ಕೊಟ್ಟೂರು: ಆಕರ್ಷಕ ಬೋಧನಾ ಕಾಯಕ ಶಿಕ್ಷಕರಿಗೆ ಕೇಂದ್ರಿಕೃತವಾಗಿದ್ದರೆ ಅದಕ್ಕೆ ತಕ್ಕಂತೆ ಸ್ಫೂರ್ತಿದಾಯಕ ಶಿಷ್ಯ ಇದ್ದಾಗ ಮಾತ್ರ ಶಿಕ್ಷಣ ಕಲಿಕೆ ಸಾರ್ಥಕ ಹಂತ ಪಡೆದುಕೊಳ್ಳುತ್ತದೆ. ಹಿಂದಿನ ಶಿಕ್ಷಕ ವರ್ಗ ಕರ್ತವ್ಯದಲ್ಲಿಯೇ ಹೆಚ್ಚು ಬಗೆಯ ಜೀವನ ಸಂತೃಪ್ತಿ ಕಂಡುಕೊಳ್ಳುತ್ತಿದ್ದೆವು. ಇದುವೇ ಇದೀಗ ಜೀವನದ ಸಾರ್ಥಕತೆ ತೋರುತ್ತಿದೆ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಜಯಪ್ಪ ಹೇಳಿದರು.
ನಿವೃತ್ತ ಶಿಕ್ಷಕ ಎಚ್.ಎಂ. ಹಾಲಯ್ಯ ಮಾತನಾಡಿ, ವಿದ್ಯಾರ್ಥಿ ಜೀವನ ಬದುಕು ಕಟ್ಟಿಕೊಳ್ಳುವ ಪ್ರಮುಖ ಘಟ್ಟವಾಗಿದೆ. ಜೀವನದ ಸವಿ ನೆನಪುಗಳನ್ನು ತಂದು ಕೊಟ್ಟಷ್ಟು ನೆಮ್ಮದಿ ತಂದುಕೊಡುತ್ತದೆ. ಕೊಟ್ಟೂರು ಸರ್ಕಾರಿ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿಗಳು ಇದೀಗ ಹಮ್ಮಿಕೊಂಡಿರುವ ಗುರುವಂದನೆ ಅವರಲ್ಲಿನ ಗುರುಗಳ ಬಗ್ಗೆ ಇರುವ ಭಕ್ತಿ ತೋರುತ್ತದೆ ಎಂದು ಅವರು ಹೇಳಿದರು.
ನಿವೃತ್ತ ಪ್ರಾಚಾರ್ಯ ಅರವ ಗುರುಬಸಪ್ಪ ಮಾತನಾಡಿ, ಉತ್ತಮ ಆರೋಗ್ಯ ಕಾಪಾಡಿಕೊಂಡಷ್ಟು ಉತ್ತಮ ವಿವೇಕತನ ವೃದ್ಧಿಯಾಗುತ್ತದೆ. ಜೀವನದ ಸಾರ್ಥಕತೆ ಬದುಕಿನ ವಿದ್ಯಾರ್ಥಿ ಜೀವನದ ಸುಖ ನೆಮ್ಮದಿಗೆ ಖಂಡಿತ ಕಾರಣವಾಗಲಿದೆ ಎಂದರು.ಉಪ ಪ್ರಾಚಾರ್ಯ ಸಿ.ಬಸವರಾಜ ಅಧ್ಯಕ್ಷತೆ ವಹಿಸಿದ್ದರು. 73,74,75ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಮಾತನಾಡಿದರು. ಹಳೆ ವಿದ್ಯಾರ್ಥಿ ಬಳಗದ ಕಾರ್ಯದರ್ಶಿ ಡಿ.ಚಾಮರಸ ಸ್ವಾಗತಿಸಿ ನಿರೂಪಿಸಿದರು.