ಸರ್ಕಾರಕ್ಕಿಂತ ದೊಡ್ಡ ಮಟ್ಟದಲ್ಲಿ ಮಠಗಳಿಂದ ಅನ್ನ, ಅಕ್ಷರ ದಾಸೋಹ: ಬಿ.ವೈ.ವಿಜಯೇಂದ್ರ

KannadaprabhaNewsNetwork | Published : Mar 12, 2025 12:49 AM

ಸಾರಾಂಶ

ನರಸಿಂಹರಾಜಪುರರಾಜ್ಯದಲ್ಲಿ ಸರ್ಕಾರಕ್ಕಿಂತ ಹೆಚ್ಚಾಗಿ ಮಠ, ಮಂದಿರಗಳು ಅನ್ನ ದಾಸೋಹ, ಅಕ್ಷರ ದಾಸೋಹ ನಡೆಸುತ್ತಿವೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಬಾಳೆಹೊನ್ನೂರು ರಂಭಾಪುರಿ ಮಠದಲ್ಲಿ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಕೃಷಿ ಸಮ್ಮೇಳನ- 2005 ಉದ್ಘಾಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ರಾಜ್ಯದಲ್ಲಿ ಸರ್ಕಾರಕ್ಕಿಂತ ಹೆಚ್ಚಾಗಿ ಮಠ, ಮಂದಿರಗಳು ಅನ್ನ ದಾಸೋಹ, ಅಕ್ಷರ ದಾಸೋಹ ನಡೆಸುತ್ತಿವೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಮಂಗಳವಾರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಮಠದಲ್ಲಿ ಜಗದ್ಗುರುಗಳ ಸಾನ್ನಿದ್ಯದಲ್ಲಿ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಕೃಷಿ ಸಮ್ಮೇಳನ - 2025 ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಅನೇಕ ಮುಖ್ಯ ಮಂತ್ರಿಗಳು, ಸರ್ಕಾರಗಳು ಬಂದಿವೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ರೈತರಿಗಾಗಿ ಅನೇಕ ಕಾರ್ಯಕ್ರಮ ಜಾರಿಗೆ ತಂದಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಬಜೆಟ್ ಮಂಡಿಸುವಾಗ ರೈತರಿಗೆ ಅನುದಾನ ಘೋಷಣೆ ಮಾಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಸೈನಿಕರು ದೇಶ ಕಾಯುತ್ತಾರೆ. ರೈತರು ದೇಶದ ಜನರಿಗೆ ಅನ್ನ ನೀಡುತ್ತಾರೆ. ಮಲೆನಾಡು ಭಾಗದಲ್ಲಿ ಅಡಕೆ, ಕಾಫಿ ಮುಖ್ಯ ಕೃಷಿಯಾಗಿದೆ. ಆದರೆ, ಅಡಕೆಗೆ ರೋಗ ಬಾಧೆ ಕಾಣಿಸಿಕೊಂಡು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಭಾರತ ದೇಶದ ಹಿಂದೂಗಳು ವಿವಿಧ ಭಾಷೆಯಲ್ಲಿ ಮಾತನಾಡುತ್ತಿದ್ದರೂ ಸಂಸ್ಕೃತಿ, ಸಂಪ್ರದಾಯದಲ್ಲಿ ಏಕತೆ ಇದೆ. ಇದನ್ನು ಉತ್ತರ ಪ್ರದೇಶದಲ್ಲಿ ನಡೆದ ಕುಂಭ ಮೇಳದಲ್ಲಿ 50- 60 ಕೋಟಿ ಹಿಂದೂಗಳು ಪಾಲ್ಗೊಂಡು ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ವೃದ್ಧ ತಂದೆ, ತಾಯಿಯರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಮಕ್ಕಳಿಗೆ ಶಿಕ್ಷಣ ದೊಂದಿಗೆ ಪೂರಕ ಸಂಸ್ಕಾರ ನೀಡುವ ಕೆಲಸ ಮಾತ್ರ ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಮಕ್ಕಳನ್ನು ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಾಗಿ ಕರೆದುಕೊಂಡು ಬರಬೇಕು ಎಂದು ಸಲಹೆ ನೀಡಿದರು.

