ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಎನ್‌ಆರ್‌ಬಿಸಿಗೆ ಏ.20ವರೆಗೂ ನೀರು ಹರಿಸಲು ಒತ್ತಾಯಿಸಿ ಬೃಹತ್ ಪ್ರತಿಭಟನೆ

KannadaprabhaNewsNetwork | Published : Mar 14, 2025 12:33 AM

ದೇವದುರ್ಗ ತಾಲೂಕಿನ ಅಮಾರಪುರ ಕ್ರಾಸ್ ಬಳಿ ರಾಜ್ಯ ಹೆದ್ದಾರಿ ತಡೆದು ಹೋರಾಟ ನಡೆಸಿದ ಪ್ರತಿಭಟನಾಕಾರರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ದೇವದುರ್ಗ ನಾರಾಯಣಪೂರ ಬಲದಂಡೆ ಕಾಲುವೆಗೆ ಏ.20 ವರೆಗೆ ನೀರು ಹರಿಸಲು ಒತ್ತಾಯಿಸಿ ತಾಲೂಕಿನ ಅಮಾರಪುರ ಕ್ರಾಸ್ ಬಳಿ ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ಗುರುವಾರ ನಡೆಸಿದರು. ಈ ವೇಳೆ ಹೋರಾಟಗಾರರನ್ನು ಬಂಧಿಸಿ ಬಿಡುಗಡೆಗೊಳಿಸಲಾಯಿತು.ಜಾಲಹಳ್ಳಿಯ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ನೀರು ಬಳಕೆದಾರರ ಸಂಘ ಜಂಟಿಯಾಗಿ ಪ್ರತಿಭಟನಾ ಮೆರವಣಿಗೆ ಮುಖಾಂತರ ಕ್ರಾಸ್ ಬಳಿ ಬಂದು ಹೆದ್ದಾರಿ ಸಂಚಾರ ತಡೆದು ಬೇಡಿಕೆ ಈಡೇರಿಸಲು ಆಗ್ರಹಿಸಿದರು.ನಾರಾಯಣಪುರ ವ್ಯಾಪ್ತಿಯಲ್ಲಿ ಸುಮಾರು 1 ಲಕ್ಷ 20 ಸಾವಿರ ಎಕರೆ ಪ್ರದೇಶದಲ್ಲಿ ರೈತರು ಬೆಳೆದ ಬೆಳೆಗಳು ಭತ್ತ, ಮೇಣಸಿನಕಾಯಿ, ಶೇಂಗಾ, ಸಜ್ಜೆ, ಇನ್ನಿತರ ಬೆಳೆಗಳು (ಸ್ಟಾಡಿಂಗ್ ಕ್ರಾಫ್ಟ್) ಇವೆ ಈ ಬೆಳೆಗಳು ಕಟಾವಿಗೆ ಬರಲು ಇನ್ನೂ ಒಂದುವರೆ ತಿಂಗಳು ಸಮಯ ಬೇಕಾಗಿದ್ದು ಕಾರಣ 20 ಏಪ್ರೀಲ್ 2025ರವರೆಗೆ ಕಾಲುವೆ ನೀರು ಹರಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು.ಒಂದು ವೇಳೆ ನೀರಾವರಿ ಸಲಹಾ ಸಮಿತಿಯ ತೀರ್ಮಾನದಂತೆ ಮಾರ್ಚ 23ಕ್ಕೆ ನೀರು ಸ್ಥಗಿತ ಮಾಡಿದಲ್ಲಿ ಪ್ರಸ್ತುತ ರೈತರು ಬೆಳೆದ ಬೆಳೆಗಳು ಸಾವಿರಾರು ಕೋಟಿಯ ರೂಪಾಯಿ ನಷ್ಟವಾಗಿ ರೈತರು ಸಾಲದ ಸುಳಿಗೆ ಗುರಿಯಾಗುತ್ತಾರೆ. ನೀರವಾರಿ ವ್ಯಾಪ್ತಿಯಲ್ಲಿರುವ ಸ್ಟಾಡಿಂಗ್ ಕ್ರಾಪ್ಸ್ ಬೆಳೆಗಳನ್ನು ರಕ್ಷಣೆ ಮಾಡುವುದು ಸರ್ಕಾರ ಹಾಗೂ ನೀರಾವರಿ ಇಲಾಖೆಯ ತುರ್ತು