ಪುಷ್ಕರಣಿ ಉತ್ಖನನಕ್ಕೆ ಆಗ್ರಹಿಸಿ ಹಿಂದೂ ಸಂಘಟನೆಗಳ ಭಾರೀ ಪ್ರತಿಭಟನೆ

KannadaprabhaNewsNetwork |  
Published : Aug 23, 2026, 02:15 AM IST
ಚಿತ್ರಗಳು | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರದಲ್ಲಿ ಬರೀ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕಾರ್ಯಗಳಾಗುತ್ತಿದ್ದು, ಸರ್ಕಾರ ನೇರವಾಗಿ ಸಹಕಾರ ನೀಡುತ್ತಿದೆ. ದೇವಸ್ಥಾನದ ಪುಷ್ಕರಣಿ ಇರುವ ದಾಖಲೆ ಇದ್ದರೂ ಸಹ ಒತ್ತುವರಿ ಮಾಡಿ ರಸ್ತೆ ನಿರ್ಮಾಣ ಮಾಡಿರುವುದು ತಪ್ಪು. ಪೊಲೀಸ್ ಆಯುಕ್ತರು ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುತ್ತಿದ್ದು, ನಿಷೇಧಾಜ್ಞೆ ಹೇರುವ ಮೂಲಕ ಹೋರಾಟವನ್ನು ಹತ್ತಿಕ್ಕುತ್ತಿದ್ದಾರೆ.

ಹುಬ್ಬಳ್ಳಿ:ಹಳೇ ಹುಬ್ಬಳ್ಳಿಯ ಆಸಾರ ಓಣಿಯ ಐತಿಹಾಸಿಕ ಭವಾನಿ ಶಂಕರ ನಾರಾಯಣ ದೇವಸ್ಥಾನದ ಪುಷ್ಕರಣಿ ಜಾಗೆಯನ್ನು ಒತ್ತುವರಿ ಮಾಡಿ, ಅಲ್ಲಿ ರಸ್ತೆ ನಿರ್ಮಾಣ ಮಾಡಿರುವುದಕ್ಕೆ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಶನಿವಾರ ನಿಷೇಧಾಜ್ಞೆ ಮಧ್ಯೆಯೂ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು ಬೃಹತ್ ಪ್ರತಿಭಟನೆ ಮೂಲಕ ಸ್ಥಳೀಯ ಆಡಳಿತಕ್ಕೆ ಖಡಕ್ ಎಚ್ಚರಿಕೆ ನೀಡಿದರು.

ಪುಷ್ಕರಣಿ ಮೇಲೆ ಅನಿಧಿಕೃತವಾಗಿ ನಿರ್ಮಿಸಿರುವ ರಸ್ತೆಯನ್ನು ತೆರವುಗೊಳಿಸಲು ಮಹಾನಗರ ಪಾಲಿಕೆಗೆ ಆ. 22ರ ವರೆಗೆ ಗಡುವು ನೀಡಲಾಗಿತ್ತು. ಆದರೆ, ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಶನಿವಾರ ಭವಾನಿ ಶಂಕರ ನಾರಾಯಣ ದೇವಸ್ಥಾನ ಪುಷ್ಕರಣಿ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಹಿಂದೂ ಸಂಘಟನೆಗಳ ನೂರಾರು ಮುಖಂಡರು, ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರು ಚನ್ನಪೇಟೆಯಲ್ಲಿ ಜಮಾವಣೆಯಾಗಿ ಶಕ್ತಿ ಪ್ರದರ್ಶನ ತೋರಿದರು.

