ಹೊಸ ತಂತ್ರಜ್ಞಾನದ ಆವಿಷ್ಕಾರಗಳಿಗೆ ಗಣಿತವೇ ಅಡಿಪಾಯ: ಡಾ. ವತ್ಸಲಾ

KannadaprabhaNewsNetwork | Published : Apr 8, 2025 12:33 AM

ಸಾರಾಂಶ

ಎಂಜಿನಿಯರಿಂಗ್‌ನ ಯಾವುದೇ ಬೆಳವಣಿಗೆ, ತಂತ್ರಜ್ಞಾನ ಆವಿಷ್ಕಾರವಾಗಬೇಕಾದರೆ ಗಣಿತ ಸೂತ್ರಗಳು ಮೂಲ ಅಡಿಪಾಯವಾಗಿವೆ.

ಹೊಸಪೇಟೆಯಲ್ಲಿ ಗಣಿತ ಕ್ಲಬ್‌, ಕಾರ್ಯಾಗಾರ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಎಂಜಿನಿಯರಿಂಗ್‌ನ ಯಾವುದೇ ಬೆಳವಣಿಗೆ, ತಂತ್ರಜ್ಞಾನ ಆವಿಷ್ಕಾರವಾಗಬೇಕಾದರೆ ಗಣಿತ ಸೂತ್ರಗಳು ಮೂಲ ಅಡಿಪಾಯವಾಗಿವೆ ಎಂದು ಬೆಂಗಳೂರಿನ ದಯಾನಂದ ಸಾಗರ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜಿನ ಗಣಿತ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ವತ್ಸಲಾ ಜಿ.ಎ. ಹೇಳಿದರು.

ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ (ಪಿಡಿಐಟಿ) ಮಹಾವಿದ್ಯಾಲಯದ ಗಣಿತ ವಿಭಾಗದ ವತಿಯಿಂದ ಐಕ್ಯೂಎಸಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಣಿತ ಕ್ಲಬ್ ಉದ್ಘಾಟನೆ ಮತ್ತು ಗಣಿತ ಕಾರ್ಯಾಗಾರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಗಣಿತ ಸಹಜವಾಗಿ ಸಂಶೋಧನೆ ಮತ್ತು ಅಭಿವೃದ್ಧಿಯ ಮುಖ್ಯ ಅಂಗವಾಗಿದೆ. ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಗಣಿತವು ಅನೇಕ ಮೂಲಭೂತ ಆವಿಷ್ಕಾರಗಳಿಗೆ ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದರು.

ಗಣಿತ ಸೂತ್ರಗಳು, ಮಾದರಿಗಳು ಮತ್ತು ಗಣನಾ ವಿಧಾನಗಳು ವಿವಿಧ ತಂತ್ರಜ್ಞಾನಗಳ ಕಾರ್ಯನಿರ್ವಹಣೆಯನ್ನು, ಪರಿಣಾಮಕಾರಿತ್ವವನ್ನು ಮತ್ತು ಭವಿಷ್ಯದ ತಂತ್ರಜ್ಞಾನಗಳು ಹೇಗೆ ಅಭಿವೃದ್ಧಿಯಾಗಬಹುದು ಎಂಬುದನ್ನು ನಿರ್ಧರಿಸಲಿವೆ. ಆಧುನಿಕ ಎಲೆಕ್ಟ್ರಾನಿಕ್ಸ್ ಹಾಗೂ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಗಣಿತವನ್ನು ಬಳಸಿಕೊಂಡು ಸರ್ಕ್ಯೂಟ್ ಡಿಸೈನಿಂಗ್, ಸಿಗ್ನಲ್ ಪ್ರಾಸೆಸಿಂಗ್‌ಗಳನ್ನು ಮಾಡಲಾಗುತ್ತದೆ ಎಂದರು.

