ನಂಬಿದ ಭಕ್ತರ ಕೋರಿಕೆಗಳನ್ನು ಈಡೇರಿಸುವ ರಾಘವೇಂದ್ರ ಶ್ರೀಗಳುಕನ್ನಡಪ್ರಭ ವಾರ್ತೆ ಚಳ್ಳಕೆರೆಕಳೆದ ಹಲವಾರು ದಶಕಗಳಿಂದ ತನ್ನನ್ನು ನಂಬಿದ ಭಕ್ತರಿಗೆ ವರಕೊಡುವ ಗುರು ರಾಘವೇಂದ್ರ ಸ್ವಾಮೀಜಿ ಕೊಡುಗೆ ಅಪಾರವಾದದ್ದು. ಇಂದಿಗೂ ಸಹ ಶ್ರೀರಾಯರ ಮಠ ಎಲ್ಲೆಡೆ ಭಕ್ತಿ ಶ್ರದ್ಧಾ ಕೇಂದ್ರವಾಗಿದೆ. ಬದುಕಿನಲ್ಲಿ ನೆಮ್ಮದಿ ಕಾಣಲು ಎಲ್ಲರೂ ರಾಯರ ಮೊರೆ ಹೋಗಬೇಕಿದೆ. ರಾಯರ ಮಹಿಮೆ ಅಪಾರವಾಗಿದೆ. ನಾನು ಸಹ ರಾಯರ ಅಪರಮಿತಭಕ್ತನಾಗಿದ್ದು, ಇಲ್ಲಿನ ನಂಜನಗೂಡು ರಾಘವೇಂದ್ರಸ್ವಾಮಿಗಳ ಮಠ ಭಕ್ತರ ಪುಣ್ಯಕ್ಷೇತ್ರವಾಗಿದೆ ಎಂದು ಚಿತ್ರದುರ್ಗ ನೂತನ ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ನಂತರ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಪ್ರಚಾರ ಆರಂಭಕ್ಕೂ ಮುನ್ನ ನಾನು ಇಲ್ಲಿಗೆ ಬಂದು ರಾಯರಲ್ಲಿ ಪ್ರಾರ್ಥಿಸಿದ್ದೆ. ರಾಯರು ನನಗೆ ಜಯವನ್ನು ತಂದುಕೊಡುವ ಮೂಲಕ ಆಶೀರ್ವಾದ ಮಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಎನ್ಡಿಎ ಸರ್ಕಾರ ಎಲ್ಲಾ ಸಮಾಜ ಹಾಗೂ ಧರ್ಮದ ಉಳಿವಿಗಾಗಿ ಶ್ರಮಿಸುತ್ತದೆ ಎಂದರು.
ಇಂದು ವಿಶ್ವಮಟ್ಟದಲ್ಲಿ ಭಾರತದ ಹೆಸರು ಖ್ಯಾತಿಯಾಗಿದೆ ಎಂದರೆ ಅದಕ್ಕೆ ನರೇಂದ್ರ ಮೋದಿಯವರೇ ಕಾರಣ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ನನಗೆ ಹೆಚ್ಚು ಮತಗಳಿಂದ ಗೆಲ್ಲಿಸಿ ವಿಜಯಶಾಲಿಯನ್ನಾಗಿ ಮಾಡಿದ್ದು, ಮತದಾರರ ಋಣ ತೀರಿಸಲು ನಾನು ಬದ್ದನಾಗಿದ್ದೇನೆ. ವಿಶೇಷವಾಗಿ ನಾಡಿನ ಬ್ರಾಹ್ಮಣ ಸಮಾಜದ ಸರ್ವರ ಹಿತಕ್ಕಾಗಿ ಧಾರ್ಮಿಕ ಜಾಗೃತಿಗೆ ಕಾರ್ಯನಿರ್ವಹಿಸುತ್ತಿರುವುದು ಸಂತಸ ತಂದಿದೆ ಎಂದರು.ಬ್ರಾಹ್ಮಣ ಸಂಘದ ತಾಲೂಕು ಅಧ್ಯಕ್ಷ ಡಾ. ಅನಂತರಾಮ್ ಗೌತಮ್ ಸ್ವಾಗತಿಸಿ ನೂತನ ಸಂಸದ ಗೋವಿಂದ ಎಂ.ಕಾರಜೋಳರವರ ವ್ಯಕ್ತಿತ್ವದ ಬಗ್ಗೆ ಮಾಹಿತಿ ನೀಡಿದರು.
ಶ್ರೀಮಠದ ಗುರುರಾಜ್ಭಟ್, ಕಿಶೋರ್ಶೆಟ್ಟಿ, ಅಮರನಾಥಗುಪ್ತ, ಎಂ.ಪಿ. ಗುರುರಾಜ್, ಬ್ರಾಹ್ಮಣ ಸಂಘದ ಕಾರ್ಯದರ್ಶಿ ಎಂ.ಸತ್ಯನಾರಾಯಣರಾವ್, ಖಜಾಂಚಿ ಜಿ. ಕೃಷ್ಣಮೂರ್ತಿ, ನಿರ್ದೇಶಕರಾದ ಸಿ.ಎಸ್. ಗೋಪಿನಾಥ, ಪ್ರದೀಪ್ಶರ್ಮ, ಶಾಂತಮ್ಮ, ಶೈಲಜಾ, ಲಕ್ಷ್ಮೀಶ್ರೀವತ್ಸ, ಸೀತಾಲಕ್ಷ್ಮೀ ವಾದಿರಾಜ್, ಮಠದ ವ್ಯವಸ್ಥಾಪಕ ಶ್ರೀನಾಥಭಟ್, ರಾಘವೇಂದ್ರ, ಶ್ರೀನಾಥ ಆಚಾರ್, ವೇಣುಗೋಪಾಲ ಮುಂತಾದವರು ಉಪಸ್ಥಿತರಿದ್ದರು.