ಅಂಗನವಾಡಿ - ಬಿಸಿಯೂಟ ನೌಕರರ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Jul 11, 2026, 12:15 AM IST
10ಕೆಪಿಆರ್‌ಸಿಆರ್‌ 001 | Kannada Prabha

ಸಾರಾಂಶ

ರಾಯಚೂರಿನಲ್ಲಿ ಅಂಗನವಾಡಿ-ಬಿಸಿಯೂಟ ನೌಕರರು ಕೆಲಸ ಬಂದ್‌ ಮಾಡಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಯನ್ನು ವಿರೋಧಿಸಿ ಹಾಗೂ ಅಂಗನವಾಡಿ ಮತ್ತು ವಿವಿಧ ಸ್ಟೀಮ್ ನೌಕರರ ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಟಿಯುಸಿಐ) ಹಾಗೂ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಕರಾಳ ದಿನಾಚರಣೆಯನ್ನು ಮಾಡಿ, ಜಿಲ್ಲಾಧಿಕಾರಿ ಕಚೇರಿಯನ್ನು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಜಿಲ್ಲಾ ಕೇಂದ್ರವಾದ ರಾಯಚೂರಿನಲ್ಲಿ ಸೇರಿದ ಸಮಿತಿ ಪದಾಧಿಕಾರಿಗಳು,ಸದಸ್ಯರು, ನೌಕರರು ಪ್ರತಿಭಟನಾ ಮೆರವಣಿಗೆ ಮುಖಾಂತರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು ಈ ವೇಳೆ ಬಿಗಿ ಭದ್ರತೆ ಕಲ್ಪಿಸಿದ್ದ ಪೊಲೀಸರು ಅದನ್ನು ತಡೆದರು ನಂತರ ಪ್ರತಿಭಟನಾ ನಿರತರು ಗೇಟ್ ಮುಂದೆ ಕುಳಿತು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಅವರ ಮುಖಾಂತರ ಉಭಯ ಸರ್ಕಾರಗಳಿಗೆ ಮನವಿಯನ್ನು ರವಾನಿಸಿದರು.

ಈ ವೇಳೆ ಮಾತನಾಡಿದ ಉಭಯ ಸಮಿತಿಗಳ ಮುಖಂಡರು,ಕೇಂದ್ರ ಸರ್ಕಾರ ಐಸಿಡಿಎಸ್ಎ ನೀಡುತ್ತಿದ್ದ ಅನುದಾನವನ್ನು ಬೆಲೆ ಏರಿಕೆಗೆ ತಕ್ಕಂತೆ ಹೆಚ್ಚಳ ಮಾಡದೆ ನಿರಂತರವಾಗಿ ಕಡಿಮೆ ಮಾಡುತ್ತಿದೆ. ಬಿಸಿಯೂಟ ಯೋಜನೆಗೆ ಅನುದಾನ ಹೆಚ್ಚಳ ಮಾಡದೆ, ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ಕೊಡುವ ಮುಖಾಂತರ ಬಲಹೀನಗೊಳಿಸಲಾಗುತ್ತಿದೆ. ಸರ್ಕಾರದ ನೌಕರರ ವಿರೋಧ ನೀತಿಯನ್ನು ಖಂಡಿಸಿ ಉಭಯ ಸಂಘಟನೆಗಳು ತೀವ್ರವಾಗಿ ಖಂಡಿಸಿ ಕೆಲಸ ಸ್ಥಗಿತಗೊಳಿಸಿ ಕರಾಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.

