ಕನ್ನಡಪ್ರಭ ವಾರ್ತೆ ಬೇಲೂರು
ಶಿವಪುರ ಕಾವಲಿನ ಜೈನರಗುತ್ತಿಯಲ್ಲಿ ವಿರಾಜಮಾನವಾಗಿರುವ 31 ಅಡಿ ಎತ್ತರದ ಮುನಿಸುವ್ರತ ತೀರ್ಥಂಕರ ಹಾಗೂ 24 ಅಡಿ ಎತ್ತರದ ಪದ್ಮಾಸನ ಭಂಗಿಯಲ್ಲಿ ಕುಳಿತಿರುವ ಶೀತಲನಾಥ ತೀರ್ಥಂಕರ ಮೂರ್ತಿಗಳಿಗೆ ಚಿಕ್ಕಮಗಳೂರು ಜೈನ ಸಮಾಜದಿಂದ ಮಹಾಮಸ್ತಕಾಭಿಷೇಕ ನೆರವೇರಿತು. ದಿಗಂಬರ ಜೈನಮುನಿ ವೀರಸಾಗರ ಮುನಿಮಹಾರಾಜರ ಸಾನಿಧ್ಯದಲ್ಲಿ ನಡೆದ ವೈಭವದ ಮಸ್ತಕಾಭಿಷೇಕವನ್ನು ಚಿಕ್ಕಮಗಳೂರು ಜೈನ ಸಮಾಜದವರು ಮಾತ್ರವಲ್ಲದೆ, ವಿವಿಧೆಡೆಯಿಂದ ಆಗಮಿಸಿದ ಜಿನ ಭಕ್ತರು ವೀಕ್ಷಿಸಿದರು.
ಮೂರ್ತಿಗಳಿಗೆ ಜಲ, ಎಳನೀರು, ಹಾಲು, ಕಷಾಯ, ಚತುಷ್ಕೋನ ಕಳಸ, ಶ್ರೀಗಂಧ ಅಭಿಷೇಕ ನೆರವೇರಿಸಲಾಯಿತು. ಬಣ್ಣಬಣ್ಣದ ಹೂವುಗಳಿಂದ ಮೂರ್ತಿಗಳಿಗೆ ಪುಷ್ಪವೃಷ್ಟಿ ನೆರವೇರಿಸಲಾಯಿತು. ಮೂರ್ತಿಗಳಿಗೆ ಶ್ರಾವಕಿರು ಜಿನ ಗಾಯನ ಹಾಡುತ್ತ ಮಂಗಳಾರತಿ ನೆರವೇರಿಸಿದರು. ಶ್ವೇತಧಾರಿಗಳಾಗಿದ್ದ ಜೈನ ಶ್ರಾವಕರು ಎರಡೂ ಮೂರ್ತಿಗಳಿಗೆ ಶ್ರದ್ಧಾಭಕ್ತಿಯಿಂದ ಮಸ್ತಕಾಭಿಷೇಕ ನೆರವೇರಿಸಿದರು. ಜೈನ ಮುನಿಗಳು ಹಾಗೂ ಪುರೋಹಿತರ ಮಂತ್ರಘೋಷ ಮುಗಿಲು ಮುಟ್ಟುವಂತೆ ಕೇಳಿ ಬರುತ್ತಿತ್ತು. ಮಸ್ತಕಾಭಿಷೇಕ ವೀಕ್ಷಿಸುತ್ತಿದ್ದ ಜೈನ ಶ್ರಾವಕಿಯರು ಸುಶ್ರಾವ್ಯವಾಗಿ ಜಿನ ಗಾಯನ ಹಾಡುತ್ತ ಭಕ್ತಿ ಸಮರ್ಪಿಸಿದರು.ಧಾರ್ಮಿಕ ಸಭೆಯಲ್ಲಿ ವೀರಸಾಗರ ಮುನಿ ಮಹಾರಾಜ್ ಮಾತನಾಡಿ, ಲೋಕಕಲ್ಯಾರ್ಥ ಹಾಗೂ ಪ್ರತಿ ಜೀವಿಗೂ ಒಳಿತಾಗಲಿ ಎಂದು ತೀರ್ಥಂಕರ ಮೂರ್ತಿಗೆ ಮಸ್ತಕಾಭಿಷೇಕ ನೆರವೇರಿಸಲಾಗುವುದು. ಶೀತಲನಾಥ ಹಾಗೂ ಮುನಿಸುವ್ರತ ತೀರ್ಥಂಕರ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ನವೆಂಬರ್ 29ರಿಂದ ಡಿಸೆಂಬರ್ 4ರವರೆಗೆ ಜೈನರಗುತ್ತಿಯಲ್ಲಿ ಪಂಚಕಲ್ಯಾಣಕ ಮಹೋತ್ಸವ ನಡೆಲಾಗಿದೆ. ಜನವರಿ 26ರಂದು ಜೈನರಗುತ್ತಿ ಕ್ಷೇತ್ರದಲ್ಲಿ ಮಂಡಲ ಪೂಜೆ ನೆರವೇರಲಿದೆ. ಪಂಚಕಲ್ಯಾಂಕ ಮಹೋತ್ಸವ ಸಂಪನ್ನಗೊಂಡ ದಿನದಿಂದ 48 ದಿನದವರೆಗೂ ತೀರ್ಥಂಕರ ಮೂರ್ತಿಗಳಿಗೆ ಮಸ್ತಕಾಭಿಷೇಕ ನೆರವೇರಿಸಲಾಗುತ್ತಿದೆ ಎಂದು ಹೇಳಿದರು.