ಜವಬ್ದಾರಿಯಾಗಿರುತ್ತದೆ. ಈಗಾಗಲೇ ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ, ಎರಡನೇ ಬೆಳೆಯೂ ನೀರಿನ ಸಮಸ್ಯೆಯಿಂದ ಬೆಳೆ ಕೈ ಕೊಟ್ಟರೆ ರೈತರಿಗೆ ಉಳಿಗಾಲವಿಲ್ಲ ರೈತರ ಬೆಳೆಗಳನ್ನು ರಕ್ಷಿಸಲು ಏಪ್ರಿಲ್ 20ರವರೆಗೆ ಕಾಲುವೆಗೆ ನಿರಂತರ ನೀರು ಹರಿಸಲು ಸ್ಥಳಕ್ಕೆ ಆಗಮಿಸಿದ ಅಧಿಕಾರಿಯನ್ನು ಒತ್ತಾಯಿಸಿದರು.ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿಪ್ರತಿಭಟನಾಕಾರರನ್ನು ಮನವೊಲಿಸಲು ಅಧಿಕಾರಿಗಳಾದ ರಮೇಶ್ ಜಿ ರಾಥೋಡ್ ಅಧೀಕ್ಷಕರು ಎಂಜಿನಿಯರ್ ಸುರೇಂದ್ರ ರೆಡ್ಡಿ ಕಾರ್ಯನಿರ್ವಾಹಕ ಎಂಜಿನಿಯರ್, ಎಇಇ ಮಹಾಲಿಂಗಪ್ಪ ಭಜಂತ್ರಿ ಯತ್ನ ಮಾಡಿದರಾದರೂ, ಪ್ರತಿಭಟನಾಕಾರರು ಒಪ್ಪಲಿಲ್ಲ. ಅಧಿಕಾರಿಗಳ ಜೊತೆ ಪ್ರತಿಭಟನಾಕಾರರು ವಾಗ್ವಾದಕ್ಕಿಳಿದರು. ನಮಗೆ ಎಪ್ರಿಲ್ 20ವರೆಗೆ ಕಾಲುವೆಗೆ ನೀರು ಬೇಕು ಎಂದು ಪಟ್ಟು ಹಿಡಿದರು.

ಅಧಿಕಾರಿಗಳ ದಿಗ್ಬಂಧನ: ರೈತರ ಬೇಡಿಕೆ ಈಡೇರಿಕೆಗೆ ಒಪ್ಪದ ಅಧಿಕಾರಿಗಳನ್ನು ಹೋರಾಟಗಾರರು ದಿಗ್ಬಂಧನ ಹಾಕಿದರು . ಅಧಿಕಾರಿಗಳನ್ನು ಬಿಡಿಸಲು ಪೋಲಿಸರು ಹೋರಾಟಗಾರರನ್ನು ಬಂಧಿಸಿ ದೇವದುರ್ಗ ಪೋಲಿಸ್ ಠಾಣೆಗೆ ಕರೆತಂದು ಬಿಡುಗಡೆಗೊಳಿಸಿದರು. ವಾಹನ ಸಂಚಾರ ಸ್ಥಗಿತ: ಹೆದ್ದಾರಿ ಸಂಚಾರ ತಡೆದು ಹೋರಾಟ ನಡೆಸಿದ್ದರಿಂದಾಗಿ ಸುಮಾರು ಎರಡು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡ ಕಾರಣ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.ಹೋರಾಟಗಾರರ ಬಂಧನ ಬಿಡುಗಡೆ: ಹೋರಾಟಗಾರರನ್ನು ಬಂಧಿಸಿದ ಪೊಲೀಸರ ವಿರುದ್ಧ ಸಂಘಟನೆ ಮುಖಂಡರು ಪೋಲಿಸ್ ಠಾಣೆ ಎದುರು ಪ್ರತಿಭಟಿಸಿ ಪೋಲಿಸ್ ಇಲಾಖೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಂಧನವಾದ ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಸ್ವಲ್ಪ ಸಮಯ ಪೋಲಿಸ್ ಠಾಣೆಯಲ್ಲಿ ಇಟ್ಟುಕೊಂಡು ನಂತರ ಪ್ರತಿಭಟನಾಕಾರರನ್ನು ಬಿಡುಗಡೆಗೊಳಿಸಿದರು.