ಮೆಕ್ಯಾನಿಕಲ್ ಎಂಜಿನಿಯರಿಂಗ್ ಲೋಡ್‌ಗಳು, ಶಾಖ ಮತ್ತು ಒತ್ತಡ ಹಾಗೂ ಇತರ ಘನತೆಗಳನ್ನು ಅರ್ಥಮಾಡಿಕೊಳ್ಳಲು ಗಣಿತ ಸೂತ್ರಗಳು ಬಹುಮುಖ್ಯವಾದ ಪಾತ್ರ ವಹಿಸುತ್ತವೆ ಎಂದರು.

ಕಂಪ್ಯೂಟರ್ ಸೈನ್ಸ್ ಆಲ್ಗೋರಿದಮ್‌ಗಳ ವಿಶ್ಲೇಷಣೆ, ಡೇಟಾ ಸ್ಟ್ರಕ್ಚರ್‌ಗಳ ವಿನ್ಯಾಸ, ಮತ್ತು ಕೃತಕ ಬುದ್ಧಿಮತ್ತೆ (AI) ಹೊಂದಿರುವ ಭಾಗಗಳು ಗಣಿತದ ಆಧಾರದ ಮೇಲೆ ಕೆಲಸ ಮಾಡುತ್ತವೆ. ಈಗಾಗಲೇ, ಎಂಜಿನಿಯರಿಂಗ್‌ನಲ್ಲಿ ಗಣಿತವನ್ನು ಇನ್ನಷ್ಟು ದೀರ್ಘ ಆವಿಷ್ಕಾರಗಳಿಗೆ ಸೇರಿಸಲು ಗಣಿತಜ್ಞರು ಹಾಗೂ ಎಂಜಿನಿಯರ್‌ಗಳು ಕೂಡ ಸ್ವರೂಪಗಳನ್ನು ಕಂಡುಹಿಡಿಯುತ್ತಿದ್ದಾರೆ ಎಂದರು.

ಪ್ರಾಂಶುಪಾಲ ಡಾ. ಯು.ಎಂ. ರೋಹಿತ್ ಮಾತನಾಡಿ, ಗಣಿತ ಶಾಸ್ತ್ರವು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಹು ಮುಖ್ಯವಾಗಿವೆ. ಮನುಷ್ಯನಿಗೆ ಬದುಕಲು ಗಾಳಿ ಎಷ್ಟು ಮುಖ್ಯವೋ ಹಾಗೆಯೇ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಗಣಿತಶಾಸ್ತ್ರ ಆಧಾರಸ್ತಂಭವಾಗಿದೆ ಎಂದರು.

ಕಾರ್ಯಕ್ರಮದ ಸಂಚಾಲಕರಾದ ಡಾ. ಎನ್. ಪ್ರಭುದೇವ್ ಮಾತನಾಡಿ, ಗಣಿತ ಕ್ಲಬ್ ಸ್ಥಾಪನೆಯಿಂದ ಇಂತಹ ಕಾರ್ಯಾಗಾರಗಳನ್ನು ಹಾಗೂ ಗಣಿತದ ಬಗ್ಗೆ ವಿಶೇಷ ಉಪನ್ಯಾಸವನ್ನು ಆಯೋಜಿಸಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಪ್ರಾಂಶುಪಾಲ ಡಾ. ಯು.ಎಂ. ರೋಹಿತ್, ಐಕ್ಯೂಎಸಿಯ ಸಂಚಾಲಕ ಡಾ. ಶಿವಕೇಶವ್ ಕುಮಾರ್, ಡೀನ್ ಡಾ. ಮಂಜುಳಾ ಎಸ್.ಡಿ., ಕಾರ್ಯಕ್ರಮದ ಸಂಚಾಲಕ ಡಾ. ಎನ್. ಪ್ರಭುದೇವ್, ಗಣಿತ ವಿಭಾಗದ ಮುಖ್ಯಸ್ಥರಾದ ಡಾ. ಜಯಶ್ರೀ ಡಿ.ಎನ್., ಪ್ರೊ. ಗಿರೀಶ್ ಕೆ.ಆರ್., ಡಾ. ಗಿರಿಜಾ ಹಾಗೂ ಡಾ. ವಿಶ್ವನಾಥ, ವಿವಿಧ ವಿಭಾಗದ ಮುಖ್ಯಸ್ಥರು, ಕಾಲೇಜಿನ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.

Share this article