ಶಿರಹಟ್ಟಿ: ಬಡತನದಿಂದ ಕುಟುಂಬ ನಿರ್ವಹಣೆ ದುಸ್ತರವಾಗಿರುವ ಸಂದರ್ಭದಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಸಾಮೂಹಿಕ ವಿವಾಹಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪಾಲಿಗೆ ವರದಾನವಾಗಿವೆ. ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವವರು ಶಿಸ್ತು, ಸಂಯಮದಿಂದ ಜೀವನ ಸಾಗಿಸಬೇಕು ಎಂದು ಬನ್ನಿಕೊಪ್ಪ ಬೃಹನ್ಮಠದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.ತಾಲೂಕಿನ ಖಾನಾಪುರ ಗ್ರಾಮದಲ್ಲಿ ಕಲಬುರಗಿಯ ಶರಣ ಬಸವೇಶ್ವರ ಪುರಾಣದ ೫೦ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಬಡ ಮತ್ತು ಮಧ್ಯಮ ವರ್ಗಗಳ ಜನರ ಆರ್ಥಿಕ ಹೊರೆ ನೀಗಿಸಲು ಸಾಮೂಹಿಕ ವಿವಾಹ ಪೂರಕವಾಗಿದೆ ಎಂದರು.ಪ್ರಸ್ತುತ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಇಂಥ ಸಂದರ್ಭದಲ್ಲಿ ದುಂದುವೆಚ್ಚದ ಮದುವೆ ಕಾರ್ಯಕ್ರಮಗಳು ದೊಡ್ಡ ಸವಾಲು. ಇದನ್ನು ತೊಡೆದು ಹಾಕಲು ಸಾಮೂಹಿಕ ವಿವಾಹ ವರದಾನವಾಗಿದೆ. ಸಾಮಾನ್ಯ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಮಕ್ಕಳ ಮದುವೆ ನೆರವೇರಿಸುವ ಕನಸಿಗೆ ಸಾಮೂಹಿಕ ವಿವಾಹ ಉತ್ತಮ ಮಾರ್ಗಗಳೆನಿಸಿವೆ. ಬಡ ಮತ್ತು ಮಧ್ಯಮ ವರ್ಗಗಳಿಗೆ ಸೇರಿದ ಕುಟುಂಬಗಳಲ್ಲಿ ಉಂಟಾಗುವ ಆರ್ಥಿಕ ಅಸಮತೋಲನವನ್ನು ಸಾಮೂಹಿಕ ವಿವಾಹ ತಪ್ಪಿಸಲಿವೆ ಎಂದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತ ದೊಡ್ಡಮನಿ ಮಾತನಾಡಿ, ಜನರು ಸಮಾಜದಲ್ಲಿ ತಮ್ಮ ಪ್ರತಿಷ್ಠೆ ಮೆರೆಸಲು ಆಡಂಬರ ಪ್ರದರ್ಶಿಸುತ್ತಾ ಅದ್ಧೂರಿ ವಿವಾಹ ಮಾಡಿಕೊಂಡು ಸಾಲದ ಸುಳಿಗೆ ಸಿಲುಕಿ ಪರಿತಪಿಸುತ್ತಿದ್ದಾರೆ. ಇದು ಕೊನೆಯಾಗಬೇಕು. ಸರಳ, ಸಾಮೂಹಿಕ ವಿವಾಹಗಳನ್ನು ಮಾಡಿಕೊಳ್ಳುವ ಮೂಲಕ ಬದುಕನ್ನು ಸುಂದರಗೊಳಿಸಬೇಕು. ಹೆಣ್ಣು ಹೆತ್ತವರ ಹೊಟ್ಟೆಯನ್ನು ತಣ್ಣಗೆ ಮಾಡುವ ಕಾರ್ಯವನ್ನು ಖಾನಾಪುರ ಗ್ರಾಮದ ಶರಣಬಸವೇಶ್ವರ ಕಮಿಟಿಯವರು ಕಳೆದ ೫೦ ವರ್ಷಗಳಿಂದ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.