ಡಿಸಿಎಂಗೆ ಶಾಸಕಿ ಕರೆಮ್ಮ ಮನವಿ:

ದೇವದುರ್ಗ: ತಾಲ್ಲೂಕಿನಾದ್ಯಂತ ರೈತರು ನಾರಾಯಣಪುರ ಬಲದಂಡೆ ನಾಲೆಯ ನೀರು ನಂಬಿ ನೂರಾರು ಎಕರೆಯಲ್ಲಿ ಭತ್ತ, ಮೆಣಸಿನಕಾಯಿ, ಶೇಂಗಾ, ಮತ್ತು ಈರುಳ್ಳಿ. ಬೆಳೆದಿದ್ದಾರೆ. ರೈತರ ಬೆಳೆಗಳಿಗೆ ಏಪ್ರಿಲ್ 20 ರವರೆಗೆ ನೀರು ಹರಿಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ದೇವದುರ್ಗದ ಶಾಸಕಿ ಕರೆಮ್ಮ ಜಿ. ನಾಯಕ ಅವರು ಬೇಟಿಯಾಗಿ ಮನವಿ ಮಾಡಿದ್ದಾರೆ.ನವೆಂಬರ್‌ನಲ್ಲಿ ನಡೆದ ಐಸಿಸಿ ಸಭೆಯ ತೀರ್ಮಾನದಂತೆ 14 ದಿನ ನೀರು ಹರಿಸಿ. ಹತ್ತು ದಿನ ವಾರ ಬಂಧಿ ಪ್ರಕಾರ ನೀರು ಬಿಡಲಾಗುತ್ತಿದ್ದು, ಮಾರ್ಚ್ 23ಕ್ಕೆ ಕಾಲುವೆಗೆ ನೀರು ಬಂದ್ ಮಾಡಿದರೆ ರೈತರು ನಷ್ಟ ಅನುಭವಿಸಲಿದ್ದಾರೆ. ಭತ್ತದ ಕಾಳು ಕಟ್ಟುತ್ತಿವೆ. ಮೆಣಸಿನಕಾಯಿ ಹಣ್ಣಾಗುವ ಹಂತದಲ್ಲಿದೆ ಪೂರ್ಣ ಪ್ರಮಾಣದಲ್ಲಿ ಬೆಳೆ ಫಸಲು ರೈತರ ಕೈಗೆ ಬರಲು ಎಪ್ರಿಲ್ 20ರವರೆಗೆ ಕಾಲುವೆಗೆ ನೀರು ಹರಿಸುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರರಿಗೆ ಮನವಿ ಮಾಡಿದ್ದಾರೆ.ನೀರಾವರಿ ಸಚಿವರು. ಅಧಿಕಾರಿಗಳು ಏ.20 ರವರೆಗೆ ನೀರು ಹರಿಸಬೇಕು. ಏ.20ರವರೆಗೆ ನೀರು ಹರಿಸದಿದ್ದರೆ ದೇವದುರ್ಗ ಮತ್ತು ರಾಯಚೂರು ಜಿಲ್ಲೆ ಯಾದ್ಯಂತ ರೈತರ ಬೆಳೆದ ಬೆಳೆಗಳು ಒಣಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ರೈತರು ಸಾಲದ ಸುಳಿಗೆ ಸಿಕ್ಕಾಕಿಕೊಳ್ಳಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವುಕುಮಾರ ಅವರಿಗೆ ಶಾಸಕಿ ಕರೇಮ್ಮ ಜಿ ನಾಯಕ ಮನವಿ ಮಾಡಿದ್ದಾರೆ.