ನವಲಗುಂದ:
ತಾಲೂಕಿನ ಹಾಳಕುಸುಗಲ್ ಗ್ರಾಪಂ ವ್ಯಾಪ್ತಿಯ ಶಾನವಾಡ ಗ್ರಾಮದಲ್ಲಿ ಮಂಗಳವಾರ ಕರೆಯಲಾಗಿದ್ದ ವಾರ್ಡ್ ಸಭೆಗೆ ಓರ್ವ ಸದಸ್ಯ ಮಾತ್ರ ಬಂದಿದ್ದರು. ಉಳಿದ ಸದಸ್ಯರು ಎಲ್ಲಿ ಎಂದು ಪಿಡಿಒಗೆ ಪ್ರಶ್ನಿಸಿದಾಗ ಎಲ್ಲರಿಗೂ ಸಭೆಗೆ ಆಹ್ವಾನಿಸಲಾಗಿದೆ. ಆದರೆ ಬಂದಿಲ್ಲ ಎಂದರು. ಆಗ ಗ್ರಾಮಸ್ಥರು ಸಭೆ ನಡೆಸಬಾರದು ಎಂದು ಪಟ್ಟು ಹಿಡಿದರು.
ಸದಸ್ಯರಿಗೆ ಅವರ ಅಧಿಕಾರ ವ್ಯಾಪ್ತಿ, ಕರ್ತವ್ಯಗಳ ಬಗ್ಗೆ ತರಬೇತಿ ನೀಡಿದರೂ ಸಭೆಗಳಿಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ. ಇವರ ಬೇಜವಾಬ್ದಾರಿಯಿಂದ ಗ್ರಾಮ ಅಭಿವೃದ್ಧಿಯಲ್ಲಿ ಕುಂಠಿತಗೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಿಡಿಒ ಎ.ಎಫ್. ಗೋಣಾಗರ ಮಾತನಾಡಿ, ಸಭೆಗೆ ಬರುವಂತೆ ಎಲ್ಲ ಸದಸ್ಯರಿಗೂ ನೋಟಿಸ್ ನೀಡಲಾಗಿದೆ. ಫೋನ್ ಮುಖಾಂತರವೂ ತಿಳಿಸಲಾಗಿದೆ. ಆದರೂ ಬರದೆ ಇರುವುದು ಬೇಸರದ ಸಂಗತಿ. ಗ್ರಾಮಸ್ಥರ ಬೇಡಿಕೆಯಂತೆ ಅಧ್ಯಕ್ಷರೊಂದಿಗೆ ಮಾತನಾಡಿ ಮತ್ತೊಮ್ಮೆ ಸದಸ್ಯರ ಸಭೆ ಕರೆಯುತ್ತೇನೆ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಭೆಯನ್ನು ಮೊಟಕುಗೊಳಿಸಲಾಯಿತು.ನಂತರ ಗ್ರಾಮಸ್ಥ ಪ್ರಕಾಶಗೌಡ ಪಾಟೀಲ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ವರ್ಷದಿಂದ ವಾರ್ಡ್ ಸಭೆ ಕರೆದಿಲ್ಲ. ಈ ಸಭೆಗೂ ಗ್ರಾಮಸ್ಥರನ್ನು ಮುಂಚಿತವಾಗಿ ಆಹ್ವಾನಿಸಿಲ್ಲ, ಕಾಟಾಚಾರಕ್ಕೆ ಸಭೆ ಕರೆಯಲಾಗಿದೆ. ಸದಸ್ಯರು ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಗ್ರಾಮದಲ್ಲಿ ಸಮರ್ಪಕ ಅಭಿವೃದ್ಧಿ ಕಾಣದೇ ಹಿಂದುಳಿದ ಗ್ರಾಮದಂತಾಗಿದೆ. ಇದೇ ರೀತಿ ಮುಂದುವರಿದರೆ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.