ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯದ ಎಸ್.ಬಿ. ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಘಟಿಕೋತ್ಸವ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ವಿಶ್ವವಿದ್ಯಾನಿಲಯ ಕುಲಾಧಿಪತಿ ಮತ್ತು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ ಘಟಿಕೋತ್ಸವದಲ್ಲಿ ಮಾತನಾಡಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯವು ಆಯಾ ಕ್ಷೇತ್ರಗಳಲ್ಲಿ ಅವರ ಗಮನಾರ್ಹ ಕೊಡುಗೆಗಳಿಗಾಗಿ ಅರ್ಹ ಪುರಸ್ಕೃತರಿಗೆ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡುವ ಮೂಲಕ ಮಹೋನ್ನತ ವ್ಯಕ್ತಿಗಳನ್ನು ಗೌರವಿಸುವ ಸಂಪ್ರದಾಯವನ್ನು ಮುಂದುವರೆಸಿದೆ. ಗೌರವ ಡಾಕ್ಟರೇಟ್ ಸ್ವೀಕರಿಸಿರುವ ಎಲ್ಲಾ ಗಣ್ಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರವರ ಕ್ಷೇತ್ರಗಳಲ್ಲಿ ಅನುಕರಣೀಯ ಸೇವೆಯೊಂದಿಗೆ ತಮ್ಮ ವೃತ್ತಿಯನ್ನು ಉತ್ಕೃಷ್ಟರೀತಿಯಲ್ಲಿ ಮುಂದುವರಿಸುತ್ತಾರೆಂದು ವಿಶ್ವಾಸ ವ್ಯಕ್ತಪಡಿಸುತ್ತೇನೆ ಎಂದರು.ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಮುಕ್ತ ಮತ್ತು ದೂರ ಶಿಕ್ಷಣವು ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ವ್ಯಕ್ತಿಗಳಿಗೆ ಜ್ಞಾನ, ಕೌಶಲ್ಯಗಳು, ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಅವಕಾಶಗಳನ್ನು ಪಡೆಯಲು ಮಾರ್ಗಗಳನ್ನು ನೀಡುತ್ತದೆ. ಶಿಕ್ಷಣವು ಯಾವಾಗಲೂ ಸಾಮಾಜಿಕ ಪರಿವರ್ತನೆಗೆ ವೇಗವರ್ಧಕವಾಗಿದೆ, ದೂರ ಶಿಕ್ಷಣವು ಭಾರತೀಯ ಶೈಕ್ಷಣಿಕ ಕ್ಷೇತ್ರದಲ್ಲಿ ಲಭ್ಯತೆ, ನಮ್ಯತೆ ಮತ್ತು ಕೈಗೆಟುಕುವಿಕೆಯನ್ನು ಹೆಚ್ಚಿಸಲು ಗಣನೀಯವಾಗಿ ಕೊಡುಗೆ ನೀಡಿದೆ. ಅನೇಕ ಸವಾಲುಗಳ ಹೊರತಾಗಿಯೂ ವಿಶೇಷವಾಗಿ ಆಧುನಿಕ ಯುಗದ ಜ್ಞಾನ ಸ್ಫೋಟ ಮತ್ತು ತಾಂತ್ರಿಕ ಪ್ರಗತಿಯ ಸಂದರ್ಭದಲ್ಲಿ ದೂರಶಿಕ್ಷಣದ ಕೊಡುಗೆ ಅತ್ಯಅಮೂಲ್ಯವಾಗಿದೆ ಎಂದರು.