- ಕುಂದುವಾಡ ಕೆರೆ ವಾಯುವಿಹಾರ ಬಳಗದಿಂದ ಶಿವರಾತ್ರಿ ಉಪನ್ಯಾಸ
ದಾವಣಗೆರೆ: ಭಾರತದ ಹಬ್ಬಗಳು, ಆಚರಣೆ ಹಾಗೂ ದೇವರುಗಳ ನಾಮರೂಪಗಳಲ್ಲಿ ಭಕ್ತಿ- ಭಾವಗಳಷ್ಟೇ ಅಲ್ಲ ವೈಜ್ಞಾನಿಕ ಹಾಗೂ ವೈಚಾರಿಕ ಅರ್ಥಗಳೂ ಇವೆ ಎಂದು ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ ಹೇಳಿದರು.
ನಗರದ ಕುಂದುವಾಡ ಕೆರೆಯ ವಾಯುವಿಹಾರ ಬಳಗದಿಂದ ಮಹಾಶಿವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೊಸ ಪೀಳಿಗೆ ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು ಪಠ್ಯೇತರವಾಗಿ ಭಾರತೀಯ ಹಬ್ಬಗಳ ಆಚರಣೆ ಬಗ್ಗೆ ಅಭಿಮಾನ ಹೊಂದುವ ಜೊತೆಗೆ ತಾವೂ ಅದರಲ್ಲಿ ತೊಡಗಬೇಕು ಎಂದರು.ಹಬ್ಬ ಹರಿದಿನಗಳ ಆಚರಣೆ ಹಿಂದಿನ ವೈಜ್ಞಾನಿಕ ಮತ್ತು ವೈಚಾರಿಕ ಅರ್ಥ ಸ್ವಾರಸ್ಯಗಳನ್ನು ತಿಳಿದುಕೊಳ್ಳಬೇಕು. ಅದು ಮುಂದೆ ಸ್ವಸ್ಥ ಬದುಕಿಗೆ ಅನುಕೂಲವಾಗುತ್ತದೆ. ವಿದೇಶಗಳವರು ಸಹ ಇಂದು ಭಾರತೀಯ ಆಚರಣೆ ಹಾಗೂ ದೇವರುಗಳ ಅರ್ಥ ಸ್ವಾರಸ್ಯಗಳನ್ನು ತಿಳಿದುಕೊಳ್ಳಲು ಆಸಕ್ತಿ ವಹಿಸುತ್ತಿದ್ದಾರೆ. ಆದರೆ, ಅವುಗಳ ಆಚರಿಸಬೇಕಾದ ನಾವುಗಳೇ ಅಸಡ್ಡೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಎಚ್.ಬಿ.ಮಂಜುನಾಥ ಹಾಗೂ ಪಾಲಿಕೆ ವಾಟರ್ ಎಂಜಿನಿಯರ್ ಉದಯಕುಮಾರ ಅವರನ್ನು ಸನ್ಮಾನಿಸಲಾಯಿತು. ಸಪ್ತಗಿರಿ ವಿದ್ಯಾಲಯದ ವಸತಿ ನಿಲಯದ ವಿದ್ಯಾರ್ಥಿಗಳು, ಶಿಕ್ಷಕಿಯರಿಂದ ಸಾಮೂಹಿಕ ಭಜನೆ ಮತ್ತು ಭಕ್ತಿಗೀತೆಗಳ ಪ್ರಸ್ತುತಿ ನೆರವೇರಿತು. ಕಾರ್ಯಕ್ರಮದಲ್ಲಿ ರೂಪ ಮಂಜುನಾಥ ಪ್ರಾರ್ಥಿಸಿದರು.
-15ಕೆಡಿವಿಜಿ3: