ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಶುಭ್ರ ಶ್ವೇತಧಾರಿಗಳಾಗಿದ್ದ ಮುಸ್ಲಿಂ ಬಾಂಧವರು ನಗರದ ಎಪಿಎಂಸಿ ಬಳಿಯಿರುವ ದೊಡ್ಡ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರತನಕ ಎಲ್ಲರೂ ಬಿಳಿ ವಸ್ತ್ರಗಳನ್ನು ಧರಿಸಿ ತಲೆಗೆ ಟೋಪಿ ಹಾಕಿಕೊಂಡು, ಕರವಸ್ತ್ರಗಳನ್ನು ತಲೆಗೆ ಸುತ್ತಿ ಶಿಸ್ತು ಬದ್ದರಾಗಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಬೆಳಗ್ಗೆ ಎಂಟು ಗಂಟೆಯಿಂದಲೆ ಮನೆಯಿಂದ ಚಾಪೆ, ಜಮಖಾನಗಳನ್ನು ಬಗಲಲ್ಲಿ ಸುತ್ತಿಕೊಂಡು ಪ್ರಾರ್ಥನೆಗೆ ಹೋಗುತ್ತಿದ್ದ ದೃಶ್ಯ ಚಿತ್ರದುರ್ಗಗದ ಎಲ್ಲೆಡೆ ಕಂಡು ಬಂತು. ಗಾಂಧಿವೃತ್ತ, ಹೊಳಲ್ಕೆರೆ ರಸ್ತೆ ಹಾಗೂ ದಾವಣಗೆರೆ ರಸ್ತೆಯಲ್ಲಿ ಬ್ಯಾರಿಕೇಡ್ಗಳನ್ನು ಅಡ್ಡವಿಟ್ಟು ವಿಟ್ಟಿದ್ದರ ಪರಿಣಾಮ ಭಾರಿ ಗಾತ್ರದ ವಾಹನಗಳು ಹೆದ್ದಾರಿ ಮೂಲಕ ಸಂಚರಿಸಿದವು. ತಂಡೋಪತಂಡವಾಗಿ ರಸ್ತೆ ಮೇಲೆ ಹಾದುಹೋಗುತ್ತಿದ್ದ ಮುಸ್ಲಿಂ ಬಾಂಧವರು ಭಕ್ತಿ ಭಾವ ಸ್ಪರ್ಶ ನೀಡಿದರು.ನಗರ ಪೊಲೀಸ್ ಠಾಣೆ, ಕೋಟೆ ಹಾಗೂ ಸಂಚಾರಿ ಪೊಲೀಸ್ನವರು ವಾಹನಗಳ ದಟ್ಟಣೆಯನ್ನು ನಿಯಂತ್ರಿಸಿ ಸಾಮೂಹಿಕ ಪ್ರಾರ್ಥನೆಗೆ ಅಡಚಣೆಯಾಗದಂತೆ ಎಚ್ಚರ ವಹಿಸಿದ್ದರು.