ಗುರುವಂದನಾ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ
ಗುರು ಜ್ಞಾನವಿದ್ದಂತೆ. ಗುರುವಿನ ಸೇವೆ ಮಾಡಿದವರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹಿರಿಯ ಹಾರ್ಮೋನಿಯಂ ಕಲಾವಿದ ವಿರೂಪಾಕ್ಷರೆಡ್ಡಿ ಓಣಿಮನಿ ಹೇಳಿದರು.
ಪಟ್ಟಣದ ಶ್ರೀ ತೊಂಡಿತೇವರಪ್ಪ ದೇವಸ್ಥಾನದಲ್ಲಿ ಭಾನುವಾರ ಶ್ರೀ ರಾಘವೇಂದ್ರ ಭಜನಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಗುರು ವಂದನೆ " ಕಾರ್ಯಕ್ರಮದಲ್ಲಿ ಮಾತನಾಡಿದರು.ನಮ್ಮ ಸಂಸ್ಕೃತಿ, ಪರಂಪರೆಯಲ್ಲಿ ದೇವರಿಗಿಂತ ಗುರುವಿಗೆ ಉನ್ನತ ಸ್ಥಾನವಿದ್ದು, ಗುರು ಎನಿಸಿಕೊಂಡವರು ಶಿಷ್ಯವೃಂದಕ್ಕೆ ಸನ್ಮಾರ್ಗದ ದಾರಿ ತೋರಿದಾಗ ಮಾತ್ರ ಗುರುವಿನ ಮಹತ್ವ ಅರಿಯಲು ಸಾಧ್ಯ ಎಂದರು.
ಸಂಘದ ಅಧ್ಯಕ್ಷ ವಿಜಯಕುಮಾರ ಹೊಸಳ್ಳಿ ಮಾತನಾಡಿ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ಪುರಂದರದಾಸರ ವಾಣಿಯಂತೆ ನಮಗೆಲ್ಲರಿಗೂ ಗುರುವಿನ ಮೂಲಕ ವಿದ್ಯೆ, ಬುದ್ದಿ ಪ್ರಾಪ್ತಿಯಾಗಲಿದೆ. ಗುರುವಿನ ಮಹತ್ವ ಎಲ್ಲರೂ ತಿಳಿದು ಜೀವನ ಪಾವನವಾಗಿಸಿಕೊಳ್ಳಬೇಕು ಎಂದರು.
ಇದಕ್ಕೂ ಮೊದಲು ಸತತ ೩೦ ವರ್ಷಕ್ಕೂ ಹೆಚ್ಚು ಕಾಲ ಹಾರ್ಮೋನಿಯಂ ವಾದನ ಸೇವೆ ಸಲ್ಲಿಸಿದ ವಿರೂಪಾಕ್ಷರೆಡ್ಡಿ ಓಣಿಮನಿ, ತೊಂಡೆಪ್ಪ ಕುಂಡೆರ್, ಪರಂಧಾಮರೆಡ್ಡಿ ಭೀರಳ್ಳಿ ದಿಮ್ಮ ವಾದನದಲ್ಲಿ ಕಾಶಿಪತಿ ಕಮ್ಮಾರ್ ಹಾಗೂ ಹನುಮಂತರೆಡ್ಡಿ ಮಹಲಿನಮನಿ ಅವರಿಗೆ ಶ್ರೀಗುರು ಅನುಗ್ರಹ ಪ್ರಶಸ್ತಿ ನೀಡಿ, ಗೌರವಿಸಲಾಯಿತು.ಕಲಾವಿದರಾದ ಸುರೇಶ ಬೊಂದಾಡೆ, ಸುರೇಶರೆಡ್ಡಿ ಮಹಲಿನಮನಿ, ಭೀಮರೆಡ್ಡಿ ಓಣಿಮನಿ, ಶೇಖರಪ್ಪ ಕಮ್ಮಾರ, ಮೋಹನ ಅಚ್ಚಲಕರ, ರಾಘವೇಂದ್ರ ಚಿತ್ರಗಾರ, ಭೀಮರಾವ್ ಮರಾಠಿ, ವೀರೇಶ ವಸ್ತ್ರದ, ವಿನಯ ಪತ್ತಾರ, ಅಶೋಕ ನಾಯಕ, ಅರ್ಚಕರಾದ ಕಂಠೆಪ್ಪ, ರಾಮಣ್ಣ ಇತರರು ಇದ್ದರು.