ಕನ್ನಡಪ್ರಭ ವಾರ್ತೆ ರಾಮದುರ್ಗ
ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಮದುರ್ಗ ತಾಲೂಕು ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಕಪ್ಪು ಪಟ್ಟಿ ಧರಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಪಟ್ಟಣದ ಹರಳಯ್ಯ ವೃತ್ತದಲ್ಲಿ ಹರಳಯ್ಯ ಮೂರ್ತಿಗೆ ಮಾಲಾರ್ಪಣೆ ನಂತರ ಹೊರಟ ಪ್ರತಿಭಟನಾಕಾರರು ಡಾ.ಅಂಬೇಡ್ಕರ್ ಮಾರ್ಗ ಮುಖಾಂತರ ಮಿನಿ ವಿಧಾನಸೌಧದ ಆವರಣದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿದರು. ಸಂವಿಧಾನದ 25, 26, 27 ಮತ್ತು 28 ವಿಧಿಗಳು ಈ ದೇಶದ ಜನರ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ನೀಡಿದ್ದರೂ, ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಈ ದೇಶದ ಮುಸ್ಲಿಮರ ಮೇಲೆ ಆಕ್ರಮಣ ಮಾಡಲು ಹೊರಟಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಮೊದಲಿನ ಕಾಯ್ದೆ ಪ್ರಕಾರ ವಕ್ಫ್ ಆಸ್ತಿ ಅತಿಕ್ರಮಣ ಮಾಡಿದವರ ವಿರುದ್ಧ ಯಾವಾಗ ಬೇಕಾದರೂ ನ್ಯಾಯಾಲಯಕ್ಕೆ ಹೋಗಬಹುವುದಿತ್ತು. ಆದರೆ ಹೊಸ ಕಾಯ್ದೆ ಪ್ರಕಾರ 12 ವರ್ಷಕ್ಕಿಂತ ಹೆಚ್ಚು ಕಾಲ ಅತಿಕ್ರಮಣ ಮಾಡಿದ್ದರೆ ಅಥವಾ ಬಳಸುತ್ತಿದ್ದರೆ ಅಂತಹ ವ್ಯಕ್ತಿಯ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಅವಕಾಶವಿಲ್ಲ. ಇದು ವಕ್ಫ್ ಆಸ್ತಿ ಅತಿಕ್ರಮಣದಾರರ ರಕ್ಷಣೆಗೆ ಅನುಕೂಲವಾಗುತ್ತದೆ. ಇದು ಮುಸ್ಲಿಮ ವಿರೋಧಿ ಕಾಯ್ದೆಯಾಗಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ಅಸಮಧಾನ ಹೊರಹಾಕಿದರು.ಈ ಸಂದರ್ಭದಲ್ಲಿ ಜಾಮಿಯಾ ಮಸ್ಜಿದ್ನ ಮೌಲಾನಾ ಜಹೂರ ಝಹೂರ ಹಾಜಿ, ಹಳೆತೊರಗಲ್ ಮೌಲಾನ ಅಬ್ದುಲ್ ರಜಾಕ ಸರ್ಕಾಜಿ, ದಲಿತ ಸಂಘರ್ಷ ಸಮಿತಿ ಬಿ.ಆರ್.ದೊಡಮನಿ, ಸಿಐಟಿಯು ಮುಖಂಡ ಗೈಬು ಜೈನೆಖಾನ, ಜನಪರ ಟ್ರಸ್ಟ್ ಅಧ್ಯಕ್ಷ ಸುಭಾಸ ಘೋಡಕೆ, ಜಿಪಂ ಮಾಜಿ ಸದಸ್ಯ ಜಹೂರ ಹಾಜಿ, ಹಾಲಮತ ಸಮಾಜದ ಅಧ್ಯಕ್ಷ ಪಡಿಯಪ್ಪ ಕ್ವಾರಿ, ನಿಂಗಪ್ಪ ಕರಿಗಾರ, ಅಂಜುಮನ್ ಇಸ್ಲಾಂ ಕಮಿಟಿ ಶಬ್ಬೀರಹ್ಮದ ಕಾಜಿ, ಬಸೀರಹ್ಮದ ರೋಣದ, ಮಹ್ಮದಶಫಿ ಬೆಣ್ಣಿ, ಜಮಿಯತ ಉಲಾಮ ಮುಖಂಡ ಇಸ್ಮಾಯಿಲ್ ಮಕಾಂದಾರ ಸೇರಿ ಹಲವರು ನೇತೃತ್ವ ವಹಿಸಿದ್ದರು.