ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ವಿಶ್ವ ವಿದ್ಯಾಲಯದಲ್ಲಿ ೨೦೨೫-೨೬ನೇ ಶೈಕ್ಷಣಿಕ ಸಾಲಿನಿಂದ ತಾಂತ್ರಿಕ ಹಾಗೂ ನಿರ್ವಹಣಾ ಶಾಸ್ತ್ರಗಳಿಗೆ ಸಂಬಂಧಿಸಿದಂತೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ)ಯಿಂದ ಅನುಮೋದನೆ ಪಡೆದು ಎಂಸಿಎ ಮತ್ತು ಎಂಬಿಎ ಸ್ನಾತಕೋತ್ತರ ಪದವಿ ಆರಂಭಿಸಲಾಗುತ್ತಿದೆ ಎಂದು ಮಂಡ್ಯ ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ.ಶಿವಚಿತ್ತಪ್ಪ ತಿಳಿಸಿದರು.ಎಐಸಿಟಿಇ (ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್) ಅನುಮೋದನೆಯೊಂದಿಗೆ ಮೈಸೂರು ವಿವಿಯ ಪರಿನಿಯಮಾವಳಿಯಂತೆ ಪ್ರಾರಂಭಿಸಲಾಗುತ್ತಿದೆ. ಜಿಲ್ಲೆಯ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಲು ಮುಂದಾಗಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜೂನ್ ೨೯ರಂದು ಎಂಸಿಎ ಮತ್ತು ಎಂಬಿಎ ಪದವಿಗಳ ಆರಂಭಕ್ಕೆ ಅನುಮೋದನೆ ದೊರೆತಿದ್ದು, ಬಿಎಸ್ಸಿ ಕಂಪ್ಯೂಟರ್ ಸೈನ್ಸ್, ಎಂಎಸ್ಸಿ ಮಾಡಿದವರು ಎಂಸಿಎ ಪದವಿ ತರಗತಿಗೆ ಪ್ರವೇಶ ಪಡೆಯಬಹುದು. ಬಿಕಾಂ, ಬಿಬಿಎ ಸೇರಿದಂತೆ ಯಾವುದೇ ಪದವಿ ಪಡೆದವರು ಎಂಬಿಎ ಪದವಿಗೆ ಪ್ರವೇಶ ಪಡೆಯಬಹುದು ಎಂದರು.ಬಿಕಾಂನಲ್ಲಿ ೩೯೦ ಮಂದಿ ವಿದ್ಯಾರ್ಥಿಗಳು, ಬಿಬಿಎನಲ್ಲಿ ೧೬೩ ವಿದ್ಯಾರ್ಥಿಗಳು ನಮ್ಮಲ್ಲಿ ವ್ಯಾಸಂಗ ಮಾಡುತ್ತಿದ್ದು, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವವರು ಪ್ರವೇಶಾತಿ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ನಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನಾರ್ಜನೆನೀಡುವ ಸಲುವಾಗಿ ಕೋಲ್ಕತ್ತಾ, ಕುವೈತ್, ಇರಾನ್ ಸೇರಿದಂತೆ ಹಲವು ಕಡೆಗಳಿಂದಲೂ ವಿಷಯ ತಜ್ಞ ಪ್ರಾಧ್ಯಾಪಕರು ಇಲ್ಲಿಗೆ ಬಂದು ಪಾಠ ಮಾಡುತ್ತಾರೆ ಎಂದು ವಿವರಿಸಿದರು.
ಎಂಬಿಎ ಪದವಿ ಪಡೆಯಲು ರಾಜ್ಯದವರಿಗೆ ೭೫,೦೦೦ ರು., ಹೊರ ರಾಜ್ಯದವರಿಗೆ ೧,೧೨,೦೦೦ ರು. ಶುಲ್ಕವಿದ್ದು, ಎಂಸಿಎ ಪದವಿಗೆ ರಾಜ್ಯದವರಿಗೆ ೪೯,೫೧೨ ರು. ಹಾಗೂ ಹೊರ ರಾಜ್ಯದವರಿಗೆ ೭೫,೯೩೦ ರು. ಶುಲ್ಕವಿದೆ. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ೨೩,೬೭೮ ರು. ವಿನಾಯಿತಿ ಪಡೆಯಬಹುದು ಎಂದು ಮಾಹಿತಿ ನೀಡಿದರು.ಮುಂದಿನ ದಿನಗಳಲ್ಲಿ ನ್ಯಾಕ್ನಿಂದಲೂ ಅನುಮತಿ ಪಡೆಯಬೇಕಿದ್ದು, ಈ ನಿಟ್ಟಿನಲ್ಲಿಯೂ ವಿವಿ ಪ್ರಯತ್ನ ಮುಂದುವರೆಸಿದೆ. ಉದ್ಯೋಗಕ್ಕಾಗಿ ನಮ್ಮಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರವನ್ನು ತೆರೆಯಲಾಗಿದೆ. ಈಗಾಗಲೇ ನಮ್ಮಲ್ಲಿ ವಿದ್ಯಾಭ್ಯಾಸ ಮಾಡಿದ ೧೫೦ಕ್ಕೂ ಹೆಚ್ಚು ಮಂದಿಗೆ ಉದ್ಯೋಗವನ್ನು ದೊರಕಿಸಿಕೊಡಲಾಗಿದೆ ಎಂದು ವಿವರಿಸಿದರು.
ಕುಲಸಚಿವ ಪ್ರೊ.ಯೋಗನರಸಿಂಹಚಾರಿ, ಸಿಂಡಿಕೇಟ್ ನಾಮನಿರ್ದೇಶಿತ ಸದಸ್ಯ ನಾಗರಾಜ್, ಸಿಂಡಿಕೇಟ್ ಸದಸ್ಯ ಡಾ.ಸುರೇಶ್.ಎಸ್.ಎಲ್, ಬೋದಕರಾದ ಪ್ರೊ.ದಿಲ್ಷಾದ್ಬೇಗಂ, ಡಾ.ಪ್ರೇಮ್ಸಿಂಗ್, ಉದ್ಯೋಗ ಸಂಯೋಜಕ ಗಿರೀಶ್.ಎಂ.ಸಿ ಗೋಷ್ಠಿಯಲ್ಲಿದ್ದರು.