ಶ್ರೀಗಳ ಸಾಧನೆ ದೇಶದ ಮೂಲೆ ಮೂಲೆಗೂ ತಲುಪಲಿ: ನಾಡೋಜ ಗೋ.ರು.ಚನ್ನಬಸಪ್ಪ ಆಶಯ

KannadaprabhaNewsNetwork | Published : Jun 29, 2025 1:32 AM

ಹೇಗೆ ಭಗವದ್ಗೀತೆಯನ್ನು ಇಸ್ಕಾನ್ ಸಂಸ್ಥೆಯವರು, ವಿವೇಕಾನಂದರನ್ನು ರಾಮಕೃಷ್ಣ ಮಿಷನರಿಗಳು ನಾಡಿಗೆ ಪರಿಚಯಿಸಿದ ರೀತಿ, ನಡೆದಾಡುವ ದೇವರಾಗಿದ್ದ ಡಾ. ಶಿವಕುಮಾರ ಸ್ವಾಮೀಜಿಗಳ ಜೀವನ, ಸಾಧನೆ ಮತ್ತು ಸಂದೇಶಗಳನ್ನು ದೇಶದ ಎಲ್ಲಾ ಭಾಷೆಗಳಲ್ಲಿಯೂ ಮುದ್ರಿಸಿ, ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸವನ್ನು ಹಳೆಯ ವಿದ್ಯಾರ್ಥಿಗಳ ಸಂಘ ಮಾಡಲಿದೆ.ಅದರ ಮೊದಲ ಹೆಜ್ಜೆ ಇದಾಗಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ಸಿದ್ಧಗಂಗಾ ಶ್ರೀಗಳ ಕುರಿತು ಬರೆಯುವುದೆಂದರೆ ಭಗವಂತನ ಕುರಿತು ಬರೆದಂತೆ. ಹಾಗಾಗಿ ಶ್ರೀಸಿದ್ಧಗಂಗಾ ಶ್ರೀಗಳ ಬಗ್ಗೆ ಕನ್ನಡ, ಸಂಸ್ಕೃತದಲ್ಲಿ ಇರುವ ಸಾಹಿತ್ಯವನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ, ದೇಶದ ಮೂಲೆ ಮೂಲೆಗೂ ತಲುಪುವಂತೆ ಮಾಡಬೇಕಾಗಿದೆ ಎಂದು ಹಿರಿಯ ಜಾನಪದ ವಿದ್ವಾಂಸ ಹಾಗೂ ನಾಡೋಜ ಗೋ.ರು.ಚನ್ನಬಸಪ್ಪ ತಿಳಿಸಿದ್ದಾರೆ.

ನಗರದ ಶ್ರೀಸಿದ್ಧಗಂಗಾ ಮಠದ ಆವರಣದಲ್ಲಿರುವ ಶ್ರೀ ಉದ್ಧಾನ ಶಿವಯೋಗಿಗಳ ಸಮುದಾಯ ಭವನದಲ್ಲಿ ಜಾನಪದ ವಿದ್ವಾಂಸ ಹಾಗೂ ಸಿದ್ಧಗಂಗಾ ಮಾಸಪತ್ರಿಕೆಯ ಸಂಪಾದಕ ಎಚ್.ಎಸ್.ಸಿದ್ದಗಂಗಪ್ಪ ಡಾ.ಶ್ರೀಶಿವಕುಮಾರ‌ ಸ್ವಾಮೀಜಿಗಳ ಜೀವನ, ಸಾಧನೆ, ಸಂದೇಶ ಕುರಿತು ಬರೆದಿರುವ ಪದ್ಮಭೂಷಣ ಡಾ. ಶಿವಕುಮಾರ ಸ್ವಾಮೀಜಿಗಳು ಎಂಬ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದರು.

ಭಕ್ತರಿಂದ ನಡೆದಾಡುವ ದೇವರು ಎಂದು ಕರೆಯಿಸಿಕೊಂಡ ಡಾ. ಶಿವಕುಮಾರ ಸ್ವಾಮೀಜಿಗಳು ಭಕ್ತರಲ್ಲಿಯೇ ದೇವರನ್ನು ಕಂಡವರು. ಧಾರ್ಮಿಕತೆಗೆ ಹೊಸ ಭಾಷ್ಯ ಬರೆದ ಇವರನ್ನು ವರ್ಣಿಸಿದರೆ, ದೇವರನ್ನು ಪರಿಚಯಿಸಿದಂತೆ ಎಂದರು.

