ಕನ್ನಡಪ್ರಭ ವಾರ್ತೆ ಯಳಂದೂರು
ಪ್ರತಿಯೊಂದು ಗ್ರಾಮವೂ ನೈರ್ಮಲ್ಯದಿಂದ ಕೂಡಿರಬೇಕು ಎಂದು ಗ್ರಾಮ ಅಭಿವೃದ್ಧಿ ಅಧಿಕಾರಿ ಮಹದೇವಸ್ವಾಮಿ ತಿಳಿಸಿದರು.ತಾಲೂಕಿನ ಕೆಸ್ತೂರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಚಾಮರಾಜನಗರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸ್ವಚ್ಛ ಭಾರತ್ ಮಿಷನ್, ಜಲ ಜೀವನ್ ಮಿಷನ್ ವತಿಯಿಂದ ಶುಕ್ರವಾರ ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮಗಳು ಅಭಿವೃದ್ಧಿ ಹೊಂದಿದರೆ ದೇಶ ಅಭಿವೃದ್ಧಿ ಹೊಂದುತ್ತದೆ ಎಂಬುದು ಗಾಂಧೀಜಿ ಚಿಂತನೆಯಾಗಿದೆ. ನಾವು ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳ ಜೊತೆಗೆ ಸ್ವಚ್ಚತೆ ಮತ್ತು ಉತ್ತಮ ಆರೋಗ್ಯ ನಿರ್ಮಾಣ ಮಾಡುವುದಕ್ಕೆ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕಾಗಿದೆ.
ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ ಗ್ರಾಮನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ ಇದ್ದು, ಈ ಸಮಿತಿಯು ನೀರು ಸರಬರಾಜು ಮತ್ತು ಸ್ವಚ್ಛತೆ ಯೋಜನೆಗಳ ಅನುಷ್ಠಾನದಲ್ಲಿ ಪಂಚಾಯತಿಗಳಿಗೆ ನೆರವಾಗುವ ಸಮಿತಿಯಾಗಿದೆ. ಜಲಜೀವನ್ ಮಿಷನ್ ಯೋಜನೆಯಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿದೆ. ಹಾಗೂ ನೀರು ಬಳಕೆಯಲ್ಲಿ ಜಾಗೃತಿ ಮುಖ್ಯವಾಗಿದೆ. ನಮ್ಮ ಕೆಸ್ತೂರು ಗ್ರಾಪಂ ಬಯಲು ಮುಕ್ತವಾಗಿದೆ ಹಾಗೂ ಸ್ವಚ್ಛತೆಯಲ್ಲಿಯೂ ಕೂಡ ಬದಲಾವಣೆಯಾಗಿದೆ ಎಂದರು.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅನುಷ್ಠಾನ ಅಧಿಕಾರಿ ರಂಗಸ್ವಾಮಿ ನಾಯಕ್ ತರಬೇತಿ ನೀಡಿದರು. ಈ ಸಮಿತಿ ಸದಸ್ಯರು ಗ್ರಾಪಂ ಸದಸ್ಯರಾಗಿರಬೇಕು, ಈ ಸಮಿತಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಕಾರ್ಯದರ್ಶಿಗಳು, ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು ಸಮಿತಿಯಲ್ಲಿ ಪದಾಧಿಕಾರಿಗಳಾಗಿದ್ದಾರೆ. ಕಾರ್ಯದರ್ಶಿಯಾಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳೇ ಆಗಿರಬೇಕು. ಈ ಸಮಿತಿಯ ಅಧಿಕಾರವಧಿ ರಚನೆ ಆದಾಗಿನಿಂದ 30 ತಿಂಗಳವರೆಗೆ ಗರಿಷ್ಠ 10 ಮಂದಿ ಸದಸ್ಯರಿರಬೇಕು, ಶೇ.50 ಮಹಿಳೆಯರು ಇರಬೇಕು, ಶೇ.20 ರಷ್ಟು ಎಸ್ಸಿ, ಎಸ್ಟಿ ಸದಸ್ಯರಿರಬೇಕು ಈ ಸಮಿತಿಯ ಉದ್ದೇಶ ನೀರು ಸರಬರಾಜು ವ್ಯವಸ್ಥೆ, ಗ್ರಾಮದ ಸ್ವಚ್ಚತೆ, ಗ್ರಾಮದ ನೈರ್ಮಲ್ಯೀಕರಣ, ಚರಂಡಿ ವ್ಯವಸ್ಥೆಯ ಜವಾಬ್ದಾರಿಯಾಗಿದೆ.ಗ್ರಾಮದ ಪರಿಸರ ಸ್ವಚ್ಛತೆ, ಕುಡಿಯುವ ನೀರಿನ ಮಿತ ಬಳಕೆ ಹಾಗೂ ಜಾಗೃತಿ ಕುರಿತು ತಿಳಿಸುತ್ತದೆ. ಈ ಸಂದರ್ಭದಲ್ಲಿ ಗ್ರಾಮಪಂಚಾಯತಿ ಅಧ್ಯಕ್ಷೆ ದೊಡ್ಡತಾಯಮ್ಮ, ಸಮಾಲೋಚಾನ ಅಧಿಕಾರಿ ಮಹೇಶ್, ಸದಸ್ಯರಾದ ರಾಜು, ಸದಸ್ಯರುಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.