ಕನ್ನಡಪ್ರಭ ವಾರ್ತೆ ಹಲಗೂರು
ಪ್ರಾಥಮಿಕ ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಅರಿವು ಮತ್ತು ಅಭಿರುಚಿ ಹೆಚ್ಚಿಸಲು ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿಯಾಗಲಿದೆ ಎಂದು ಶಿಕ್ಷಕ ಹರೀಶ್ ಕುಮಾರ್ ಅಭಿಪ್ರಾಯಪಟ್ಟರು. ಸಮೀಪದ ಹುಲ್ಲಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಾತನಾಡಿ, ಮನುಷ್ಯನಲ್ಲಿರುವ ಅಜ್ಞಾನ ತೊಡೆದು ಹಾಕಲು ವಿಜ್ಞಾನ ಸಹಕಾರಿಯಾಗಿದೆ. ವಿಜ್ಞಾನ ಮತ್ತು ಕಲೆಗೆ ಸಂಬಂಧಿಸಿದ ಇಂತಹ ವಸ್ತು ಪ್ರದರ್ಶನಗಳು ಮಕ್ಕಳ ಕಲಿಕೆಯಲ್ಲಿ ಆಸಕ್ತಿಯನ್ನು ಹೆಚ್ಚಿಸಲಿದೆ ಎಂದರು. ಮುಖ್ಯ ಶಿಕ್ಷಕಿ ಹೇಮಲತಾ ಮಾತನಾಡಿ, ಮಕ್ಕಳನ್ನು ಪುಸ್ತಕ, ಪರೀಕ್ಷೆ ಬರೆಯುವುದಕ್ಕೆ ಮಾತ್ರ ಸೀಮಿತಗೊಳಿಸದೇ ಮಕ್ಕಳಲ್ಲಿನ ಆಸಕ್ತಿಯನ್ನು ಗುರುತಿಸಿ ಸುಪ್ತ ಪ್ರತಿಭೆಯನ್ನು ಹೊರತೆಗೆಯಲು ಶಾಲೆಯಲ್ಲಿ ವೇದಿಕೆ ಕಲ್ಪಿಸಲಾಗುತ್ತಿದೆ. ಗ್ರಾಮದ ಎಲ್ಲಾ ವಿದ್ಯಾರ್ಥಿಗಳು ಖಾಸಗಿ ಶಾಲೆಯ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗೆ ದಾಖಲಾಗಿ, ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಮನವಿ ಮಾಡಿದರು. ಇದೇ ವೇಳೆ ಪವನ ಶಕ್ತಿ, ಸೌರ ಶಕ್ತಿ, ಮಳೆ ನೀರು ಕೊಯ್ಲು, ಮಾನವನ ಜೀರ್ಣಾಂಗ ವ್ಯೂಹ, ಜೀವಕೋಶ, ಜ್ವಾಲಾಮುಖಿ, ಜಾಗತಿಕ ತಾಪಮಾನ, ಸೂರ್ಯ ಗ್ರಹಣ, ನೀರು ಶುದ್ದೀಕರಣ ಸೇರಿದಂತೆ ಹಲವಾರು ವಸ್ತು ಪ್ರದರ್ಶನ ಮಾದರಿಗಳು ಪೋಷಕರು ಮತ್ತು ವಿದ್ಯಾರ್ಥಿಗಳ ಗಮನ ಸೆಳೆಯಿತು.ಸಮಾರಂಭದಲ್ಲಿ ಗ್ರಾಮದ ಮುಖಂಡರಾದ ಗ್ಯಾಸ್ ನಾಗರಾಜು, ರಾಮೇಗೌಡ, ಮಂಚೇಗೌಡ, ಎಸ್ ಡಿಎಂಸಿ ಅಧ್ಯಕ್ಷೆ ಮಮತ, ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಶ್ರೀನಿವಾಸ್, ಬಿ.ಆರ್.ಪಿ.ಕುಮಾರ್, ಸೋಮಣ್ಣ, ಸಿದ್ದರಾಜು, ಮುಖ್ಯ ಶಿಕ್ಷಕಿ ಹೇಮಲತಾ, ಶಿಕ್ಷಕರಾದ ಆದರ್ಶ, ಶಿಲ್ಪಶ್ರೀ, ಅನ್ನಪೂರ್ಣ, ಹರೀಶ್ ಕುಮಾರ್, ಚಲುವರಾಜು, ಶೇಖರ್, ಸೋಮಣ್ಣ, ಮಂಜುಳಾ, ಭಾಗ್ಯಲಕ್ಷ್ಮೀ, ಪುಟ್ಟಲಕ್ಷ್ಮಮ್ಮ, ಲಕ್ಷ್ಮಣ್, ಶೇಖರ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ರಚಿತಾ, ಅನಿತಾ, ಸೇರಿದಂತೆ ಹಲವರು ಭಾಗವಹಿಸಿದ್ದರು.