ಯಡಿಯೂರಪ್ಪ ಕಷ್ಟ ಬಂದಾಗ ರಂಭಾಪುರಿ ಮಠಕ್ಕೆ ಬಂದು ಆಶೀರ್ವಾದ ಪಡೆಯುತ್ತಿದ್ದರು. ಅವರು ಮಠದ ಭಕ್ತರಾಗಿದ್ದು ಇಲ್ಲಿನ ರಸ್ತೆ ಹಾಗೂ ಮೂಲಭೂತ ಸೌಕರ್ಯಕ್ಕೆ ಕೋಟಿಗಟ್ಟಳೆ ಅನುದಾನ ನೀಡಿದ್ದಾರೆ. ಅವರು ಭರವಸೆ ನೀಡಿದ್ದ ₹10 ಕೋಟಿ ಇನ್ನೂ ಬಿಡುಗಡೆಯಾಗಿಲ್ಲ. ಮುಂದೆ ನಾನು ಆ ಹಣ ಬಿಡುಗಡೆ ಮಾಡಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸಚಿವ ಡಿ.ಎನ್‌.ಜೀವರಾಜ್ ಮಾತನಾಡಿ, ರಂಭಾಪುರಿ ಮಠ ಕೇವಲ ಲಿಂಗಾಯತರ ಮಠವಾಗಿರದೆ ಈ ಭಾಗದ ಎಲ್ಲಾ ಧರ್ಮದವರ ಮಠವಾಗಿದೆ. ಎಲ್ಲಾ ಹಿಂದೂಗಳು ಇಲ್ಲಿಗೆ ಬರುತ್ತಾರೆ. ಇಲ್ಲಿನ ಶ್ರೀಗಳು ಎಲ್ಲರನ್ನೂ ಪ್ರೀತಿಯಿಂದ ಸಮಾನರಾಗಿ ಕಾಣುತ್ತಾರೆ. ಧರ್ಮದ ನಡೆ ಹೇಗಿರಬೇಕು ಎಂದು ಶ್ರೀಗಳು ತೋರಿಸಿದ್ದಾರೆ ಎಂದರು.

-- ಬಾಕ್ಸ್ --

ಸೈನಿಕ, ರೈತನನ್ನು ಎಂದಿಗೂ ಮರೆಯಬಾರದು: ರಂಭಾಪುರಿ ಶ್ರೀ

ಭಾರತ ಹಳ್ಳಿಗಳ ದೇಶ. ಹಳ್ಳಿಗಳ ಉದ್ಧಾರವಾದರೆ ದೇಶ ಉದ್ಧಾರವಾಗುವುದರಲ್ಲಿ ಅನುಮಾನವಿಲ್ಲ. ನೂರಕ್ಕೆ ಎಪ್ಪತ್ತರಷ್ಟು ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಶ್ರಮದಿಂದ ಬೆವರು ಸುರಿಸಿ ದುಡಿದರೆ ಭೂತಾಯಿ ಕೈ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ. ದೇಶ ಸಂರಕ್ಷಣೆಗೆ ಗಡಿ ಕಾಯುವ ಸೈನಿಕ ಮತ್ತು ಅನ್ನ ಕೊಡುವ ರೈತನನ್ನು ಯಾವತ್ತೂ ಮರೆಯಬಾರದು ಎಂದು ರಂಭಾಪುರಿ ಮಠದ ಡಾ.ವೀರಸೋಮೇಶ್ವರ ಜಗದ್ಗುರು ಆಶೀರ್ವಚನ ನೀಡಿದರು.

