- ಜಗಳೂರು ತಾಲೂಕು ವಿಕಲಚೇತನರ ಅಭಿವೃದ್ಧಿ ಸಂಘ ವಾರ್ಷಿಕೋತ್ಸವ- ಸಾಧಕರಿಗೆ ಪ್ರಶಸ್ತಿ ಪ್ರದಾನ - - - ಕನ್ನಡಪ್ರಭ ವಾರ್ತೆ ಜಗಳೂರು
ವಿಶೇಷಚೇತನರಿಗೆ ಹೋಲಿಸಿದರೆ ನಾವೆಲ್ಲ ಭಾಗ್ಯವಂತರು. ಆದರೂ, ಸಮಾಜದಲ್ಲಿನ ವಿಕಲಚೇತನರ ಮೇಲೆ ಎಲ್ಲರ ದಯೆ, ಸಹಕಾರ ಹಾಗೂ ಸಹಾಯ ಹೆಚ್ಚಾಗಿ ಇರಲಿ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರು.ಪಟ್ಟಣದ ಗುರು ಭವನದಲ್ಲಿ ಬುಧವಾರ ತಾಲೂಕು ವಿಕಲಚೇತನರ ಅಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕೋತ್ಸವ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರ ಸಂಘದ ನೇತೃತ್ವ ವಹಿಸಿದ ಮಹಾಂತೇಶ್ ಬ್ರಹ್ಮ ಎರಡು ಕಾಲು ಕಳೆದುಕೊಂಡರು. ಸಂಘಟನೆ ಮಾಡಿ ಎಲ್ಲರನ್ನು ಒಗ್ಗೂಡಿಸಿ, ಸರ್ಕಾರದ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಸೇವೆ ಎಂದರು.ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ನನ್ನಅವಧಿಯಲ್ಲಿ ವಿಕಲಚೇತನರಿಗೆ ಕೈಲಾದಷ್ಟು ಸೇವೆಯ ಜೊತೆಗೆ ಸರ್ಕಾರದಿಂದ ಸೌಲಭ್ಯಗಳನ್ನು ಕೊಡಲು ಶ್ರಮಿಸಿದ್ದೇನೆ. ಸಿರಿಗೆರೆ ಶ್ರೀಗಳ ಸಹಕಾರದಿಂದ ಕ್ಷೇತ್ರದ 57 ಕೆರೆಗಳಿಗೆ ನೀರು ತರಲು ಶ್ರಮಿಸಿದ್ದೇನೆ. ಯಡಿಯೂರಪ್ಪರವರು ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಶ್ರಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆ ನೀರು ಬಂದರೆ ಜಗಳೂರು ಕ್ಷೇತ್ರ ಹಚ್ಚಹಸಿರಾಗಿ ಪರಿವರ್ತನೆ ಆಗಲಿದೆ. ಆ ಮೂಲಕ ರೈತರು ಆರ್ಥಿಕ ಶಕ್ತಿಯಾಗಿ ಮುನ್ನಡೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಕಲಚೇತನರ ಅಭಿವೃದ್ಧಿ ಸಂಘ ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವಿಕಲಚೇತನರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಕೊರತೆಯಿದೆ. ಕಾರ್ಯಕ್ರಮಗಳನ್ನು ನಡೆಸುವ ಮುಖಾಂತರ ಅರಿವು ಮೂಡಿಸುವ ಜೊತೆಗೆ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಘ ಕೆಲಸ ಮಾಡುತ್ತಿದೆ ಎಂದರು.ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶಾಸಕ ಬಿ.ದೇವೆಂದ್ರಪ್ಪ, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ. ಟಿ.ಜಿ.ರವಿಕುಮಾರ್, ಜಿ.ಪಂ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ, ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ಬಿ.ಮಹೇಶ್ವರಪ್ಪ ಅವರನ್ನು ಪ್ರಶಸ್ತಿಗಳ ನೀಡಿ ಗೌರವಿಸಲಾಯಿತು.
ಪ.ಪಂ. ಮುಖ್ಯಾಧಿಕಾರಿ ಲೋಕ್ಯಾ ನಾಯ್ಕ, ಕೃಷಿ ಇಲಾಖೆ ಅಧಿಕಾರಿ ಶ್ವೇತಾ, ಬಿಇಒ ಹಾಲಮೂರ್ತಿ, ಹನುಮಂತಾಪುರ ಗ್ರಾಪಂ ಅಧ್ಯಕ್ಷೆ ಅಶ್ವಿನಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿದಾನಂದ ಜಿ.ಎಸ್., ಪಪಂ ಸದಸ್ಯ ಎಂಎಲ್ಎ ತಿಪ್ಪೇಸ್ವಾಮಿ, ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು, ಪ್ರಾಂಶುಪಾಲ ನಾಗಲಿಂಗಪ್ಪ, ಡಿಎಸ್ಎಸ್ ತಾಲೂಕು ಅಧ್ಯಕ್ಷ ಸತೀಶ್ ಮಲೆಮಾಚಿಕೆರೆ, ಅಂಜಿನಪ್ಪ, ವಿಕಲಚೇತನರ ಸಂಘದ ಮುಖಂಡರು, ಹನುಮಂತಾಪುರ ಪಂಚಾಯಿತಿಯ ಸದಸ್ಯರು, ವಿವಿಧ ಸಂಘಟನೆಯ ಮುಖಂಡರು ಸೇರಿದಂತೆ ಮತ್ತಿತರರಿದ್ದರು.- - -
ಬಾಕ್ಸ್ * ಅಂಗವಿಕಲರಿಗೆ ಸೌಲಭ್ಯಗಳ ನೀಡಿ ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಜಯಕುಮಾರ್ ಸಂತೋಷ್ ಮಾತನಾಡಿ, ವಿಶೇಷಚೇತನರಿಗೆ ಅನುಕಂಪದ ಮಾತುಗಳನ್ನು ಆಡಿದರೆ ಸಾಲದು. ಬದಲಿಗೆ ಅವರಿಗೆ ಅಗತ್ಯವಾಗಿ ಬೇಕಾಗುವಂತಹ ಎಲ್ಲ ಸೌಲಭ್ಯಗಳನ್ನು ನೀಡಬೇಕು. ಅವರನ್ನು ಪಾಲನೆ, ಪೋಷಣೆ ಮಾಡಿದಾಗ ಮಾತ್ರ ಮಾನವ ಬದುಕು ಸಾರ್ಥಕವಾಗುತ್ತದೆ. ನನ್ನ ಮಗನಿಗೆ ಶೇ.೯೦ರಷ್ಟು ಅಂಗವೈಕಲ್ಯತೆ ಇದ್ದು, ನನ್ನ ಮಡದಿ ಅವನನ್ನು ದೇವರ ಸಮಾನ ಎಂದು ತಿಳಿದು ಪ್ರೀತಿಯಿಂದ ಪಾಲನೆ- ಪೋಷಣೆ ಮಾಡುತ್ತಾಳೆ ಎಂದು ತಿಳಿಸಿದರು.- - - -07ಜೆ.ಜಿ.ಎಲ್.1:
ಜಗಳೂರು ಪಟ್ಟಣದ ಗುರು ಭವನದಲ್ಲಿ ಬುಧವಾರ ವಿಕಲಚೇತನರ ಅಭಿವೃದ್ಧಿ ಸಂಘ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕೋತ್ಸವ ಹಾಗೂ ವಿವಿಧ ಕ್ಷೇತ್ರದ ಸಾಧಕರಿಕೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶಾಸಕ ಬಿ. ದೇವೇಂದ್ರಪ್ಪ ಉದ್ಘಾಟಿಸಿದರು.