ಗೋಕರ್ಣ: ಪುರಾತನ ಕೆರೆಯ ಜೀರ್ಣೋದ್ಧಾರದೊಂದಿಗೆ ಕ್ಷೇತ್ರದ ಉಳಿದ ಪವಿತ್ರ ತೀರ್ಥಗಳ ಅಭಿವೃದ್ಧಿ ಪ್ರಾರಂಭವಾಗಿ ಕ್ಷೇತ್ರದ ಮಹಿಮೆ ಇನ್ನಷ್ಟು ಹೆಚ್ಚಾಗಲಿ. ಈ ಅಭಿವೃದ್ಧಿ ಕಾರ್ಯಕ್ಕೆ ಶ್ರೀಮಠ ಯಾವತ್ತು ಸಹಕಾರ ನೀಡುತ್ತದೆ ಎಂದು ಶೃಂಗೇರಿ ಶಾರದಾ ಪೀಠಾಧೀಶ್ವರ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳವರು ನುಡಿದರು.
ಅವರು ಯಂಗಸ್ಟಾರ್ ಕ್ಲಬ್ ಹಾಗೂ ಶಿವಸಂಕಲ್ಪಂ ಸಂಸ್ಥೆಯ ವತಿಯಿಂದ ನಡೆದ ಇಲ್ಲಿನ ಗಾಯತ್ರಿ ಕೆರೆಯ ಬಳಿ ನಿರ್ಮಿಸಿದ ಗಾಯತ್ರಿ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಶಿಖರ ಪ್ರತಿಷ್ಠಾಪನೆ ನೆರವೇರಿಸಿ ಭಾನುವಾರ ಸಂಜೆ ಮಹಾಬಲೇಶ್ವರ ಮಂದಿರದ ಶಿವಪದ ವೇದಿಕೆಯಲ್ಲಿ ಆರ್ಶೀವಚನ ನೀಡಿದರು.ದೇವರ ಸೇವೆಯಲ್ಲಿ ಯಾವುದೇ ವೈಮನಸ್ಸು ಹೊಂದದೆ ಎಲ್ಲರೂ ಒಟ್ಟಾಗಬೇಕು ಎಂದ ಶ್ರೀಗಳು, ದೇವರ ವಾಹನಗಳಾಗಿ ವಿವಿಧ ಪ್ರಾಣಿಗಳು ದೇವರ ಸಾನ್ನಿಧ್ಯದಲ್ಲಿ ಒಂದಾಗಿ ಕರ್ತವ್ಯ ನಿರ್ವಹಿಸುತ್ತವೆ. ಆದರೆ ಹೊರಗಡೆ ಪರಸ್ಪರ ವಿರೋಧವಾಗಿರುತ್ತದೆ. ಅಂದರೆ ಪರಮೇಶ್ವರನ ಕಾರ್ಯದಲ್ಲಿ ನಾವೆಲ್ಲರೂ ಒಂದಾಗಬೇಕು. ಇಲ್ಲಿ ಯಾವುದೇ ಒಡಕು ಇರಬಾರದು ಎಂದರು.
ಗಾಯತ್ರಿ ಕೆರೆ ಅಭಿವೃದ್ಧಿಪಡಿಸಿ ದೈವಿಕ ಸ್ಥಳವಾಗಿ ಮಾಡಿದಂತೆ ಇಲ್ಲಿರುವ ಹಲವಾರು ಪೌರಾಣಿಕ ಹಿನ್ನೆಲೆಯ ಕೆರೆ, ದೇವಾಲಯಗಳ ಪುನರ್ ನಿರ್ಮಾಣ ಕಾರ್ಯ ಮಾಡುವ ಮೂಲಕ ಕ್ಷೇತ್ರದ ಪಾವಿತ್ರ್ಯ ಕಾಪಾಡಿಕೊಳ್ಳಬೇಕು. ಇದು ಪವಿತ್ರ ಕ್ಷೇತ್ರದಲ್ಲಿರುವವರ ಪ್ರತಿಯೊಬ್ಬರ ಕರ್ತವ್ಯ. ಇದಕ್ಕೆ ನಮ್ಮ ಸಹಕಾರವಿದೆ ಎಂದರು. ಕ್ಷೇತ್ರದ ಮಹತ್ವ ವಿವರಿಸಿದ ಶ್ರೀಗಳು, ಗೋಕರ್ಣ ಹಾಗೂ ಶೃಂಗೇರಿ ಮಠಕ್ಕೆ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು.ಆಶೀರ್ವಚನದ ಪೂರ್ವದಲ್ಲಿ ಸಂಘಟಕರು ಫಲ ಸಮರ್ಪಿಸಿ ವಂದಿಸಿದರು. ಯಂಗ್ಸ್ಟಾರ್ ಕ್ಲಬ್ನ ರವಿ ಸೂರಿ ಕಾರ್ಯಕ್ರಮ ನಿರ್ವಹಿಸಿದರು. ಯಂಗ್ ಸ್ಟಾರ್ ಕ್ಲಬ್ನ ಪದಾಧಿಕಾರಿಗಳು ಸದಸ್ಯ, ಶಿವಸಂಕಲ್ಪಂ ಸಂಸ್ಥೆಯ ಸದಸ್ಯರು ಸಹಕರಿಸಿದರು.