ಕಾಡಿಗೆ ಬೆಂಕಿ ಹಾಕುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕ್ಕೆ ಸೂಚನೆ

KannadaprabhaNewsNetwork |  
Published : May 28, 2025, 12:16 AM IST
೨೭ಕೆಎಂಎನ್‌ಡಿ-೨ಶ್ರೀರಂಗಪಟ್ಟಣದ ಕರಿಘಟ್ಟದ ಶ್ರೀ ವೆಂಕಟರಮಣ ಸ್ವಾಮಿ ಸಸ್ಯೋದ್ಯಾನವನದಲ್ಲಿ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ  ನೀಡಿದರು. | Kannada Prabha

ಸಾರಾಂಶ

ಒಂದು ಗಿಡವನ್ನು ಒಳ್ಳೆಯ ಮನಸ್ಸಿನಿಂದ ನೆಟ್ಟಿ ಬೆಳೆಸಿ ಗಿಡ- ಮರಗಳೂ ನಮ್ಮ ಮಕ್ಕಳಿದ್ದಂತೆ. ಮರಗಳಿಂದ ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ. ಆರೋಗ್ಯ ವೃದ್ಧಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತಲು ಕನಿಷ್ಠ ಒಂದು ಗಿಡವನ್ನು ನೆಟ್ಟಿ ಬೆಳೆಸಿ. ಅದುವೇ ಸಮಾಜಕ್ಕೆ ನಾವು ನೀಡುವ ದೊಡ್ಡ ಕೊಡುಗೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾಡಿನ ಮರಗಳಿಗೆ ಬೆಂಕಿ ಹಾಕುವ ಕೃತ್ಯ ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಉಪಲೋಕಾಯುಕ್ತ ಬಿ.ವೀರಪ್ಪ ಸೂಚಿಸಿದರು.

ಮಂಗಳವಾರ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯಿಂದ ಕರಿಘಟ್ಟದಲ್ಲಿ ಆಯೋಜಿಸಲಾಗಿದ್ದ ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರಿಘಟ್ಟ ಬೆಟ್ಟದಲ್ಲಿರುವ ಕಾಡಿನ ಮರಗಳಿಗೆ ಬೆಂಕಿ ಹಾಕಿದರೆ ಮಕ್ಕಳಾಗುತ್ತದೆ ಎನ್ನುವುದು ಮೌಢ್ಯ. ಈ ಮೂಢನಂಬಿಕೆಯಿಂದ ಜನರು ಹೊರಬರಬೇಕು. ಕಾಡಿನ ಮರಗಳನ್ನು ಉಳಿಸಿ ಬೆಳೆಸಿದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ ಎಂದರು.

ನಾವೆಲ್ಲರೂ ಇಂದು ನೆಮ್ಮದಿಯಾಗಿ ಜೀವಿಸಲು ಕಾರಣ ನಮ್ಮ ದೇಶದ ಸೈನಿಕರು. ಸೈನಿಕರು ತಮ್ಮ ಜೀವವನ್ನು ಪಣಕ್ಕಿಟ್ಟು ದೇಶದ ನಾಗರಿಕ ರಕ್ಷಣೆಗಾಗಿ ಶ್ರಮಿಸುವವರು. ಇತ್ತೀಚೆಗೆ ನಡೆದ ಪಹಲ್ಗಾಂ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಒಂದು ನಿಮಿಷ ಮೌನಾಚರಣೆ ಆಚರಿಸಿ ಗೌರವ ಸಲ್ಲಿಸಿದರು.

ಒಂದು ಗಿಡವನ್ನು ಒಳ್ಳೆಯ ಮನಸ್ಸಿನಿಂದ ನೆಟ್ಟಿ ಬೆಳೆಸಿ ಗಿಡ- ಮರಗಳೂ ನಮ್ಮ ಮಕ್ಕಳಿದ್ದಂತೆ. ಮರಗಳಿಂದ ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ. ಆರೋಗ್ಯ ವೃದ್ಧಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತಲು ಕನಿಷ್ಠ ಒಂದು ಗಿಡವನ್ನು ನೆಟ್ಟಿ ಬೆಳೆಸಿ. ಅದುವೇ ಸಮಾಜಕ್ಕೆ ನಾವು ನೀಡುವ ದೊಡ್ಡ ಕೊಡುಗೆ ಎಂದರು.

ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ದೇಶಾಭಿಮಾನ ಹಾಗೂ ಪರಿಸರ ಪ್ರೇಮವನ್ನು ಬೆಳಸಿಕೊಳ್ಳಬೇಕು. ನಾವು ಪ್ರತಿ ಕ್ಷಣ ದೇಶ ಕಾಯುವ ಸೈನಿಕರನ್ನು ನೆನೆಯಬೇಕು. ಅವರು ತಮ್ನ ವೈಯಕ್ತಿಕ ಬದುಕನ್ನು ಬದಿಗಿಟ್ಟು ದೇಶದ ಜನತೆಯನ್ನು ರಕ್ಷಿಸುತ್ತಿದ್ದಾರೆ. ನಾವು ಅವರಿಗೆ ಚಿರರುಣಿಯಾಗಿರಬೇಕು. ದೇಶದ ಅಭಿವೃದ್ಧಿಗೆ ಬೇಕಿರುವ ಸಸ್ಯ ಸಂಪತ್ತನ್ನು ರಕ್ಷಿಸಲು ಪಣ ತೊಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯ ಮೇಲೆ ನಿರಂತರವಾಗಿ ದಾಳಿ ನಡೆಸಿಕೊಂಡು ಬರುತ್ತಿದ್ದರೂ ಪ್ರಕೃತಿ ನಿಸ್ವಾರ್ಥದಿಂದ ಮನುಕುಲಕ್ಕೆ ಗಾಳಿ, ನೀರು, ಬೆಳಕು, ಆಹಾರ ನೀಡಿ ರಕ್ಷಿಸುತ್ತಿದೆ. ಆದರೂ ಮನುಷ್ಯ ವನ್ಯಜೀವಿಗಳ ವಿರುದ್ಧ ಸುಮರ ಸಾರುತ್ತಿದ್ದಾನೆ. ಈಗಲಾದರೂ ಎಚ್ಚೆತ್ತು ಪರಿಸರವನ್ನು ಉಳಿಸಿಕೊಳ್ಳಬೇಕಿದೆ ಇಲ್ಲವಾದಲ್ಲಿ ಜಗತ್ತು ಚಂಡಮಾರುತ, ಬಿರುಗಾಳಿ, ಸುನಾಮಿ, ಭೂ ಕುಸಿತದಂತಹ ಪ್ರಾಕೃತಿಕ ವಿಕೋಪ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ದೇಶದ ಪ್ರಜೆಗಳು ಹಣ ಆಮಿಷಕ್ಕೊಳ್ಳಗಾಗಿ ಮತದಾನ ಮಾಡುತ್ತಿದ್ದಾರೆ, ಉತ್ತಮ ನಾಯಕರು ಆಯ್ಕೆಯಾಗದಿದ್ದಲ್ಲಿ ದೇಶವನ್ನು ಲೂಟಿ ಮಾಡುತ್ತಾರೆ. ನಮ್ಮ ದೇಶದ ಅತಿ ದೊಡ್ಡ ಪಿಡುಗು ಭ್ರಷ್ಟಾಚಾರ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪರಿಸರ ಪ್ರೇಮಿಗಳಾದ ರಮೇಶ್, ಡಾ.ಸುಜಯ್, ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್, ಲೋಕಾಯುಕ್ತದ ಉಪನಿಬಂಧಕರಾದ ಅರವಿಂದ್, ಮಿಲನ, ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು, ವಕೀಲರ ಸಂಘದ ಅಧ್ಯಕ್ಷ ಮರಿಗೌಡ ಇತರರಿದ್ದರು.

ಕಾರ್ಯಕ್ರಮದ ನಂತರ ಕರಿಘಟ್ಟದ ಶ್ರೀ ವೆಂಕಟರಮಣ ಸ್ವಾಮಿ ಸಸ್ಯೋದ್ಯಾನವನದಲ್ಲಿ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಗಿಡ ನೆಡುವ ಮೂಲಕ ಜಾಗೃತಿ ಮೂಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