ಕೊಪ್ಪಳ: ದೇಶ ಸೇವೆ ಮಾಡುವುದು ಈಶ ಸೇವೆ ಮಾಡಿದ ಹಾಗೆ ಎಂದು ಸಹಾಯಕ ಆಯುಕ್ತ ಮಹಮದ್ ಜಿಲಾನಿ ಖುರೇಷಿ ಹೇಳಿದರು.

ನಗರದಲ್ಲಿ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಸರ್ಕಾರದಿಂದ ನೀಡಿರುವ ಎರಡು ಎಕರೆ ಜಮೀನಿನಲ್ಲಿ ಸಸಿ ನೆಡುವ ಹಾಗೂ ಜಿಲ್ಲಾ ಮಾಜಿ ಸೈನಿಕರ ಸಂಘದ ಬೋರ್ಡ್ ಹಾಕುವ ಹಾಗೂ ಅಶೋಕ ವೃತ್ತದಲ್ಲಿ ಜರುಗಿದ ಮೊಂಬತ್ತಿ ಮೆರವಣಿಗೆ ಉದ್ದೇಶಿಸಿ ಮಾತನಾಡಿದ ಅವರು, ಸೈನಿಕರು ಹಾಗೂ ಅವರ ಕುಟುಂಬಗಳಿಗೆ ಎಲ್ಲ ರೀತಿಯ ಸಹಾಯ ಮಾಡಬೇಕು. ಸೈನಿಕರನ್ನು ಗೌರವಿಸುವ ಕಾರ್ಯ ಆಗಬೇಕು ಎಂದರು.

ಈ ವೇಳೆ ಜಿಲ್ಲಾ ಮಾಜಿ ಸೈನಿಕರ ಸಂಘಕ್ಕೆ ಸರ್ಕಾರ ನೀಡಿರುವ ಜಮೀನಿನಲ್ಲಿ ಕಚೇರಿ ಕಟ್ಟಡಗಳಿಗಾಗಿ ಅನುದಾನ ನೀಡುವ ಭರವಸೆ ನೀಡಿದರು.

ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ ಮಾತನಾಡಿದರು. ಕಾರ್ಗಿಲಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಮಾಜಿ ಸೈನಿಕರ ಸಂಘ, ಸೈನಿಕರ ಕುಟುಂಬದವರು ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಮೊಂಬತ್ತಿ ಮೆರವಣಿಗೆ ನಡೆಸಿದರು. ಅಶೋಕ ಸರ್ಕಲ್‌ನಿಂದ ಬಸವೇಶ್ವರ ಸರ್ಕಲ್ ವರೆಗೆ ವಿಜಯೋತ್ಸವ ಘೋಷಣೆ ಕೂಗುತ್ತಾ ಸಾಗಿದರು. ಮೊಂಬತ್ತಿ ಮೆರವಣಿಗೆಗೆ ಮಂಜುನಾಥ ಸೊರಟೂರು ಚಾಲನೆ ನೀಡಿದರು. ಯಾತ್ರೆಯುದ್ದಕ್ಕೂ ಕಾರ್ಗಿಲ್ ವಿಜಯೋತ್ಸವ, ಕಾರ್ಗಿಲ್ ವೀರಯೋಧರ ಬಗ್ಗೆ ಜೈಕಾರ ಹಾಕಲಾಯಿತು.

ಮಾಜಿ ಸೈನಿಕ ಗಿರಿ ಮಲ್ಲಪ್ಪ, ನಿವೇದಿತಾ, ಜ್ಯೋತಿ ಬಾಗಲಿ, ಜೈಪಾಲ್ ರೆಡ್ಡಿ ಮಾತನಾಡಿದರು. ಪ್ರಮುಖರಾದ ನಿಂಗಪ್ಪ ಗಾಣಿಗೇರ್, ಇಂದೂಧರ ಸೊಪ್ಪಿಮಠ, ವಾಸಪ್ಪ, ಶ್ರೀಕಾಂತ್ ರೆಡ್ಡಿ, ಫಕೀರಪ್ಪ, ಮಾರುತಿ ಗೊಂದಿ ಇತರರಿದ್ದರು.