ಪದ್ಮಭೂಷಣ ಡಾ. ಶಿವಕುಮಾರ ಸ್ವಾಮೀಜಿಗಳು ಕೃತಿಯ ಲೇಖಕ ಎಚ್.ಎಸ್.ಸಿದ್ದಗಂಗಪ್ಪ ಅವರು ಶ್ರೀಗಳನ್ನು ಹತ್ತಿರದಿಂದ ಬಲ್ಲವರು, ಹಾಗಾಗಿಯೇ ಹೆಚ್ಚು ನಿಖರವಾಗಿ ಅವರ ಜೀವನ ಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾರೆ. ನಾಡಿನ ಹಲವು ಗುರುಗಳನ್ನು ನೋಡಿದ್ದೇನೆ. ಯಾವ ಗುರುವರ್ಯರಿಗೂ ಶಿವಕುಮಾರ ಸ್ವಾಮೀಜಿಗಳ ಕುರಿತು ಬಂದಿರುವಷ್ಟು ಕೃತಿಗಳು ಪ್ರಕಟಗೊಂಡಿಲ್ಲ. ಹಾಗಾಗಿ ಇವರೆಲ್ಲಾ ಕೃತಿಗಳನ್ನು ಸಂಪಾದಿಸಿ, ಅವುಗಳನ್ನು ಸಣ್ಣ ಸಣ್ಣ ಪುಸ್ತಕದ ರೂಪದಲ್ಲಿ ಇಂಗ್ಲಿಷ್‌ಗೆ ಭಾ಼ಷಾಂತರಿಸುವ ಕೆಲಸ ಮಾಡಿದರೆ ಹೆಚ್ಚಿನವರಿಗೆ ಶ್ರೀಗಳನ್ನು ಪರಿಚಯಿಸಲು ಸಾಧ್ಯವಾಗಲಿದೆ ಎಂದರು.

ಶ್ರೀಗಳ ಜೀವನ ಶಾಲಾ, ಕಾಲೇಜುಗಳ ಪಠ್ಯವಾಗುವಂತೆ ಮಾಡಿದರೆ ಮತ್ತಷ್ಟು ಜನರನ್ನು ತಲುಪಬಹುದು ಎಂದು ಗೋ.ರು.ಚನ್ನಬಸಪ್ಪ ನುಡಿದರು.

ಲೇಖಕರಾಗಿರುವ ಎಚ್.ಎಸ್.ಸಿದ್ದಗಂಗಪ್ಪ ಅವರು ಡಾ. ಶಿವಕುಮಾರ ಸ್ವಾಮಿಜಿಗಳ ಸಮಗ್ರ ಚಿತ್ರಣವನ್ನು ಈ ಕೃತಿಯ ಮೂಲಕ ಮಾಡಿದ್ದಾರೆ. ಇದು ಶ್ರೀಗಳ ಬಗ್ಗೆ ಸಂಶೋಧನೆ ಕೈಗೊಳ್ಳುವವರಿಗೆ ಒಳ್ಳೆಯ ಅಕರ ಗ್ರಂಥವಾಗಲಿದೆ. ಪದ್ಮಭೂಷಣ ಡಾ.ಶಿವಕುಮಾರ ಸ್ವಾಮೀಜಿಗಳು ಕೃತಿ ಪುರಾಣದ ಗ್ರಂಥವಲ್ಲ. ಪ್ರಮಾಣದ ಇಂತಹ ಕೃತಿಯನ್ನು ಪ್ರತಿಯೊಬ್ಬರೂ ಕೊಂಡು ಓದುವಂತಾಗಬೇಕು ಎಂದು ಗೋ,ರು.ಚನ್ನಬಸಪ್ಪ ತಿಳಿಸಿದರು.