2017ರಿಂದ ಪೌಷ್ಠಿಕ ಆಹಾರಕ್ಕೆ ನೀಡಬೇಕಾದ ಘಟಕ ವೆಚ್ಚ ಹೆಚ್ಚಳ ಮಾಡದೆ ಅಂಗನವಾಡಿ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಮತ್ತೊಂದಡೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗುತ್ತಿದೆ. ಇದರಿಂದ 3 - 6 ವರ್ಷದ ಮಕ್ಕಳನ್ನು ದೂರವಿಟ್ಟು ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ - ಯುಕೆಜಿ ಪ್ರಾರಂಭಿಸ ಲಾಗುತ್ತಿದೆ. ಇದರಿಂದ ಅಂಗವಾಡಿ ಕೇಂದ್ರಗಳಲ್ಲಿ ಫಲಾನುಭವಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಿಸಿಯೂಟ ಯೋಜನೆಯನ್ನು ಪ್ರಾರಂಭಿಸಿ 25 ವರ್ಷಗಳಾಗಿವೆ. ಆದರೆ ಸರ್ಕಾರ ಮಾತ್ರ ಬಿಸಿಯೂಟ ನೌಕರರ ಗೌರವಧನವನ್ನು ಹೆಚ್ಚಳ ಮಾಡದೆ ಬಡಮಹಿಳೆ ಯರನ್ನು ಶೋಷಣೆ ಮಾಡುತ್ತಿದೆ. ನೌಕರರಿಗೆ ಕೆಲಸ ಭದ್ರತೆ ಇಲ್ಲ. ರಾಜ್ಯದಲ್ಲಿ ಯೋಜನೆಯನ್ನು ಇಸ್ಕಾನ್‌ಗೆ ಕೊಡುವ ಪ್ರಸ್ತಾವನೆಯನ್ನು ಸರ್ಕಾರ ಕೈಬಿಡಬೇಕು. ಅಂಗನವಾಡಿ ನೌಕರರಿಗೆ ಎಫ್ಆರ್ಎಸ್, ಇಕೆವೈಸಿ, ಪೋಷನ್ ಟ್ರ್ಯಾಯಕರ್, ಆನ್ಲೈನ್ ಕೆಲಸಗಳನ್ನು ಗುಣಮಟ್ಟದ ಮೊಬೈಲ್, 5ಜಿ ಡಾಟಾ, ವೈಫೈ ನೀಡದೆ ಕೆಲಸ ಮಾಡಲು ಒತ್ತಡ ಹೇರಲಾಗುತ್ತಿದೆ. ನೌಕರರ ಈ ವಿರೋಧಿ ನೀತಿಯನ್ನು ಸರ್ಕಾರಗಳು ಕೈಬಿಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರದ ಚುನಾವಣೆ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ 15,000 ರು. ಮತ್ತು 10,000 ರು. ಸಹಾಯಕಿಯರಿಗೆ ಜಾರಿ ಮಾಡಬೇಕು. ಬಿಸಿಯೂಟ ನೌಕರರಿಗೆ 7,000 ರು. ಹೆಚ್ಚಿಸಬೇಕು. ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಎಲ್ಕೆಜಿ - ಯುಕೆಜಿ ವಿಸ್ತರಣೆ ಆಗಬೇಕು, ಬಿಸಿಯೂಟ ನೌಕರರಿಗೆ ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಂದ ಎಸ್ಡಿಎಂಸಿಗೆ ವರ್ಗಾವಣೆ ಮಾಡಿರುವ ಕ್ರಮ ವಾಪಸ್ಸಾಗಬೇಕು, ಸಾದಿಲ್ವಾರು ಖಾತೆ ಮೊದಲಿನಂತೆ ಬದಲಾಯಿಸಬೇಕು. ಅಂಗನವಾಡಿ ನೌಕರರಿಗೆ ಇಲಾಖೆತರ ಯಾವುದೇ ಕೆಲಸಗಳನ್ನು ನೀಡಬಾರದು ಅಂಗನವಾಡಿ ನೌಕರರನ್ನು ಬಿಎಲ್ಓ ಕೆಲಸದಿಂದ ಸಂಪೂರ್ಣ ಕೈಬಿಡಬೇಕು. ರಾಯಚೂರು ಜಿಲ್ಲೆಯಲ್ಲಿ ಬಿಸಿಯೂಟ ಯೋಜನೆಯಲ್ಲಿ ತರಕಾರಿ ಸರಬರಾಜು ಮಾಡುವುದನ್ನು ಸ್ವ-ಸಹಾಯ ಗುಂಪು ಗಳಿಗೆ ಕೊಟ್ಟಿರುವುದನ್ನು ವಾಪಸ್ ಪಡೆಯಬೇಕು. ಅಂಗನವಾಡಿ ನೌಕರರಿಗೆ ಪೋಷನ್ ಟ್ರ್ಯಾಕರ್ ಹೆಸರಿನಲ್ಲಿ ಕಿರುಕುಳ ನಿಲ್ಲಸಬೇಕು, ಅಂಗನವಾಡಿ ಕೇಂದ್ರ ಗಳಿಗೆ ಸ್ಥಳೀಯ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡಬೇಕೆಂಬ ಬೇಡಿಕೆಗಳನ್ನು ಒಳಗೊಂಡು ಇನ್ನೀತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಹೆಚ್ ಪದ್ಮಾ.ಬಿಸಿಯೂಟ ನೌಕರರ ಸಂಘದ ಅಧ್ಯಕ್ಷ ರೇಣುಕಮ್ಮ.ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಶರಣಬಸವ, ಜಂಟಿ ಸಂಘಟನೆಗಳ ಮುಖಂಡರಾದ ವರಲಕ್ಷ್ಮೀ, ಮರಿಯಮ್ಮ, ರಮಾದೇವಿ, ಮಹ್ಮದ್ ಹನೀಫ್, ಕೆ.ಜಿ ವೀರೇಶ್, ಗೋಕುರಮ್ಮ, ಗಂಗಮ್ಮ, ಅಕ್ಕಮಹಾದೇವಿ, ವಿಶಾಲಾಕ್ಷಮ್ಮ, ಜರೀನಾ ಬೇಗಂ, ಅಲ್ಲಾಭಕ್ಷ್‌, ಶರಣಮ್ಮ, ನಿಂಗಪ್ಪ, ಶ್ರೀಲೇಖಾ, ಶ್ರೀಧರ ಕಲಾಣಮ್ಮ ಸೇರಿ ಎರಡೂ ಸಂಘಟನೆಗಳ ಸದಸ್ಯರು, ಅಂಗನವಾಡಿ, ಬಿಸಿಯೂಟ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

---

10ಕೆಪಿಆರ್‌ಸಿಆರ್‌ 01ಮತ್ತು02: ರಾಯಚೂರಿನಲ್ಲಿ ಅಂಗನವಾಡಿ-ಬಿಸಿಯೂಟ ನೌಕರರು ಕೆಲಸ ಬಂದ್‌ ಮಾಡಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಲಹರಣವಾಗುತ್ತಿದೆ ಹೊರತು ಪ್ರಗತಿ ಇಲ್ಲ
ಬಿಸಿಯೂಟ ಕಾರ್ಮಿಕರ ವೇತನ ಹೆಚ್ಚಿಸುವಂತೆ ಅಕ್ಷರ ದಾಸೋಹ ನೌಕರರ ಸಂಘದಿಂದ ಪ್ರತಿಭಟನೆ