ಪ್ರತಿ ಮನೆಯಲ್ಲೂ ವೀರ ವನಿತೆಯರು ಜನಿಸಲಿ: ಪ್ರಮೋದ ಮುತಾಲಿಕ್

KannadaprabhaNewsNetwork |  
Published : Apr 01, 2025, 12:45 AM IST
ಸಿದ್ದಾಪುರದಲ್ಲಿ ಯುಗಾದಿ ಉತ್ಸವದ ಸಭಾ ಕಾರ್ಯಕ್ರಮವನ್ನು ಮಾಧವಾನಂದ ಭಾರತೀ ಮಹಾಸ್ವಾಮಿಗಳು ಉದ್ಘಾಟಿಸಿದರು. ಬ್ರಹ್ಮಾನಂದ ಭಾರತೀಸ್ವಾಮೀಜಿ, ಪ್ರಮೋದ ಮುತಾಲಿಕ ಮುಂತಾದವರಿದ್ದರು. | Kannada Prabha

ಸಾರಾಂಶ

ನಾವು ಇಂದು ಪಾಶ್ಚಿಮಾತ್ಯ ಜೀವನ ಕ್ರಮದಿಂದ ಆಕರ್ಷಿತರಾಗುತ್ತಿದ್ದೇವೆ. ಅದು ಸರಿಯಾದ ಕ್ರಮವಲ್ಲ. ನಮ್ಮ ಗುರು ಹಿರಿಯರು ತೋರಿಸಿದ ಮಾರ್ಗವೇ ಧರ್ಮ. ಆದ್ದರಿಂದ ನಮ್ಮ ಸಂಸ್ಕೃತಿಯನ್ನು ನಾವು ಪಾಲಿಸುವಂತಾಗಬೇಕು ಎಂದು ಶ್ರೀಮನ್ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮಿಗಳು ಹೇಳಿದರು.

ಸಿದ್ದಾಪುರ: ನಮ್ಮ ದೇಶದ ತಾಯಂದಿರು, ಅಕ್ಕ-ತಂಗಿಯರು ಸುರಕ್ಷಿತವಾಗಿರಬೇಕಾದರೆ ಪ್ರತಿ ಹಿಂದೂವಿನ ಮನೆಯಲ್ಲೂ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಜೀಜಾಬಾಯಿಯಂತಹ ವೀರ ವನಿತೆಯರು ಹುಟ್ಟುವಂತಾಗಬೇಕು ಎಂದು ಶ್ರೀರಾಮ ಸೇನೆಯ ಪ್ರಮುಖ ಪ್ರಮೋದ ಮುತಾಲಿಕ್ ಹೇಳಿದರು.

ಪಟ್ಟಣದ ಐತಿಹಾಸಿಕ ನೆಹರೂ ಮೈದಾನದಲ್ಲಿ ನಡೆದ ಯುಗಾದಿ ಉತ್ಸವದ ಮುಖ್ಯ ವಕ್ತಾರರಾಗಿ ಭಾಗಿಯಾಗಿ ಅವರು ಮಾತನಾಡಿ, ದೇಶ ವಿರೋಧಿಗಳು ಈಗ ಕ್ರೂರಿ ಔರಂಗಜೇಬನನ್ನು ವೈಭವೀಕರಿಸುತ್ತಿದ್ದಾರೆ. ಇದರಿಂದ ದೇಶಕ್ಕೆ ಯಾವ ಸಂದೇಶ ನೀಡುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಹಿಂದೂ ಪರ ಸಂಘಟನೆಗಳು ಇರದಿದ್ದರೆ ನಾವಿಂದು ನಿರ್ಭಯವಾಗಿ ಸಭೆ-ಸಮಾರಂಭಗಳನ್ನು ಮಾಡಲು ಆಗುತ್ತಿರಲಿಲ್ಲ. ಸ್ವಾತಂತ್ರ‍್ಯ ಬಂದು ೭೮ ವರ್ಷ ಕಳೆದರೂ ನಮ್ಮಲ್ಲಿ ದಾಸ್ಯದ ಮನೋಭಾವನೆ ದೂರವಾಗಿಲ್ಲ. ಮರಗಳ ಒಣಎಲೆಗಳನ್ನು ಉದುರಿಸುವಂತೆ ದಾಸ್ಯ ಮನೋಭಾವ ಬಿಟ್ಟು ರಾಷ್ಟ್ರೀಯತೆಯ ಭಾವ ಬೆಳೆಸಿಕೊಳ್ಳಬೇಕು. ನಮ್ಮಲ್ಲಿರುವ ತ್ರಿಶೂಲಧಾರಿ ಶಿವ ಮತ್ತು ಚಕ್ರಧಾರಿ ಕೃಷ್ಣನನ್ನು ಎಚ್ಚರಿಸಿದಾಗ ಮಾತ್ರ ದೇಶ ಸುಭದ್ರವಾಗಿರಲು ಸಾಧ್ಯ ಎಂದರು.

ತಾಲೂಕಿನ ಶ್ರೀಮನ್ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ನಾವು ಇಂದು ಪಾಶ್ಚಿಮಾತ್ಯ ಜೀವನ ಕ್ರಮದಿಂದ ಆಕರ್ಷಿತರಾಗುತ್ತಿದ್ದೇವೆ. ಅದು ಸರಿಯಾದ ಕ್ರಮವಲ್ಲ. ನಮ್ಮ ಗುರು ಹಿರಿಯರು ತೋರಿಸಿದ ಮಾರ್ಗವೇ ಧರ್ಮ. ಆದ್ದರಿಂದ ನಮ್ಮ ಸಂಸ್ಕೃತಿಯನ್ನು ನಾವು ಪಾಲಿಸುವಂತಾಗಬೇಕು ಎಂದರು.

ಸಭೆಯ ಸಾನ್ನಿಧ್ಯ ವಹಿಸಿದ್ದ ಶಿರಳಗಿ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಆಶೀರ್ವಚನ ನೀಡಿ, ಯುಗಾದಿ ಹಿಂದುತ್ವದ ಪ್ರಜ್ಞೆ ಜಾಗ್ರತ ಮಾಡಿಕೊಳ್ಳುವ ದಿನ. ಹಿಂದೂಗಳು ಧರ್ಮ ಗ್ರಂಥವನ್ನು ಅಭ್ಯಾಸ ಮಾಡುವ ಪರಿಪಾಠ ರೂಢಿಸಿಕೊಳ್ಳಬೇಕು. ಭಗವಂತನೇ ಸ್ಥಾಪಿಸಿದ ಸನಾತನ ಧರ್ಮ ಇದಾಗಿರುವುದರಿಂದ ಸನಾತನ ಧರ್ಮ ಯಾವಾಗಲೂ ಶಾಶ್ವತವಾಗಿರುತ್ತದೆ ಎಂದರು.

ಯುಗಾದಿ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಈರಾ ನಾಯ್ಕ, ಖಜಾಂಚಿ ಸುದರ್ಶನ ಪಿಳ್ಳೆ ಉಪಸ್ಥಿತರಿದ್ದರು.

ಯುಗಾದಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ಶ್ರೀಧರ ವೈದ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಉತ್ಸವ ಸಮಿತಿ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜೀಬೈಲ್ ವಂದಿಸಿದರು. ಸುಧಾರಾಣಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