ಕೃತಿಯ ಲೇಖಕರಾದ ಎಚ್.ಎಸ್.ಸಿದ್ದಗಂಗಪ್ಪ ಮಾತನಾಡಿ, ಸುಮಾರು 900 ಪುಟಗಳ ಈ ಗ್ರಂಥದಲ್ಲಿ ಶ್ರೀಗಳ ಪ್ರತಿಯೊಂದು ಕ್ಷಣವನ್ನು ಅಕ್ಷರ ರೂಪಕ್ಕೆ ತರಲು ಪ್ರಯತ್ನಿಸಲಾಗಿದೆ. ಪ್ರತಿದಿನ ಸಂಜೆ ನಡೆಯುವ ಸಾಮೂಹಿಕ ಪ್ರಾರ್ಥನೆಯ ವೇಳೆ ಶ್ರೀಗಳು ಮಾಡಿರುವ ನೀತಿ ಬೋಧನೆಯ ಭಾಷಣಗಳು, ವಿವಿಧ ಕೃತಿಗಳಿಗೆ ಬರೆದಿರುವ ಮುನ್ನುಡಿ, ಆಶಯನುಡಿಗಳ ಸಂಗ್ರಹವೂ ಇದೆ. ಸರಳ ಕನ್ನಡದಲ್ಲಿ ಎಲ್ಲರಿಗೂ ಅರಿವಾಗುವ ರೀತಿ ಈ ಕೃತಿಯನ್ನು ರಚಿಸಲಾಗಿದೆ. ಬಳ್ಳಾರಿಯ ಸಿರಗುಪ್ಪದ ಶ್ರೀಮಠದ ಹಳೆಯ ವಿದ್ಯಾರ್ಥಿಗಳು ಇದರ ಮುದ್ರಣದ ಜವಾಬ್ದಾರಿ ಹೊತ್ತಿದ್ದಾರೆ. ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಪ್ರಸ್ತಾವಿಕ ನುಡಿಗಳನ್ನಾಡಿದ ಹಳೆಯ ವಿದ್ಯಾರ್ಥಿಗಳ ಸಂಘದ ಬಾಲಚಂದ್ರ ಅವರು, ಹೇಗೆ ಭಗವದ್ಗೀತೆಯನ್ನು ಇಸ್ಕಾನ್ ಸಂಸ್ಥೆಯವರು, ವಿವೇಕಾನಂದರನ್ನು ರಾಮಕೃಷ್ಣ ಮಿಷನರಿಗಳು ನಾಡಿಗೆ ಪರಿಚಯಿಸಿದ ರೀತಿ, ನಡೆದಾಡುವ ದೇವರಾಗಿದ್ದ ಡಾ. ಶಿವಕುಮಾರ ಸ್ವಾಮೀಜಿಗಳ ಜೀವನ, ಸಾಧನೆ ಮತ್ತು ಸಂದೇಶಗಳನ್ನು ದೇಶದ ಎಲ್ಲಾ ಭಾಷೆಗಳಲ್ಲಿಯೂ ಮುದ್ರಿಸಿ, ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸವನ್ನು ಹಳೆಯ ವಿದ್ಯಾರ್ಥಿಗಳ ಸಂಘ ಮಾಡಲಿದೆ.ಅದರ ಮೊದಲ ಹೆಜ್ಜೆ ಇದಾಗಿದೆ ಎಂದರು.

ಇದೇ ವೇಳೆ ಶ್ರೀಮಠದ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಪದ್ಮಭೂಷಣ ಡಾ. ಶಿವಕುಮಾರ ಸ್ವಾಮೀಜಿಗಳು ಕೃತಿಯ ಲೇಖಕ ಎಚ್.ಎಸ್.ಸಿದ್ದಗಂಗಪ್ಪ ಅವರಿಗೆ ಶ್ರೀಸಿದ್ಧಗಂಗಾ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಕೋ.ರಂ.ಬಸವರಾಜು ಅವರು ಕೃತಿಯ ಕುರಿತು ಮಾತನಾಡಿದರು. ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿಗಳು, ಗೀತಾಂಜಲಿ ಗ್ರಾಫಿಕ್ ಮಾಲೀಕರಾದ ಜಿ.ನಾಗಸುಂದರ್, ಗುತ್ತಿಗೆದಾರರಾದ ಆರ್.ಸಿ.ಪಂಪನಗೌಡರ್, ಮುದ್ರಣ್ಣನವರು, ಮರೇಗೌಡ ಸೇರಿದಂತೆ ಶ್ರೀಮಠದ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.