ಅನ್ನ ಬೆಳೆಯುವ ರೈತರು ಹಾಗೂ ಸಾಕಿ ಸಲುಹಿದ ತಂದೆ-ತಾಯಿ ಮತ್ತು ತಿದ್ದಿ-ಬುದ್ಧಿ ಹೇಳಿದ ಗುರುಗಳನ್ನು ಹಾಗೂ ಕಲಿತ ವಿದ್ಯಾ ಸಂಸ್ಥೆಗಳನ್ನು ಎಂದಿಗೂ ಮರೆಯಬಾರದು.
ಕನ್ನಡಪ್ರಭ ವಾರ್ತೆ ಮುಧೋಳ
ವಿದ್ಯಾರ್ಜನೆ ಕಾಲದ ಜೀವನಾನುಭವಗಳನ್ನು ಭವಿಷ್ಯದ ಬದುಕಿಗೆ ಸಾರ್ಥಕವಾಗಿ ಕಟ್ಟಿಕೊಳ್ಳುವ ಮೂಲಕ ಬದುಕನ್ನು ಬಂಗಾರ ಮಾಡಿಕೊಳ್ಳುವ ದೃಢತೆ ವಿದ್ಯಾರ್ಥಿ ಜೀವನದಲ್ಲಿಯೇ ಗಟ್ಟಿಗೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲ ವಿ.ಪಿ.ಹುಣಶಿಕಟ್ಟಿ ಹೇಳಿದರು.ನಗರದ ಆರ್.ಎಂ.ಜಿ ಪದವಿ ಪೂರ್ವ ಮಹಾವಿದ್ಯಾಲಯದ ಪಿಯುಸಿ ವಿಜ್ಞಾನ ವಿಭಾಗದ 2001-2003ನೇ ಸಾಲಿನಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಇತ್ತೀಚೆಗೆ ಹಮ್ಮಿಕೊಂಡಿದ್ದ ಗುರುವಂದನೆ ಮತ್ತು 2ನೇ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದ ಅವರು, ನಮ್ಮನ್ನು ಕಾಯುತ್ತಿರುವ ಸೈನಿಕರು, ನಮಗೆ ದಿನನಿತ್ಯ ಅನ್ನ ಬೆಳೆಯುವ ರೈತರು ಹಾಗೂ ಸಾಕಿ ಸಲುಹಿದ ತಂದೆ-ತಾಯಿ ಮತ್ತು ತಿದ್ದಿ-ಬುದ್ಧಿ ಹೇಳಿದ ಗುರುಗಳನ್ನು ಹಾಗೂ ಕಲಿತ ವಿದ್ಯಾ ಸಂಸ್ಥೆಗಳನ್ನು ಎಂದಿಗೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ನಿವೃತ್ತ ಪ್ರಾಂಶುಪಾಲ ಜಿ.ಎ.ಕಂಬಿ ಮಾತನಾಡಿ, ಇತ್ತೀಚಿನ ದಿನದಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವಿನ ಸಂಬಂಧಗಳು ಹಳಸುತ್ತಿವೆ. ಆದರೆ ಈ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಗುರುಗಳನ್ನು ನೆನಪಿಸಿಕೊಂಡು ಗೌರವಿಸಿ ಇದರ ನೆನಪಲ್ಲಿ 22 ವರ್ಷಗಳ ಹಿಂದಿನ ಸಂಬಂಧವನ್ನು ಜಾಗೃತಗೊಳಿಸುವ ಈ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾದದ್ದು ಎಂದರು.
ನಿವೃತ್ತ ಉಪನ್ಯಾಸಕ ಜೆ.ಬಿ. ಪರದೇಶಿ ಮತ್ತು ವಿ.ವಿ. ಹಂಗರಗಿ ಮಾತನಾಡಿ, ಗುರುವಿನ ಮಹತ್ವ ವಿದ್ಯಾರ್ಥಿಗಳಿಗೆ ಅರ್ಥವಾಗಬೇಕು. ವಿದ್ಯಾರ್ಥಿಯಲ್ಲಿನ ಕಲಿಯುವ ಹಂಬಲ ಗುರುವಿಗೆ ಅರ್ಥವಾಗಬೇಕು ಎಂದು ಹೇಳಿದರು.
ಆರ್.ಎಂ.ಜಿ ಪ.ಪೂ ಕಾಲೇಜಿನ ಪ್ರಾಚಾರ್ಯ ಬಸವರಾಜ ಗಂಜಿಹಾಳ ಅಧ್ಯಕ್ಷತೆ ವಹಿಸಿದ್ದರು. ಮುಧೋಳ ವಿರಕ್ತಮಠ-ಗವಿಮಠದ ಶ್ರೀ ಬಸವಲಿಂಗ ಮಹಾಸ್ವಾಮಿಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಈ ವೇಳೆ ನಿವೃತ್ತ ಉಪನ್ಯಾಸಕರಾದ ಸಿ.ಎಂ.ಬಳ್ಳೊಳ್ಳಿ, ವಿ.ಪಿ. ಹುಣಶಿಕಟ್ಟಿ, ಎಸ್.ಎ. ಪೂಜಾರಿ, ಜಿ.ಎ.ಕಂಬಿ, ಜೆ.ಬಿ. ಪರದೇಶಿ, ಎಸ್.ಎಚ್. ಮೂಡಲಗಿ, ವಿ.ವಿ.ಹಂಗರಗಿ, ಎಸ್.ಬಿ. ಜಲಗೇರಿ, ಎಸ್.ಕೆ.ಗೌಡರ, ಎ.ವಿ.ಪತ್ತಾರ, ಎಸ್.ಎಸ್. ಜಾಧವ, ಶೈಲಜಾ ಪಾಟೀಲ ಹಾಗೂ ಬಿ.ಎ.ಗಂಜಾಳ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದ ಸಂಘಟಕರಾದ ಮಹೇಶ ವಾರದ, ಮೈಬೂಬ ಬಾಗವಾನ, ಡಾ.ಶ್ರೀನಿವಾಸ ನಿಪ್ಪಾಣಿ, ಗೌಡಪ್ಪ ಕೋಳೂರ, ವೀರೇಂದ್ರ ಕೇರಿ, ಸತೀಶ ಪೂಜಾರಿ, ಡಾ.ಕಿರಣ ಹುಣಶಿಕಟ್ಟಿ, ಮುತ್ತರಾಜ ಬಳಗಾರ, ಸುಮಾ ನಂದಿಕೋಲ, ಅನಿತಾ ಸುಖನಾದಗಿ, ಶ್ವೇತಾ ಕಳಂಜಿ ಸೇರಿದಂತೆ 50ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು ವಿದ್ಯಾರ್ಥಿ ಜೀವನದ ನೆನಪುಗಳ ಮೆಲುಕು ಹಾಕಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.