ಧಾರವಾಡ:
ಇಲ್ಲಿಯ ಜರ್ನಲಿಸ್ಟ್ ಗಿಲ್ಡ್ನಲ್ಲಿ ಶುಕ್ರವಾರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಉನ್ನತ ಶಿಕ್ಷಣದ ತಾಣ. ಉತ್ತರ ಕರ್ನಾಟಕದಾದ್ಯಂತ ವಿದ್ಯಾರ್ಥಿಗಳು ಇಲ್ಲಿದ್ದು, ಸರ್ಕಾರಿ ಹಾಸ್ಟೆಲ್ ಸೌಲಭ್ಯಗಳ ಕೊರತೆಯಿಂದಾಗಿ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಈ ಸಮಸ್ಯೆಗೆ ಪರಿಹಾರವಾಗಿ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ದೊಡ್ಡ ಹಾಸ್ಟೆಲ್ ಸಂಕೀರ್ಣ ನಿರ್ಮಾಣಕ್ಕಾಗಿ ನಗರದೊಳಗೆ ಭೂಮಿ ಗುರುತಿಸಲಾಗಿದೆ. ಜತೆಗೆ ಡಿಜಿಟಲ್ ಗ್ರಂಥಾಲಯ ಸಹ ಯೋಜಿಸಲಾಗಿದೆ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲಕರ ಅಧ್ಯಯನ ವಾತಾವರಣ ಇಲ್ಲದಾಗಿದೆ. ಪಿಜಿ ಮತ್ತು ಬಾಡಿಗೆ ಕೋಣೆಗಳಲ್ಲಿ ತೊಂದರೆದಾಯಕವಾಗಿ ವಿದ್ಯಾರ್ಥಿಗಳಿದ್ದಾರೆ. ಸರಿಯಾದ ಊಟ, ಗಾಳಿ-ಬೆಳಕಿಲ್ಲ. ಆದ್ದರಿಂದ ಹೆಚ್ಚು ವಿದ್ಯಾರ್ಥಿಗಳಿರುವ ಧಾರವಾಡದಲ್ಲಿ ನಾಲ್ಕು ಹೊಸದಾಗಿ ಇಂದಿರಾ ಕ್ಯಾಂಟೀನ್ಗಳನ್ನು ಸಹ ತೆರೆಯಲಾಗುತ್ತಿದೆ. ವಿದ್ಯಾರ್ಥಿಗಳು ಸಮಾಜ ವಿರೋಧಿ ಚಟುವಟಿಕೆಗಳಿಗೆ ಆಕರ್ಷಿತರಾಗದಂತೆ ಪಿಜಿಗಳ ಮೇಲೆ ನಿಗಾ ವಹಿಸಲು ನಿರ್ಧರಿಸಿದೆ ಎಂದು ಹೇಳಿದರು.ನಗರದ ದೊಡ್ಡ ಸವಾಲುಗಳಲ್ಲಿ ತ್ಯಾಜ್ಯ ನಿರ್ವಹಣೆ ಒಂದು ಎಂದ ಜಿಲ್ಲಾಧಿಕಾರಿ, ಇದನ್ನು ರಾತ್ರೋರಾತ್ರಿ ಪರಿಹರಿಸಲು ಸಾಧ್ಯವಿಲ್ಲ. ಆದಾಗ್ಯೂ, ಜಿಲ್ಲಾಡಳಿತ ಮತ್ತು ಪಾಲಿಕೆ ಈ ಸಮಸ್ಯೆಯನ್ನು ನಿಭಾಯಿಸಲು ಸಮಗ್ರ ಯೋಜನೆಯನ್ನು ಪ್ರಾರಂಭಿಸಿವೆ. ಆಡಳಿತದ ಜತೆಗೆ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಲು ತಿಳಿಸಿದರು.
ಪ್ರಸ್ತುತ ಮುಂಗಾರು ಋತುವಿಗೆ ಜಿಲ್ಲೆಯಲ್ಲಿ ಬೀಜಗಳು ಅಥವಾ ರಸಗೊಬ್ಬರಗಳ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸೋಯಾಬೀನ್, ಜೋಳ, ಹೆಸರುಕಾಳು ಮತ್ತು ನೆಲಗಡಲೆ ಬೆಳೆಯುತ್ತಿರುವ ಪ್ರಮುಖ ಬೆಳೆಗಳಾಗಿವೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ಬೀಜ ವಿತರಿಸಲಾಗುತ್ತಿದ್ದು, ಗುರಿಯ ಸುಮಾರು ಶೇ. 54ರಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಕೃಷಿ ಇಲಾಖೆಯು ಯೂರಿಯಾ ಮತ್ತು ಡಿಎಪಿ ಸೇರಿದಂತೆ ಹೆಚ್ಚಿನ ಬೇಡಿಕೆಯಿರುವ ರಸಗೊಬ್ಬರಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿದೆ. ಈ ವರೆಗೆ ಸುಮಾರು 28,000 ಮೆಟ್ರಿಕ್ ಟನ್ ಯೂರಿಯಾ ವಿತರಿಸಲಾಗಿದ್ದು, ಇನ್ನೂ 19,000 ಮೆಟ್ರಿಕ್ ಟನ್ ಲಭ್ಯವಿದೆ ಎಂದು ಮಾಹಿತಿ ನೀಡಿದರು.