ಹಿಂದೂ ಭಾವನೆಗೆ ಧಕ್ಕೆ:

ಕಾಂಗ್ರೆಸ್ ಸರ್ಕಾರದಲ್ಲಿ ಬರೀ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕಾರ್ಯಗಳಾಗುತ್ತಿದ್ದು, ಸರ್ಕಾರ ನೇರವಾಗಿ ಸಹಕಾರ ನೀಡುತ್ತಿದೆ. ದೇವಸ್ಥಾನದ ಪುಷ್ಕರಣಿ ಇರುವ ದಾಖಲೆ ಇದ್ದರೂ ಸಹ ಒತ್ತುವರಿ ಮಾಡಿ ರಸ್ತೆ ನಿರ್ಮಾಣ ಮಾಡಿರುವುದು ತಪ್ಪು. ಪೊಲೀಸ್ ಆಯುಕ್ತರು ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುತ್ತಿದ್ದು, ನಿಷೇಧಾಜ್ಞೆ ಹೇರುವ ಮೂಲಕ ಹೋರಾಟವನ್ನು ಹತ್ತಿಕ್ಕುತ್ತಿದ್ದಾರೆ. ಹಿಂದೂಗಳನ್ನು ಕೆಣಕಿದಾಗಲೆಲ್ಲ ಏನೆಲ್ಲಾ ಆಗಿದೆ ಎಂಬುದು ಇತಿಹಾಸ ಹೇಳುತ್ತದೆ. ಅದೇ ರೀತಿ ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ಹಸ್ತಕ್ಷೇಪ ಮಾಡದೇ ಸುಮ್ಮನಿದ್ದರೆ ಸರಿ. ಇಲ್ಲದೇ ಹೋದಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಹೋರಾಟಗಾರರು ಎಚ್ಚರಿಸಿದರು.

ಘೋಷಣೆ ಕೂಗಿ ಆಕ್ರೋಶ:

ಚನ್ನಪೇಟೆಯ ಬಸ್ ನಿಲ್ದಾಣದ ಮೇಲೆಯೇ ನಿಂತು ಪುಷ್ಕರಣಿ ಒತ್ತುವರಿ ಖಂಡಿಸಿ ಮಹಾನಗರ ಪಾಲಿಕೆ, ಪುರಾತತ್ವ ಇಲಾಖೆ, ರಾಜ್ಯ ಸರ್ಕಾರ ಹಾಗೂ ಪೊಲೀಸ್ ಆಯುಕ್ತರ ವಿರುದ್ಧ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇತಿಹಾಸದ ಕುರುಹು ಅಳಿಸಬೇಡಿ-ಪುಷ್ಕರಣೆ ಉಳಿಸಿ, ಪುಷ್ಕರಣಿ ಉಳಿಸಿ-ಭವನಿ ಶಂಕರ ಕೀರ್ತಿ ಹೆಚ್ಚಿಸಿ, ಪುಷ್ಕರಣಿ ರಕ್ಷಿಸಿ-ಸಂಸ್ಕೃತಿ ಉಳಿಸಿ, ನಮ್ಮ ಪುಷ್ಕರಣಿ-ನಮ್ಮ ಪರಂಪರೆ ಎಂಬೆಲ್ಲ ಘೋಷಣೆ ಕೂಗಿದ ಕಾರ್ಯಕರ್ತರು ಬಿಗಿ ಪೊಲೀಸ್ ಬಂದೋಬಸ್ತ್ ಇದ್ದಾಗ್ಯೂ ನಿಷೇಧಾಜ್ಞೆ ಜಾರಿಯಾದ ಪ್ರದೇಶದಲ್ಲಿ ನುಗ್ಗಲು ಪ್ರಯತ್ನಿಸಿದಾಗ ನೂಕು ನುಗ್ಗಲು ಉಂಟಾಯಿತು.

ಬಂಧನ, ಬಿಡುಗಡೆ:

ಪರಿಸ್ಥಿತಿ ನಿಭಾಯಿಸಲು ಪೊಲೀಸರು ಕೂಡಲೇ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ, ವಿಪ ಸದಸ್ಯ ಪ್ರದೀಪ ಶೆಟ್ಟರ್, ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್, ಭವಾನಿ ಶಂಕರ ನಾರಾಯಣ ದೇವಸ್ಥಾನ ಪುಷ್ಕರಣಿ ಸಂರಕ್ಷಣಾ ಸಮಿತಿ ಸಂಯೋಜಕ ಸುಧಾಕರ ಶೆಟ್ಟಿ, ಸಹಸಂಯೋಜಕ ಜಯತೀರ್ಥ ಕಟ್ಟಿ, ಪಾಲಿಕೆ ಸಭಾನಾಯಕ ಶಿವು ಮೆಣಸಿನಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗ್ರಾಮೀಣ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ದತ್ತಮೂರ್ತಿ ಕುಲಕರ್ಣಿ, ವೆಂಕಟೇಶ ಕಾಟವೆ ಸೇರಿದಂತೆ 50ಕ್ಕೂ ಹೆಚ್ಚು ಜನರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.