ತುಂಗಭದ್ರಾ ಜಲಾಶಯಕ್ಕೆ ಭದ್ರಾ ಡ್ಯಾಮಿಂದ 6 ಟಿಎಂಸಿ ನೀರು ಹರಿಸಿ: ಶಾಸಕ ಹಂಪನಗೌಡ ಬಾದರ್ಲಿಸಿಂಧನೂರು: ಭದ್ರಾ ಜಲಾಶಯದಲ್ಲಿ ಹೆಚ್ಚುವರಿ ನೀರು ಸಂಗ್ರಹಣೆ ಇರುವುದರಿಂದ 6 ಟಿಎಂಸಿ ನೀರನ್ನು ತುಂಗಭದ್ರಾ ಜಲಾಶಯಕ್ಕೆ ಬಿಡುಗಡೆ ಮಾಡುವಂತೆ ಶಾಸಕ ಹಂಪನಗೌಡ ಬಾದರ್ಲಿ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.ಈ ಬಗ್ಗೆ ಹೇಳಿಕೆ ನೀಡಿರುವ ಅವರು, ತುಂಗಭದ್ರಾ ಜಲಾಶಯವು 105 ಟಿಎಂಸಿ ನೀರು ಸಂಗ್ರಹಣೆಯಾಗಿ ಮತ್ತು ಮಳೆಯು ಉತ್ತಮವಾಗಿ ಸುರಿದಿದ್ದರಿಂದ ಭತ್ತ, ಜೋಳ, ತೊಗರಿ ಮತ್ತಿತರ ಬೆಳೆಗಳನ್ನು ರೈತರು ಬೆಳೆದಿದ್ದು, ಇದರಲ್ಲಿ ಜೋಳ, ತೊಗರಿ ಬೆಳೆ ಉತ್ತಮ ಇಳುವರಿ ಬಂದಿದೆ. ಆದರೆ ಭತ್ತ ಕಟಾವು ಸಮಯದಲ್ಲಿ ಅನಿರೀಕ್ಷಿತ ಮಳೆ ಬಿದ್ದು ರೈತರು ನಷ್ಟ ಅನುಭವಿಸಬೇಕಾಯಿತು ಎಂದು ವಿವರಿಸಿದ್ದಾರೆ.ಜೊತೆಗೆ ಭತ್ತದ ಬೆಳೆಗೆ ಕೊಳವೆ ರೋಗ ಬಂದು ರೈತರು ಹಾಕಿದ ಬೇಸಿಗೆ ಬೆಳೆ ಇಳುವರಿ ಕಡಿಮೆ ಆಗಬಹುದೆಂಬ ಆತಂಕ ರೈತರಲ್ಲಿ ಮೂಡಿದೆ. ಆದ್ದರಿಂದ ಏಪ್ರಿಲ್ 20 ರವರೆಗೆ ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಸರಬರಾಜು ಮಾಡುವಂತೆ ರೈತರು ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಭದ್ರಾ ಜಲಾಶಯ ದಿಂದ 6 ಟಿಎಂಸಿ ನೀರನ್ನು ಆದಷ್ಟು ತುರ್ತಾಗಿ ತುಂಗಭದ್ರಾ ಜಲಾಶಯಕ್ಕೆ ಬಿಡುಗಡೆಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಬೇಕು ಎಂದು ಗಮನ ಸೆಳೆದಿದ್ದಾರೆ.