ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪ್ರಧಾನಿ ನರೇಂದ್ರ ಮೋದಿ ಅವರ ಯಶಸ್ವಿ ಆಡಳಿತದ ಹಿನ್ನೆಲೆಯಲ್ಲಿ ಪ್ರಧಾನಿಯವರ ಪ್ರೇರಣೆಯಂತೆ ‘ಏಕ್ ಪೇಡ್ ಮಾ ಕೆ ನಾಮ್’ (ಅಮ್ಮನ ಹೆಸರಲ್ಲಿ ಒಂದು ಗಿಡ) ಸಂಕಲ್ಪದ ಅಡಿಯಲ್ಲಿ ರಾಜ್ಯಾದ್ಯಂತ ವ್ಯಾಪಕವಾಗಿ ಗಿಡಗಳನ್ನು ನೆಡುವ ಮೂಲಕ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಜತೆಗೆ ರಾಜ್ಯದ ಎಲ್ಲಾ ೨೨೪ ಕ್ಷೇತ್ರಗಳ ದೇವಸ್ಥಾನಗಳಲ್ಲಿ ಪ್ರಧಾನಿಯವರ ಹೆಸರಿನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು. ಬೆಂಗಳೂರಿನಿಂದ ಕೊಡಗಿನ ಶನಿವಾರಸಂತೆಯಲ್ಲಿ ಶನಿವಾರ ನಡೆಯಲಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುವ ಮಾರ್ಗದ ಮಧ್ಯೆ, ಹೊಳೆನರಸೀಪುರದ ಮಹಾತ್ಮಗಾಂಧಿ ವೃತ್ತದಲ್ಲಿ ಜಮಾಯಿಸಿದ್ದ ನೂರಾರು ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ಪಟಾಕಿ ಸಿಡಿಸಿ, ಹೂಮಾಲೆ ಹಾಕಿ ಆತ್ಮೀಯವಾಗಿ ಸ್ವಾಗತಿಸಿದರು. ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಿ.ವೈ. ವಿಜಯೇಂದ್ರ ಅವರು ನಂತರ ಬಿಜೆಪಿ ಮಂಡಲ ವತಿಯಿಂದ ನೀಡಿದ ಗೌರವ ಸ್ವೀಕರಿಸಿ, ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತಷ್ಟು ಶಕ್ತಿ ದೊರೆಯಲಿ ಹಾಗೂ ಅವರು ಸುದೀರ್ಘ ಕಾಲ ದೇಶವನ್ನು ಪ್ರಧಾನಮಂತ್ರಿಯಾಗಿ ಮುನ್ನಡೆಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲಾಗುತ್ತಿದೆ. ಜತೆಗೆ ದೇಶಾದ್ಯಂತ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿ ‘ಏಕ್ ಪೇಡ್ ಮಾ ಕೆ ನಾಮ್’ ಕಾರ್ಯಕ್ರಮಕ್ಕೆ ಒಂದು ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಕೇಂದ್ರ ಕೃಷಿ ಸಂಶೋಧನಾ ಮಂಡಳಿ ಸದಸ್ಯ ಮಳಲಿ ನಾರಾಯಣ್ ಮಾತನಾಡಿ, ಪ್ರಧಾನಿ ನರೇಂದ್ರ ಮೊದಿಜೀಯವರು ಮೇ ೨೬, ೨೦೧೪ರಿಂದ ೨೦೨೬ರ ಜೂನ್ ವೇಳೆಗೆ ೧೨ ವರ್ಷಗಳಿಗೂ ಹೆಚ್ಚು ಕಾಲ ಯಶಸ್ವಿಯಾಗಿ ಆಡಳಿತ ನಡೆಸಿದ್ದಾರೆ. ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂಬ ಇತಿಹಾಸ ಸೃಷ್ಟಿಸಿದ್ದಾರೆ ಹಾಗೂ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮುರಿದಿದ್ದಾರೆ ಮತ್ತು ಸತತ ಮೂರು ಅವಧಿಯಲ್ಲಿ (೨೦೧೪, ೨೦೧೯ ಮತ್ತು ೨೦೨೪) ಅಧಿಕಾರ ಹಿಡಿದಿರುವ ಮೊದಲ ಕಾಂಗ್ರೆಸ್ಸೇತರ ನಾಯಕರಾಗಿದ್ದಾರೆ. ಭಾರತವು ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಿಂದ ಹೊರಹೊಮ್ಮಿದೆ. ಬಡತನ ನಿರ್ಮೂಲನೆ ಮತ್ತು ಡಿಜಿಟಲ್ ಮೂಲ ಸೌಕರ್ಯಗಳ ವಿಸ್ತರಣೆಯಲ್ಲಿ ಮಹತ್ವದ ಸಾಧನೆ ಮಾಡಲಾಗಿದೆ. ಭಾರತೀಯ ಸಂಸ್ಕೃತಿ ಹಾಗೂ ಯೋಗವನ್ನು ವಿಶ್ವದ ಉತ್ತುಂಗದಲ್ಲಿ ಸ್ಥಾನ ಕಲ್ಪಿಸುವ ಜತೆಗೆ ಆಚರಣೆಯನ್ನು ಪಾಲನೆ ಮಾಡುವಂತಹ ಸ್ಥಾನಮಾನ ಕಲ್ಪಿಸಿದ ಶ್ರೀಯುತರ ಕಾರ್ಯ ಅಭಿನಂದನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವೀರಶೈವ ಲಿಂಗಾಯತ ಮಹಾವೇದಿಕೆ ರಾಜ್ಯ ಸಮಿತಿ ಸದಸ್ಯ ಹಾಗೂ ವಕೀಲರಾದ ಬಿ.ಆರ್. ವಸಂತ ಕುಮಾರ್, ಬಿಜೆಪಿ ಮಂಡಲದ ಅಧ್ಯಕ್ಷ ಕೆ. ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕೆ.ಅಮಿತ್ ಗೌಡ, ಇಂದಿರಾ ನಾಗರಾಜ್, ಮೋಹನ್, ವಿದ್ಯಾ ಪ್ರಸಾದ್, ತೀರ್ಥೆಶ್, ಕೀರ್ತನ್, ಶ್ರೀಧರ್, ಜಗದೀಶ್, ಇತರರು ಇದ್ದರು.
ಫೋಟೋ
ಹೊಳೆನರಸೀಪುರದ ಮಹಾತ್ಮಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಪಟಾಕಿ ಸಿಡಿಸಿ, ಹೂಮಾಲೆ ಹಾಕಿ ಆತ್ಮೀಯವಾಗಿ ಸ್ವಾಗತಿಸಿದರು.