ಬೆಂಗಳೂರು : ಮಾಧ್ಯಮ ಕ್ಷೇತ್ರಕ್ಕೆ ಸಾಮಾಜಿಕ ಕಾಳಜಿ ಜೀವವಿದ್ದಂತೆ. ಧ್ವನಿ ಇಲ್ಲದವರ ಪರವಾಗಿ ನಿಲ್ಲುವ ಧೈರ್ಯ ಹಾಗೂ ಸಾಮಾಜಿಕ ನ್ಯಾಯದ ಪರವಾದ ಕಾಳಜಿ ಇದ್ದಾಗ ಮಾತ್ರ ಪತ್ರಿಕೋದ್ಯಮಕ್ಕೆ ನಿಜವಾದ ಮೌಲ್ಯ ಸಿಗುತ್ತದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯಿಷಾ ಖಾನಂ ಅಭಿಪ್ರಾಯಪಟ್ಟರು.
ಬುಧವಾರ ನಗರದ ಯವನಿಕಾದಲ್ಲಿ ಆಯೋಜಿಸಲಾಗಿದ್ದ ‘ಸಾಮಾಜಿಕ ಕಳಕಳಿ ಮತ್ತು ಪತ್ರಿಕೋದ್ಯಮ’ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಮಾಧ್ಯಮ ರಂಗ ಸಂಚಲನಾತ್ಮಕ ಸುದ್ದಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ನೈಜ ಸಾಮಾಜಿಕ ಕಾಳಜಿಯಿಂದ ದೂರ ಸರಿಯುತ್ತಿದೆ. ಮಾಧ್ಯಮ ರಂಗ ಈ ಬಗ್ಗೆ ತೀವ್ರ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಕ್ಷೇತ್ರದಲ್ಲಿ ನೈಜ ವರದಿ ಮಾಡುವ ವರದಿಗಾರರ ಶ್ರಮವನ್ನು ಬದಿಗೊತ್ತಿ, ಸ್ಟುಡಿಯೋಗಳಲ್ಲಿ ಕುಳಿತು ನಡೆಸುವ ಸೆಲೆಬ್ರಿಟಿ ಜರ್ನಲಿಸಂ ಮತ್ತು ಮಾಧ್ಯಮಗಳ ಸ್ವಂತ ನ್ಯಾರೇಟಿವ್ ಸುದ್ದಿಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿರುವುದು ಆತಂಕಕಾರಿ. ಹಿರಿಯ ಪತ್ರಕರ್ತರು ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮುಂಬರುವ ಯುವ ಪತ್ರಕರ್ತರು ಸಮಾಜಮುಖಿ ಪತ್ರಿಕೋದ್ಯಮವನ್ನು ನಡೆಸಲು ಸರಿಯಾದ ತರಬೇತಿ ಹಾಗೂ ಮಾರ್ಗದರ್ಶನ ನೀಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಹಿರಿಯ ಪತ್ರಕರ್ತ ಡಿ.ಉಮಾಪತಿ ಮಾತನಾಡಿ, ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಹಾಗೂ ಪ್ರಜೆಗಳ ಭವಿಷ್ಯವನ್ನು ಅಪಹರಿಸಲಾಗುತ್ತಿದೆ. ಆದರೆ, ಇದರ ವಿರುದ್ಧ ದನಿ ಎತ್ತದೇ ಮುಖ್ಯವಾಹಿನಿ ಮಾಧ್ಯಮಗಳು ಬಂಡವಾಳಶಾಹಿಗಳು ಮತ್ತು ಪ್ರಭುತ್ವದ ಪರವಾಗಿ ನಿಂತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಪೊರೇಟ್ ಬೋರ್ಡ್ ರೂಮ್ಗಳಲ್ಲಿ ಖನಿಜ ಸಂಪತ್ತನ್ನು ಲೂಟಿ ಮಾಡಲು ಯೋಜನೆಗಳು ರೂಪುಗೊಳ್ಳುತ್ತಿದ್ದರೂ, ಮಾಧ್ಯಮಗಳು ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಬಂಡವಾಳಶಾಹಿ ಮಾಧ್ಯಮಗಳಿಂದ ಬಹುಜನರ ಹಿತ ಕಾಯಲು ಸಾಧ್ಯವಿಲ್ಲ. ಹೀಗಾಗಿ, ದಲಿತರು ಮತ್ತು ಬಹುಜನರು ಪರ್ಯಾಯ ಮಾಧ್ಯಮ ಕಟ್ಟಿಕೊಂಡು ಮುಖ್ಯವಾಹಿನಿ ಮಾಧ್ಯಮವಾಗಿ ಬೆಳೆಸಬೇಕಿದೆ ಎಂದು ಸಲಹೆ ನೀಡಿದರು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪ್ರಧಾನ ಸಂಚಾಲಕ ಮಾವಳ್ಳಿಶಂಕರ್, ಪತ್ರಕರ್ತ ಧರಣೇಶ್ ಬೂಕನಕೆರೆ, ಲೇಖಕ ರವಿಕುಮಾರ್ ಬಾಗಿ, ಗಾಯಕ ಜನಾರ್ಧನ ಮೈಸೂರು (ಜನ್ನಿ) ಇದ್ದರು.