ಹಳೇ ಹುಬ್ಬಳ್ಳಿ ಸೂಕ್ಷ್ಮ ಪ್ರದೇಶವಾಗಿದ್ದು ಯಾವುದೇ ಕಾರಣಕ್ಕೂ ಗದ್ದಲ-ಗೊಂದಲ ಸೃಷ್ಟಿಯಾಗಬಾರದು ಎಂದು ಪೊಲೀಸ್ ಇಲಾಖೆ ಮುನ್ನೆಚ್ಚರಿಕೆಯಿಂದ ದೇವಸ್ಥಾನದ ಸುತ್ತಲಿನ 500 ಮೀಟರ್ ನಿಷೇಧಾಜ್ಞೆ ಜಾರಿಗೊಳಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು. ಈ ಮಧ್ಯೆ ಮಹಿಳಾ ಹೋರಾಟಗಾರರನ್ನು ಬಂಧಿಸಲು ಮಹಿಳಾ ಪೊಲೀಸರು, ಹೋಂಗಾರ್ಡಗಳು ಹರಸಾಹಸ ಪಡಬೇಕಾಯಿತು. ವೈ.ಎಂ. ಮುಂಚಿ ಎಂಬವರ ಕೈಗೆ ಗಾಯವಾಯಿತು. ಪೊಲೀಸ್ ಸಿಬ್ಬಂದಿ ಯಶೋದಾ ಎಂಬುವರ ಮೊಬೈಲ್ ನಾಪತ್ತೆಯಾದ ಘಟನೆಯೂ ನಡೆಯಿತು.ದೇವಸ್ಥಾನವೊಂದರ ಪುಷ್ಕರಣಿ ಮುಚ್ಚಿ ಪಾಲಿಕೆ ಅಧಿಕಾರಿಗಳೇ ಅಕ್ರಮವಾಗಿ ರಸ್ತೆ ಮಾಡಿರುವುದು ದೊಡ್ಡ ಅಪರಾಧ. ಪೊಲೀಸ್ ಆಯುಕ್ತರಂತೂ ಹೋರಾಟ ಹತ್ತಿಕ್ಕುವ ಮೂಲಕ ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ರಸ್ತೆ ನಿರ್ಮಾಣ ಮಾಡುವಾಗಲೇ ಈ ಬಗ್ಗೆ ಎಚ್ಚೆತ್ತುಕೊಂಡಿದ್ದರೆ ಇಷ್ಟೊಂದು ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ. ಈಗ ಶಾಂತಿಯಿಂದ ಪ್ರತಿಭಟಿಸಿದ್ದು, ನಾಳೆ ಕ್ರಾಂತಿಯೇ ಆಗಲಿದೆ. ಪೊಲೀಸರ ಲಾಠಿಗಳಿಗೆ ಹೆದರುವುದಿಲ್ಲ.

ಪ್ರಮೋದ ಮುತಾಲಿಕ್, ಶ್ರೀರಾಮ ಸೇನೆ ಮುಖ್ಯಸ್ಥರು

ಹುಬ್ಬಳ್ಳಿಯ ಪುರಾತನ ದೇವಸ್ಥಾನ ಇದಾಗಿದ್ದು, ಪುಷ್ಕರಣಿ ಇರುವುದು ಗೊತ್ತಿದ್ದರೂ ಪಾಲಿಕೆಯ ಕಾಂಗ್ರೆಸ್ ಸದಸ್ಯರೇ ₹ 25 ಲಕ್ಷ ವೆಚ್ಚದಲ್ಲಿ ಈ ರಸ್ತೆ ಮಾಡಿಸಿದ್ದಾರೆ. ಕಾಂಗ್ರೆಸ್ ಅಣತಿಯಂತೆ ಪಾಲಿಕೆ ಆಯುಕ್ತರು ನಡೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಹಣೆಯಲ್ಲಿ ಕುಂಕುಮ ಇಟ್ಟು ನಾಟಕ ಮಾಡುತ್ತಿದ್ದಾರೆ. ಇದು ಮೊದಲ ದಿನದ ಹೋರಾಟವಾಗಿದ್ದು, ಹಿಂದೂಗಳನ್ನು ಕೆಣಕಿದರೆ ನಿಮಗೆ ದೇವರ ಶಾಪ ತಟ್ಟುತ್ತದೆ.

