ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಬಸವಕೇಂದ್ರ ಮುರುಘಾ ಮಠದ ಅನುಭವ ಮಂಟಪದಲ್ಲಿ ಮಂಗಳವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಧೂವರರಿಗೆ ಪುಷ್ಪವೃಷ್ಠಿಗೈದು ಶುಭಆರೈಸಿ ಮಾತನಾಡಿದ ಅವರು, ಯಾವುದು ಸರಳವೋ, ಯಾವುದು ಸತ್ಯವೋ ಅದು ಸುಂದರವಾಗಿರುತ್ತದೆ. ಯಾವ ವ್ಯಕ್ತಿ ತನ್ನ ಜೀವಿತದಲ್ಲಿ ಬಾಗಿ ನಡೆಯುತ್ತಾನೋ ಅವನ ಬದುಕು ಬಂಗಾರವಾಗಿರುತ್ತದೆ. ಸತಿ-ಪತಿಗಳಿಬ್ಬರೂ ಕೂಡ ಬಾಗಿದ ತಲೆಗೆ ಮುಗಿದ ಕೈಯಾಗಿರಬೇಕೆಂದು ಹೇಳಿದರು.
ಯಾವುದೇ ಜಾತಿ ಧರ್ಮಗಳ ಗೊಡವೆಯಿಲ್ಲದೆ ವಾರ, ತಿಥಿ, ನಕ್ಷತ್ರಗಳ ಲೆಕ್ಕಾಚಾರವಿಲ್ಲದೆ ಪ್ರತಿ ತಿಂಗಳು 5ನೇ ತಾರೀಕಿನಂದು ನಡೆಯುವ ಸಾಮೂಹಿಕ ವಿವಾಹಗಳಿಗೆ 36 ವರ್ಷಗಳ ಇತಿಹಾಸವಿದೆ. ದೇಶ ಹಾಗೂ ತಮ್ಮ ಕುಟುಂಬದ ದುಂದುವೆಚ್ಚವನ್ನು ಕಡಿಮೆ ಮಾಡುವುದರ ಮೂಲಕ ತಾವೆಲ್ಲ ಸರಳ ವಿವಾಹಕ್ಕೆ ಅಣಿಯಾಗಿದ್ದೀರಿ. ನಿಮ್ಮ ಬದುಕು ಸುಂದರವಾಗಿರುತ್ತದೆ. ಬಸವಾದಿ ಶರಣರ ಆಶಯದಂತೆ ಶ್ರೀಮಠದಲ್ಲಿ ನಡೆಯುವ ವಚನ ಮಾಂಗಲ್ಯದಲ್ಲಿ 18 ಜೋಡಿ ವೈವಾಹಿಕ ಜೀವನಕ್ಕೆ ಸರಳ ಬದುಕಿಗೆ ಸಾಕ್ಷಿಯಾಗಿದ್ದೀರಿ. 4 ಜೋಡಿಗಳು ಅಂತರ್ಜಾತಿ ವಿವಾಹಕ್ಕೆ ಒಳಗಾಗಿದ್ದೀರಿ. ಶ್ರೀಮಠವು ಯಾವಾಗಲೂ ಸಾಮಾಜಿಕ ಸಮಾನತೆಯ ಪರ ಕಾರ್ಯನಿರ್ವಹಿಸುತ್ತಿದೆ ಎಂದರು.ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಸಂಸಾರದ ಜೀವನ ಚೆನ್ನಾಗಿರಲು 4 ವಿಚಾರಗಳನ್ನು ಅಳವಡಿಸಿಕೊಂಡಿರಬೇಕು. ಪರಸ್ಪರರ ನಗು ಸಂಸಾರವನ್ನು ಸುಂದರವಾಗಿಸುತ್ತದೆ. ಸಂಸಾರದಲ್ಲಿ ಆಗುವಂತಹ ಮನಸ್ತಾಪ, ಜಗಳವನ್ನು ಮೌನ ತಪ್ಪಿಸುತ್ತದೆ. ನದಿ ದಾಟಲು ತೆಪ್ಪ ಬೇಕು. ಅದೇ ರೀತಿ ಸಂಸಾರದ ನದಿ ದಾಟಲು ತೆಪ್ಪಗಿರಬೇಕಾಗುತ್ತದೆ. ತಾಳ್ಮೆ ದಾಂಪತ್ಯ ಜೀವನದಲ್ಲಿ ಬಹಳ ಮುಖ್ಯವಾದುದು. ಇದು ಪುರುಷ ಮಹಿಳೆಯರಿಬ್ಬರಲ್ಲೂ ಇರಬೇಕು. ತಾಳ್ಮೆಯಿಂದ ಮಾತ್ರ ಸಂಸಾರವನ್ನು ಜಯಿಸಲು ಸಾಧ್ಯ. ಹಾಗಾಗಿ ಹೊಸ ಜೀವನಕ್ಕೆ ಕಾಲಿಡುತ್ತಿರುವ ದಂಪತಿಗಳು ನಗು, ಮೌನ, ವಿಶ್ವಾಸ, ತಾಳ್ಮೆಯನ್ನು ಅಳವಡಿಸಿಕೊಂಡು ಉತ್ತಮ ಬದುಕನ್ನು ಕಟ್ಟಿಕೊಳ್ಳಿ ಎಂದು ಹರಸಿದರು.
ಶಿರಸಂಗಿಯ ಬಸವ ಮಹಾಂತ ಸ್ವಾಮೀಜಿ ಮಾತನಾಡಿ, ಪುಟ್ಟ ಮಕ್ಕಳು ಕೂಡ ಮೊಬೈಲ್ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ. ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಿ ಮೊಬೈಲ್ ವ್ಯಾಮೋಹವನ್ನು ಬಿಡಿಸಬೇಕು. ಸತಿ ಪತಿಗಳು ಪರಸ್ಪರ ನಂಬಿಕೆ ಮೂಲಕ ಸ್ನೇಹಿತರಂತೆ ಬದುಕು ಸಾಗಿಸಬೇಕು ಎಂದರು.