ಹೊಸಪೇಟೆ: ಯುದ್ದದ ಬಗ್ಗೆ ಯಾವುದೇ ಪರಿವೇ ಇಲ್ಲದಿದ್ದರೂ ಸಮಯ ಪ್ರಜ್ಞೆ ಹಾಗೂ ಧೈರ್ಯದಿಂದ ಹೈದರಾಲಿಯ ಸೈನಿಕರ ವಿರುದ್ದ ಹೋರಾಡಿದ ವೀರ ವನಿತೆ ಒನಕೆ ಓಬವ್ವರ ಶೌರ್ಯ, ಧೈರ್ಯ ಮತ್ತು ಸಾಹಸಗಳನ್ನು ಇಂದಿನ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಸ್ಫೂರ್ತಿಯಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷ ಎನ್. ರೂಪೇಶ್ ಕುಮಾರ ಹೇಳಿದರು.
ಸಮಾಜ ಸೇವಕಿ
ರಶ್ಮಿ ರಾಜಶೇಖರ್ ಹಿಟ್ನಾಳ ಮಾತನಾಡಿ, ಸಮುದಾಯದ ಮುಖಂಡರು ಮಹನೀಯರ ಜಯಂತಿ ಆಚರಣೆ ಜೊತೆಗೆ ತಮ್ಮ ಮಕ್ಕಳು ಮತ್ತು ಮಹಿಳೆಯರು ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಜಾನ್ಸಿ ರಾಣಿ ಲಕ್ಷ್ಮೀಬಾಯಿಯಂತೆ ಆಗಲು ಗುರಿಯನ್ನು ಇಟ್ಟಿಕೊಳ್ಳಬೇಕು. ಈಗಿನ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿ, ಉದ್ಯೋಗದಲ್ಲಿ ಯಶ್ವಸಿಗೊಳಿಸಿ ತಮ್ಮ ಇಚ್ಚೆಯಂತೆ ವಿವಾಹಿತ ಜೀವನ ನಡೆಸಲು ತಂದೆ, ತಾಯಂದಿರು ಮಾದರಿಯಾಗಬೇಕು. ಓಬವ್ವ ಸಾಧಾರಣ ಮಹಿಳೆಯಾಗಿದ್ದು, ಸಮಯಕ್ಕೆ ಸರಿಯಾಗಿ ಹೈದರಾಲಿಯ ಸೈನ್ಯದ ಶತ್ರುಗಳ ಸಂಹಾರ ಮಾಡಿ ವೀರ ವನಿತೆ ಒನಕೆ ಓಬವ್ವ ಎಂಬ ಬಿರುದನ್ನು ಪಡೆದರು ಎಂದರು.ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎನ್. ಚಿನ್ನಸ್ವಾಮಿ ಸೊಸಲೆ ವೀರ ವನಿತೆ ಒನಕೆ ಓಬವ್ವ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ ಮಾತನಾಡಿದರು.
ನಂತರ ಕಲಾತಂಡಗಳೊಂದಿಗೆ ಬೆಳ್ಳಿ ರಥದಲ್ಲಿ ಒನಕೆ ಓಬವ್ವ ಭಾವಚಿತ್ರದ ಮೆರೆವಣಿಗೆ ಛಲವಾದಿ ಕೇರಿಯಿಂದ ಮದಕರಿ ನಾಯಕ ವೃತ್ತ, ಮೇನ್ ಬಜಾರ, ಗಾಂಧಿ ವೃತ್ತ, ನಗರಸಭೆ ರಸ್ತೆ, ಪುನೀತ್ ರಾಜಕುಮಾರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಛಲವಾದಿ ಕೇರಿಯವರೆಗೆ ಭವ್ಯ ಮೆರೆವಣಿಗೆ ನಡೆಯಿತು.ಎಎಸ್ಪಿ ಜಿ. ಮಂಜುನಾಥ, ಸಹಾಯಕ ಆಯುಕ್ತ ವಿವೇಕಾನಂದ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ವೈ.ಎ. ಕಾಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ, ನಗರಸಭೆ ಪೌರಯುಕ್ತ ಶಿವಕುಮಾರ, ಎಇಇ ಯಲ್ಲಪ್ಪ, ಮುಖಂಡರಾದ ಈರಮ್ಮ, ಖಲಂದರ್, ವೀರಭದ್ರಪ್ಪ, ಸಿ.ಪಿ. ಈರಣ್ಣ, ಸಿ.ಕೆ. ಹನುಮಂತಪ್ಪ, ಸಣ್ಣ ಈರಣ್ಣ, ಮಾರುತಿ ಕಾಂಬ್ಳೆ, ಯರ್ರಿಸ್ವಾಮಿ, ಎಂ.ರಾಮಕೃಷ್ಣ ಮತ್ತಿತರರಿದ್ದರು.