- ಸಮಾನ ಕೆಲಸಕ್ಕೆ ಸಮಾನ ವೇತನ, ಸರ್ಕಾರಿ ನೌಕರ ಮಾದರಿ ಸೌಲಭ್ಯಕ್ಕೆ ಜಿಲ್ಲಾಧ್ಯಕ್ಷೆ ಸುಶೀಲ ಒತ್ತಾಯ
ಸೇವಾ ಭದ್ರತೆ, ಇಎಸ್ಐ, ಪಿಎಫ್ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿಮಟ್ಟದ ಮುಖ್ಯ ಪುಸ್ತಕ ಬರಹಗಾರ(ಎಂಬಿಕೆ)ರು ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ (ಎಲ್ಸಿಆರ್ಪಿ)ಗಳ ಸಖಿಯರ ಮಹಾಒಕ್ಕೂಟ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.
ನಗರದ ಜಿಲ್ಲಾಡಳಿತ ಭವನ ಎದುರು ಸಂಘಟನೆ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಘೋಷಣೆಗಳನ್ನು ಕೂಗಿದ ಎಂಬಿಕೆ ಹಾಗೂ ಎಲ್ಸಿಆರ್ಪಿಗಳು ನಂತರ ಜಿಲ್ಲಾಡಳಿತ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.ಸಂಘದ ಜಿಲ್ಲಾಧ್ಯಕ್ಷೆ ಎ.ಸುಶೀಲ ಮಾತನಾಡಿ, ಸರ್ಕಾರವು 2.9.2024ರಂದು ಹೊರಡಿಸಿದ ಗ್ರೇಡ್ ಆಧಾರಿತ ಗೌರವಧನ ನೀಡಿಕೆ ಆದೇಶ ಹಿಂಪಡೆದು, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು. ಸರ್ಕಾರಿ ನೌಕರರಿಗೆ ಒದಗಿಸಿದ ಮಾದರಿಯಲ್ಲಿ ನಮಗೂ ಸೇವಾ ಭದ್ರತೆ ಒದಗಿಸಬೇಕು. ಸಿಬ್ಬಂದಿಗೆ ಮೇಲಧಿಕಾರಿಗಳಿಂದ ಆಗುವ ಮಾನಸಿಕ ಕಿರುಕುಳ, ಹಿಂಸೆ ನಿಲ್ಲಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ ಮನವಿ ಸ್ವೀಕರಿಸಿದರು. ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ, ಸುರೇಶ ನಾಯ್ಕ, ರಾಜ್ಯ ಗ್ರಾಪಂ ಮಟ್ಟದ ಮುಖ್ಯ ಪುಸ್ತಕ ಬರಹಗಾರ(ಎಂಬಿಕೆ)ರು, ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ(ಎಲ್ಸಿಆರ್ಪಿ) ಸಖಿಯರ ಮಹಾ ಒಕ್ಕೂಟದ ತಾಲೂಕು ಅಧ್ಯಕ್ಷರಾದ ದಾವಣಗೆರೆಯ ಉದಯಬಾಸ್ಕಾರಿ, ಹೊನ್ನಾಳಿಯ ಅಂಬಿಕಾ, ಚನ್ನಗಿರಿಯ ಉಮಾದೇವಿ, ಹರಿಹರದ ನೇತ್ರಾವತಿ, ನ್ಯಾಮತಿಯ ಪ್ರಿಯಾಂಕಾ, ಜಗಳೂರಿನ ಶಾಂತಲಾ ಸೇರಿದಂತೆ ಜಿಲ್ಲಾ ಎನ್ಆರ್ಎಲ್ಎಂ ಒಕ್ಕೂಟದ 200ಕ್ಕೂ ಅಧಿಕ ಸಿಬ್ಬಂದಿ ಭಾಗವಹಿಸಿದ್ದರು.
ಬಾಕ್ಸ್ * ಬೇಡಿಕೆಗಳೇನೇನು? - ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿಗಳಿಗೆ ಗ್ರಾಪಂ ಸದಸ್ಯರ ರೀತಿ ಗೌರವಧನ ನಿಗದಿಪಡಿಸಬೇಕು
- ವೇತನಸಹಿತ ಹೆರಿಗೆ ರಜೆ ಮಂಜೂರು ಮಾಡಬೇಕು, ಇಎಸ್ಐ, ಪಿಎಫ್ ಇತರೆ ಸೌಲಭ್ಯಗಳನ್ನೂ ನೀಡಬೇಕು
- ಕರ್ತವ್ಯದ ವೇಳೆ ಮರಣ ಹೊಂದಿದ ಎಂಬಿಕೆ, ಎಲ್ಸಿಆರ್ಪಿ, ಗ್ರಾ.ಪಂ.ಮಟ್ಟದ ಒಕ್ಕೂಟದ ಪಶುಸಖಿ, ಕೃಷಿಸಖಿಯರ ಕುಟುಂಬಗಳಿಗೆ ₹3 ಲಕ್ಷ ಪರಿಹಾರ ನೀಡಬೇಕು
- ಸರ್ಕಾರದ ಇತರೆ ಇಲಾಖೆಗಳ ಯಾವುದೇ ಕೆಲಸಕ್ಕೆ ನಿಯೋಜಿಸಬಾರದು. ಗುಣಮಟ್ಟದ ಸೇವೆ ನೀಡಲು ಪ್ರೇರಣೆ ನೀಡಬೇಕು
ರಾಜ್ಯ ಗ್ರಾ.ಪಂ.ಮಟ್ಟದ ಮುಖ್ಯ ಪುಸ್ತಕ ಬರಹಗಾರರು ಮತ್ತು ಸ್ಥಳಿಯ ಸಮು ದಾಯ ಸಂಪನ್ಮೂಲ ವ್ಯಕ್ತಿಗಳ ಸಖಿಯರ ಮಹಾಒಕ್ಕೂಟದಿಂದ ಸೋಮವಾರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ದಾವಣಗೆರೆ ಡಿಸಿ ಕಚೇರಿ ಎದುರು ಪ್ರತಿಭಟಿಸಿ, ಅಪರ ಡಿಸಿಗೆ ಮನವಿ ಸಲ್ಲಿಸಲಾಯಿತು.