ನವಲಗುಂದ: ಪಟ್ಟಣದ ಹೊರ ವಲಯದಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಅವರಣದಲ್ಲಿನ ನೀರು ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದೆ ಎಂದು ರೈತ ಪ್ರಕಾಶ ಶಿಗ್ಲಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಬೀಗ ಜಡಿದು ಶುಕ್ರವಾರ ಪ್ರತಿಭಟನೆ ನಡೆಸಿದರು.
ಸ್ಥಳದಲ್ಲಿದ್ದ ವಿತರಣಾ ಕೇಂದ್ರದ ಕಿರಿಯ ಅಭಿಯಂತರ ಶ್ರೀಶೈಲ ಗಾಜರೇ ಅವರೊಂದಿಗೆ ಗ್ರಾಮದ ಹಿರಿಯರು ಪ್ರತಿಭಟನಾ ನಿರತ ರೈತನೊಂದಿಗೆ ಮಾತನಾಡಿ, ಮನವೊಲಿಸಿ ನಂತರ ಪ್ರತಿಭಟನೆ ಹಿಂಪಡೆದರು.
ಈ ವೇಳೆ ಶ್ರೀಶೈಲ ಗಾಜರೇ ಮಾತನಾಡಿ, ಅಭಿಯಂತರರು ಸ್ಥಳಕ್ಕೆ ಆಗಮಿಸಿ ಶಾಶ್ವತ ಕಾಮಗಾರಿ ಮಾಡುವುದಾಗಿ ತಿಳಿಸಿದ್ದಾರೆ. ಈಗ ಸದ್ಯ ಆವರಣದಲ್ಲಿ ನಿಂತಿರುವ ನೀರನ್ನು ಪಕ್ಕದ ಜಮೀನಿಗೆ ಹೋಗದಂತೆ ಎರಡು ದಿನದಲ್ಲಿ ಹೊರ ಹಾಕಲು ಕ್ರಮ ಜರುಗಿಸಲಾಗುವುದು ಎಂದರು.ಸ್ಥಳಕ್ಕೆ ಆಗಮಿಸಿದ್ದ ಹಿರಿಯರಾದ ಅಶೋಕ ಮಜ್ಜಿಗುಡ್ಡ, ಶಂಕರ ಧಾರವಾಡ, ಎನ್.ಪಿ. ಕುಲಕರ್ಣಿ, ನಿಂಗಪ್ಪ ಬಾರಕೇರ, ತಮ್ಮಣ್ಣ ಜೋಶಿ, ಬಸವರಾಜ ಅಕ್ಕಿ ಚರಂತಯ್ಯ ಹಿರೇಮಠ್, ಹನುಮಂತ ಗಡ್ಡಿ, ಕೆಪಿಟಿಸಿಎಲ್ ಮೆಕಾನಿಕ್ಗಳಾದ ಎಂ.ಜಿ. ಬಾವಿಮನಿ, ಬಿ.ವಿ. ಹೆಬ್ಬಾಳ, ರವಿ ಬನ್ನಿಗಿಡದ, ಬಿ.ವಿ. ಮಾಳವಾಡ ಇತರರು ಇದ್ದರು.