ಧಾರವಾಡ: ಜಾನಪದ ಕಲೆ, ಸಾಹಿತ್ಯ ಉಳಿಸುವ ದಿಸೆಯಲ್ಲಿ ಕೆಲಸ ಮಾಡಿದ, ನಾಡಿನ ಕಂಚಿನ ಕಂಠದ ಗಾಯಕರು ಬಸವಲಿಂಗಯ್ಯ ಹಿರೇಮಠ. ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರತಿಷ್ಠಾನ ಮಾಡಿ ಈ ಮೂಲಕ ಜನಪದ ಉಳಿಸುವ ಕಾರ್ಯ ಮಾಡಬೇಕಿದೆ ಎಂದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾ ಘಂಟಿ ಹೇಳಿದರು.
ಜೊತೆಗೆ ಶ್ರೀಕೃಷ್ಣ ಪಾರಿಜಾತ ಆಟವನ್ನು ಅದರ ಮೂಲಕ್ಕೆ ಧಕ್ಕೆಯಾಗದಂತೆ ಎರಡುವರೆ ಗಂಟೆಗೆ ಪರಿಷ್ಕರಿಸಿ ದೇಶ ವಿದೇಶಗಳಲ್ಲಿ ಪ್ರದರ್ಶಿಸಿದ್ದು ಹೆಗ್ಗಳಿಕೆ. ಅಗಾಧವಾದ ಜಾನಪದ ಕಣಜ ಬಸವಲಿಂಗಯ್ಯಾ ಹಿರೇಮಠ ಎಂದರು.
ತತ್ವಪದಕಾರ ರಾಮಪ್ಪ ಹಂಚಿನಮನಿ ಅವರಿಗೆ ಹಿರಿಯ ಲೆಕ್ಕಪರಿಶೋಧಕ ಡಾ. ಎನ್.ಎ. ಚರಂತಿಮಠ ಅವರು ಗಾನ ಗಾರುಡಿಗ ಬಸವಲಿಂಗಯ್ಯ ಹಿರೇಮಠ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿದರು. ಹಿರಿಯ ನಾಟಕಕಾರ ಬಿ.ಆರ್. ಪೊಲೀಸ್ಪಾಟೀಲ ಅಭಿನಂದನಾ ಪರ ನುಡಿಯಲ್ಲಿ ಲಾವಣಿಗಳನ್ನು ಹೇಳಿದರು.ಡಾ. ಜ್ಯೋತಿರ್ಲಿಂಗ ಹೊನಕಟ್ಟಿ, ನೀಲಕಂಠ ಸ್ವಾಮೀಜಿ, ಪ್ರೊ.ಎನ್.ಎಸ್. ಗಲಗಲಿ ಅಧ್ಯಕ್ಷತೆ ವಹಿಸಿದ್ದರು. ಗಜಾನನ ಚಿನಗುಡಿ, ಬೈಲೂರಿನ ನಂದಿಹಳ್ಳಿ, ಸಂಗಮೇಶ ಹಿರೇಮಠ ಇದ್ದರು. ಜಾನಪದ ಸಂಶೋಧನಾ ಕೇಂದ್ರದ ಅಧ್ಯಕ್ಷ ಗುರು ಕಲ್ಮಠ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ. ಬಾಳಪ್ಪ ಚಿನಗುಡಿ ನಿರೂಪಿಸಿದರು. ನಾಗಭೂಷಣ ಹಿರೇಮಠ ವಂದಿಸಿದರು. ಆರಂಭದಲ್ಲಿ ಜಾನಪದ ಕಲಾ ಬಳಗ, ಸಿಂಗಾರ ಸಖಿ ಬಳಗದಿಂದ ಹಾಗೂ ಬೈಲೂರಿನ ಭಜನಾ ಮಂಡಳಿಯವರು ತತ್ವಪದಗಳನ್ನು ಪ್ರಸ್ತುತಪಡಿಸಿದರು.