ಮಲೆನಾಡಿನ ಜ್ವಲಂತ ಸಮಸ್ಯೆ ಪರಿಹಾರಕ್ಕೆ ಒಗ್ಗಟ್ಟಾಗಿ ಮುಖ್ಯಮಂತ್ರಿಗೆ ಮನವರಿಕೆ
ಕಸ್ತೂರಿ ರಂಗನ್ ವರದಿ ಜಾರಿ ಸಮಸ್ಯೆ ಹಾಗೂ ಮಲೆನಾಡಿನ ಸಮಸ್ಯೆಗಳ ಕುರಿತು ಅಧ್ಯಯನಕ್ಕಾಗಿ ಸೆ.19ರಂದು ಬಾಳೆಹೊನ್ನೂರಿಗೆ ನಿಗದಿಗೊಂಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭೇಟಿ ಕಾರ್ಯಕ್ರಮವನ್ನು ಪಕ್ಷಾತೀತ ವಾಗಿ ಆಯೋಜಿಸಿ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲು ನಿರ್ಧರಿಸಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಪಟ್ಟಣದ ನಾರಾಯಣಗುರು ಸಮುದಾಯ ಭವನದಲ್ಲಿ ಭಾನುವಾರಜಿಲ್ಲೆಯ ಕಾಂಗ್ರೆಸ್ ಮುಖಂಡರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮಲೆನಾಡಿಗೆ ಮರಣ ಶಾಸನವಾದ ಕಸ್ತೂರಿ ರಂಗನ್ ವರದಿ ಜಾರಿಗೆ ಈಗಾಗಲೇ ಕೇಂದ್ರ ಸರ್ಕಾರ ೬ ಕರಡು ಅಧಿಸೂಚನೆ ಹೊರಡಿಸಿ ಅವುಗಳನ್ನೆಲ್ಲಾ ರಾಜ್ಯ ಸರ್ಕಾರ ತಿರಸ್ಕಾರ ಮಾಡಿದೆ. ಇದೀಗ 7ನೇ ಕರಡು ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಪ್ರಸ್ತುತ ಅದರ ತಿರಸ್ಕಾರಕ್ಕೆ ಸರ್ಕಾರಕ್ಕೆ ವರದಿ ಬಾಧ್ಯಸ್ಥ ಜಿಲ್ಲೆಗಳ ಶಾಸಕರು ಮನವಿ ಮಾಡಿದ್ದಾರೆ.ವರದಿ ಜಾರಿಯ ಸಾಧಕ-ಬಾಧಕಗಳನ್ನು ಮುಕ್ತವಾಗಿ ಜನರೊಂದಿಗೆ ಚರ್ಚಿಸಲು ಖುದ್ದು ಮುಖ್ಯಮಂತ್ರಿಗಳೇ ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಕಾರ್ಯಕ್ರಮ ಕೇವಲ ನಮ್ಮ ಪಕ್ಷದ ಕಾರ್ಯಕರ್ತರೇ ಇರುವಂತಾಗಬಾರದು. ಈ ಹಿನ್ನೆಲೆಯಲ್ಲಿ ಪಕ್ಷದ ಆಂತರಿಕ ಸಭೆ ನಡೆಸಿದ್ದು, ಪಕ್ಷದ ಮುಖಂಡರು ಪಕ್ಷಾತೀತ ವಾಗಿ ವಿವಿಧ ಸಂಘಟನೆ ಒಗ್ಗೂಡಿಸಿ ಮುಖ್ಯಮಂತ್ರಿಗಳ ಸಭೆ ನಡೆಸಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಜಿಲ್ಲೆಯ ಎಲ್ಲಾ ಹೋಬಳಿಗಳಲ್ಲೂ ವಿವಿಧ ಪಕ್ಷಗಳ ಮುಖಂಡರು, ಬೆಳೆಗಾರ ಸಂಘಟನೆಗಳು, ವಿವಿಧ ಪಕ್ಷಗಳ ಮುಖಂಡರು, ಸಾರ್ವಜನಿಕರನ್ನು ಒಗ್ಗೂಡಿಸಿ ಸಭೆ ನಡೆಸಿ ಭಾಗವಹಿಸುವಂತೆ ಕೋರಲಾಗಿದೆ. ಪ್ರಮುಖವಾಗಿ ಮುಖ್ಯ ಮಂತ್ರಿಗಳ ಬಳಿ ಕಸ್ತೂರಿ ರಂಗನ್ ವರದಿ ತಿರಸ್ಕಾರ, ಮಲೆನಾಡಿನಲ್ಲಿ ಮಾನವ-ಕಾಡುಪ್ರಾಣಿ ಸಂಘರ್ಷ, ಪ್ರಸ್ತುತ ವರ್ಷದ ಬರ ಸಮಸ್ಯೆ, ಅಡಿಕೆ ಬೆಳೆಗಾರರ ಸಮಸ್ಯೆ, ಅರಣ್ಯ-ಕಂದಾಯ ಭೂಮಿ ಸಮಸ್ಯೆ, ಹಕ್ಕುಪತ್ರ ವಿತರಣೆ, ಫಾರಂ ನಂ.50, 53, 94 ಸಿ, ಒತ್ತುವರಿ ಸಮಸ್ಯೆ, ಒತ್ತುವರಿ ಭೂಮಿ ಲೀಸ್ಗೆ ನೀಡುವ ವಿಚಾರ ಮುಂತಾದವನ್ನು ಪ್ರಸ್ತಾಪಿಸಲಾಗುವುದು.
ಬಾಳೆಹೊನ್ನೂರಿನಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರುಗಳ ಆಂತರಿಕ ಸಭೆಯಲ್ಲಿ ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಮಂಜೇಗೌಡ, ಶಾಸಕ ಎಚ್.ಡಿ.ತಮ್ಮಯ್ಯ, ಎಐಸಿಸಿ ವಕ್ತಾರ ಸಂದೀಪ್ ಅವರನ್ನು ಶಾಸಕ ಟಿ.ಡಿ.ರಾಜೇಗೌಡ ಗೌರವಿಸಿದರು.