ಅರವಿಂದ ಬೆಲ್ಲದ, ವಿಧಾನಸಭೆ ವಿಪಕ್ಷ ಉಪನಾಯಕದೇವಸ್ಥಾನದ ಪುಷ್ಕರಣಿ ಇರುವ ಬಗ್ಗೆ ಎಚ್ಚರಿಸಿದರೂ ಪೊಲೀಸರ ಬಂದೋಬಸ್ತ್ನಲ್ಲಿ ರಾತ್ರೋರಾತ್ರಿ ರಸ್ತೆ ನಿರ್ಮಾಣವಾಗಿದೆ. ಪುರಾತತ್ಮ ಇಲಾಖೆಯ ದೇವಸ್ಥಾನ ಇದಾಗಿದ್ದು ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಇದು ಕಾನೂನು ಬಾಹಿರ ರಸ್ತೆ. ಬಾಬ್ರಿ ಮಸೀದಿ ಕೆಡವಿ ರಾಮ ಮಂದಿರವನ್ನೇ ಕಟ್ಟಿರುವ ನಾವು ದೇವಸ್ಥಾನದ ಪುಷ್ಕರಣಿಗೊಸ್ಕರ ರಸ್ತೆ ಒಡೆಯೋದು ದೊಡ್ಡ ಕಾರ್ಯವೇ? ಹಿಂದೂಗಳನ್ನು ಕೆರಳಿಸಬೇಡಿ. ಕೂಡಲೇ ರಸ್ತೆ ತೆರವುಗೊಳಿಸಿ. ಇಲ್ಲದೇ ಹೋದಲ್ಲಿ ದೊಡ್ಡ ಹೋರಾಟ ನಡೆಯಲಿದೆ.

ಮಹೇಶ ಟೆಂಗಿನಕಾಯಿ, ಶಾಸಕಭವಾನಿ ಶಂಕರ ನಾರಾಯಣ ದೇವಸ್ಥಾನದ ಪುಷ್ಕರಣಿ ಇರುವುದು ದಾಖಲೆಯಿಂದ ಗೊತ್ತಾಗಿದೆ. ಪುತಾತತ್ವ ಇಲಾಖೆಯು ರಸ್ತೆ ಅಗದು ಉತ್ಖನನ ಮಾಡಿದರೆ ಸತ್ಯ ಗೊತ್ತಾಗಲಿದೆ. ಅದನ್ನು ಬಿಟ್ಟು ನಮ್ಮ ಹೋರಾಟ ಹತ್ತಿಕ್ಕುವ ಕಾರ್ಯ ಮಾಡುವುದು ಬೇಡ. ಯಾವುದೇ ಕಾರಣಕ್ಕೂ ಪುಷ್ಕರಣಿ ಮುಚ್ಚಿ ರಸ್ತೆ ನಿರ್ಮಾಣವಾಗಲು ನಾವು ಬಿಡುವುದಿಲ್ಲ.

ಜಯತೀರ್ಥ ಕಟ್ಟಿ, ಸಮಿತಿ ಸಹ ಸಂಚಾಲಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಡರಗಿ: ಬಿಸಿಯೂಟದ ಉಪ್ಪಿಟ್ಟಿನಲ್ಲಿ ಹಲ್ಲಿ ಪತ್ತೆ, 160 ವಿದ್ಯಾರ್ಥಿಗಳು ಅಸ್ವಸ್ಥ
ದೇಗುಲಗಳು ಶಾಂತಿ, ನೆಮ್ಮದಿ ನೀಡುವ ಪವಿತ್ರ ಕೇಂದ್ರಗಳು: ಫಕೀರ ಸಿದ್ಧರಾಮ ಸ್ವಾಮೀಜಿ