ಕೊಪ್ಪಳ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ
ಕನ್ನಡಪ್ರಭ ವಾರ್ತೆ ಕೊಪ್ಪಳವಿದ್ಯಾರ್ಥಿಗಳಲ್ಲಿ ಅದ್ಭುತವಾದ ಜ್ಞಾನವಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯ ಆಡಳಿತ ಅಧಿಕಾರಿ ಕಲ್ಲೇಶ ಬಿ. ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ 2024-25ನೇ ಸಾಲಿನ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಮತ್ತು ಕಾಲೇಜಿನ ಎಲ್ಲ ಸಹ ಪಠ್ಯ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ ಇರಬೇಕು. ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಗುರಿ ಸಾಧಿಸಬೇಕು. ಚೆನ್ನಾಗಿ ಅಭ್ಯಾಸ ಮಾಡಿದರೆ ಒಳ್ಳೆಯ ಉದ್ಯೋಗ ಸಿಕ್ಕೇ ಸಿಗುತ್ತದೆ. ಎಲ್ಲ ವಿಷಯಗಳನ್ನು ಅಭ್ಯಾಸ ಮಾಡಬೇಕು. ಒಂದು ಪಾಠವನ್ನು ಪದೇ ಪದೇ ಓದಬೇಕು. ದೃಢವಾದ ಮನಸ್ಸು ಮತ್ತು ಛಲ ಇರಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ವಿ ಆಗಲು ಸಾಧ್ಯ. ಸತತವಾಗಿ ಪ್ರಯತ್ನ ಮಾಡದರೆ ಯಶಸ್ಸು ಖಂಡಿತ ಸಿಗುತ್ತದೆ. ನಿರಾಸೆ ಆಗಬಾರದು. ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು ಹೇಳಿದರು.ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಮಾತನಾಡಿ, ಕಾಲೇಜಿನಲ್ಲಿರುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ನಮ್ಮ ಕಾಲೇಜು ಬಹು ಬೇಗನೆ ಅಭಿವೃದ್ಧಿ ಹೊಂದಿದ್ದು, ಬಡ ವಿದ್ಯಾರ್ಥಿಗಳಿಗೆ ಸರ್ಕಾರಿ ಕಾಲೇಜುಗಳು ಬಹಳ ಉಪಯುಕ್ತವಾಗಿವೆ. ಇಲ್ಲಿ ಕಡಿಮೆ ಶುಲ್ಕ ಇರುತ್ತದೆ. ನೀವು ಕಥೆ, ಕಾದಂಬರಿ, ಪುಸ್ತಕ, ಪತ್ರಿಕೆಗಳನ್ನು ಓದಬೇಕು. ಪರಿಶ್ರಮ ಪಟ್ಟವರು ಜೀವನದಲ್ಲಿ ಮುಂದೆ ಬರುತ್ತಾರೆ ಎಂದು ಹೇಳಿದರು.
ಸಾಂಸ್ಕೃತಿಕ ವಿಭಾಗದ ಸಂಚಾಲಕಿ ಡಾ. ಹುಲಿಗೆಮ್ಮ, ಶಿಕ್ಷಣಪ್ರೇಮಿ ಬಿ.ಜಿ. ಕರಿಗಾರ್, ಕ್ರೀಡಾ ವಿಭಾಗದ ಮುಖ್ಯಸ್ಥ ಡಾ. ಪ್ರದೀಪ್ ಕುಮಾರ, ಗ್ರಂಥಪಾಲಕ ಡಾ. ಮಲ್ಲಿಕಾರ್ಜುನ, ಉಪನ್ಯಾಸಕರಾದ ಡಾ. ನರಸಿಂಹ, ಡಾ. ಅಶೋಕ ಕುಮಾರ್, ಶುಭಾ, ಸುಮಿತ್ರಾ ಎಸ್.ವಿ., ವಿರೂಪಾಕ್ಷಪ್ಪ ಮುತ್ತಾಳ, ಶಿವಪ್ರಸಾದ ಹಾದಿಮನಿ, ಶ್ರೀಕಾಂತ ಬೊಮ್ಮನಾಳ ಹಾಗೂ ಕಾಲೇಜಿನ ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.ಭೂಮಿಕಾ ಮತ್ತು ಸಬಿಹಾ ಕಾರ್ಯಕ್ರಮ ನಿರೂಪಿಸಿದರು. ಮಹಾದೇವಿ ಪ್ರಾರ್ಥಿಸಿದರು. ನೇತ್ರಾ ಸ್ವಾಗತಿಸಿದರು. ಭವ್ಯ ವಂದಿಸಿದರು.