೆ.ಎನ್. ಗಣೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಸಾಮೂಹಿಕ ವಿವಾಹಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವರದಾನ ಸ್ವರೂಪ. ಇಂದಿನ ದಿನಗಳಲ್ಲಿ ಬಂಗಾರ, ಬೆಳ್ಳಿ, ದಿನಸಿ ಸಾಮಾನುಗಳ ಬೆಲೆ ಗಗನಕ್ಕೇರಿದ್ದು, ಬಡ ಜನರಿಗೆ ಮದುವೆ ಒಂದು ದೊಡ್ಡ ಆರ್ಥಿಕ ಹೊರೆ. ಇಂತಹ ಸಂದರ್ಭದಲ್ಲಿ ಸಾಮೂಹಿಕ ವಿವಾಹಗಳು ಸಮಾಜದ ಒಳಿತಿಗಾಗಿ ಮಾರ್ಗದರ್ಶಕವಾಗಿವೆ. ಅತ್ತೆ-ಮಾವಂದಿರು ಸೊಸೆಯನ್ನು ತಮ್ಮ ಮಗಳಂತೆ ಕಾಣಬೇಕು, ಸೊಸೆಯು ಅತ್ತೆ-ಮಾವಂದಿರನ್ನು ತಂದೆ-ತಾಯಿಯಂತೆ ಗೌರವಿಸಿದಾಗ ಮಾತ್ರ ಕುಟುಂಬ ಜೀವನದಲ್ಲಿ ಶಾಂತಿ ಮತ್ತು ಸೌಹಾರ್ದತೆ ಬೆಳೆಯುತ್ತದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಮಾನಯ್ಯ ಮಾತನಾಡಿ, “ದಲಿತರು ರಾಜಕೀಯ ಚೈತನ್ಯ ಬೆಳೆಸಿಕೊಳ್ಳಬೇಕು. ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡು ಸಾಮಾಜಿಕ ಮತ್ತು ಆರ್ಥಿಕವಾಗಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್. ಶಿವಶಂಕರಗೌಡ, ಬಿ. ನಾರಾಯಣಪ್ಪ, ಎ.ಸಿ. ದಾನಪ್ಪ, ಕರೆಂಟ್ ಗೋಪಾಲಪ್ಪ, ಹೊಸಕೋಟೆ ಜಗದೀಶ್, ಎಚ್. ಜಗದೀಶಗೌಡ, ಬಿ. ಸಿದ್ದಪ್ಪ, ಪಿಡಿಒ ಮಲ್ಲಿಕಾರ್ಜುನ, ನೇಣ್ಕಿ ಗಿರೀಶ, ವೀರಾಂಜನೇಯಲು, ಕಮಲಾಪುರ ಸೋಮಶೇಖರ, ಕೆ. ಷಣ್ಮುಖ, ಮಂಜು, ಪ್ರಶಾಂತ, ಆನೆ ವೀರೇಶ, ಆರ್.ಎಂ. ರಾಜಶೇಖರ, ಸುಗ್ಗೇನಹಳ್ಳಿ ರಮೇಶ ಹಾಗೂ ಕುರುಗೋಡು ಪುರಸಭೆ ಅಧ್ಯಕ್ಷ ಶೇಖಣ್ಣ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.