ಸಭೆ ದಿವ್ಯ ಸಾನ್ನಿಧ್ಯವಹಿಸಿದ್ದ ಅವರು, ಭೂಮಿಯಲ್ಲಿ ಅದ್ಭುತ ಶಕ್ತಿಯಿದೆ. ಭೂ ತಾಯಿ ಮಡಲಿಗೆ ಹಿಡಿ ಕಾಳು ಹಾಕಿದರೆ ಖಂಡಗ ಕಾಳು ಕೊಡುತ್ತಾಳೆ. ಒಕ್ಕಲಿಗ ಒಕ್ಕಿದರೆ ಲೋಕವೆಲ್ಲ ಉಕ್ಕುವುದು. ಒಕ್ಕಲಿಗೆ ಒಕ್ಕದಿದ್ದರೆ ಲೋಕವೆಲ್ಲ ಬಿಕ್ಕು ವುದೆಂದು ಸರ್ವಜ್ಞ ಕವಿ ಎಚ್ಚರಿಸಿದ್ದಾರೆ. ಮಲೆನಾಡು ಪ್ರಾಂತ್ಯದಲ್ಲಿ ಕಾಫಿ ಮತ್ತು ಅಡಕೆ ಬೆಳೆ ಮುಖ್ಯವಾದವು. ಕೃಷಿ ಮಾಡುವ ರೈತ ಏನೇ ಸವಾಲುಗಳು ಬಂದರೂ ಅವುಗಳನ್ನು ಎದುರಿಸಿ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ರೈತರು ಕಷ್ಟ ಬಂದಾಗ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಆತ್ಮಹತ್ಯೆಯಂತಹ ಕಾರ್ಯಕ್ಕೆ ಕೈ ಹಾಕಬಾರದು ಎಂದು ಕಿವಿ ಮಾತು ಹೇಳಿದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್‌.ಸಚಿನ್‌ ಕುಮಾರ್, ಬಾಳೆಹೊನ್ನೂರು ರಂಭಾಪುರಿ ಪೀಠದ ಬೀರೂರು ಶಾಖಾ ಮಠದ ಶ್ರೀ ಷ.ಬ್ರ.ರುದ್ರಮುನಿ ಶಿವಾಚಾರ್ಯ ಸ್ವಾಮಿ, ಕಾಫಿ ಮಂಡಲಿ ಅಧ್ಯಕ್ಷ ಎಂ.ಜೆ.ದಿನೇಶ್‌, ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಎಚ್‌.ಎಲ್‌.ಸುಜಾತಾ, ಹಾಸನದ ಕಾಫಿ ಬೆಳೆಗಾರ ಧರ್ಮರಾಜ ಹೊಂಕ್ರವಲ್ಲಿ, ಹೂವಿನಹಕ್ಲು ಕಾಫಿ ಬೆಳೆಗಾರ ಎಚ್.ವಿ.ರಾಜಗೋಪಾಲ್, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಬೇಲೂರು ಬಿಜೆಪಿ ಮುಖಂಡ ಕರಟಗೆರೆ ಪ್ರಕಾಶ್‌, ಕೃಷಿ ತಜ್ಞ ಚಂದ್ರಶೇಖರ ನಾರಾಯಣಪುರ, ಕುಪ್ಪಗೋಡು ವೀರಭದ್ರಗೌಡ, ಮುಖಂಡರಾದ ಕಲ್ಮರುಡಪ್ಪ, ದೇವರಾಜಶೆಟ್ಟಿ ಮತ್ತಿತರರು ಇದ್ದರು.

-- ಬಾಕ್ಸ್--

ಯಾವುದೇ ಸಮಸ್ಯೆ ಬಂದರೂ ಮೆಟ್ಟಿನಿಲ್ಲುವೆ

ನದಿ ಹರಿಯುವಾಗ ಕಲ್ಲು,ಮಣ್ಣು, ಕಸ ಅಡ್ಡ ಬಂದರೂ ಅದನ್ನು ನಿವಾರಿಸಿಕೊಂಡು ತನ್ನ ಜಾಗವನ್ನು ಸೇರುತ್ತದೆ. ಅದೇ ರೀತಿ ನನಗೆ ಯಾವುದೇ ಸಮಸ್ಯೆ ಬಂದರೂ ಗುರುಗಳ ಆಶೀರ್ವಾದದಿಂದ ಅದನ್ನು ಮೆಟ್ಟಿ ನಿಂತು ಸಂಘಟನೆ ಮಾಡಿ ನನ್ನ ಗುರಿ ತಲುಪುತ್ತೇನೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾರ್ಮಿಕವಾಗಿ ತಿಳಿಸಿದರು.

Share this article