ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಮಳೆ, ಗಾಳಿಯಿಂದ ಮೆಸ್ಕಾಂಗೆ 16.45 ಕೋಟಿ ರು. ಗೂ ಅಧಿಕ ನಷ್ಟ

KannadaprabhaNewsNetwork | Published : Jun 18, 2025 11:48 PM

ಮುಂಗಾರು ಗಾಳಿ, ಮಳೆಗೆ ಮೆಸ್ಕಾಂ ವ್ಯಾಪ್ತಿಯಲ್ಲಿ 10,583 ವಿದ್ಯುತ್ ಕಂಬಗಳು ಧರಾಶಾಯಿಯಾಗಿದ್ದು, ಪರಿವರ್ತಕಗಳುಹಾನಿಗೊಳಲಾಗಿರುವುದು ಸೇರಿದ೦ತೆ ಒಟ್ಟು 16,45,63,000 ರು.ಗೂ ಅಧಿಕ ಮೊತ್ತದ ಅಸ್ತಿಗಳಿಗೆ ಹಾನಿಯಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮುಂಗಾರು ಗಾಳಿ, ಮಳೆಗೆ ಮೆಸ್ಕಾಂ ವ್ಯಾಪ್ತಿಯಲ್ಲಿ 10,583 ವಿದ್ಯುತ್ ಕಂಬಗಳು ಧರಾಶಾಯಿಯಾಗಿದ್ದು, ಪರಿವರ್ತಕಗಳುಹಾನಿಗೊಳಲಾಗಿರುವುದು ಸೇರಿದ೦ತೆ ಒಟ್ಟು 16,45,63,000 ರು.ಗೂ ಅಧಿಕ ಮೊತ್ತದ ಅಸ್ತಿಗಳಿಗೆ ಹಾನಿಯಾಗಿದೆ.

ಕಳೆದ ಏಪ್ರಿಲ್ ತಿಂಗಳಿನಿಂದ ಜೂನ್‌ 15ರ ಅವಧಿಯಲ್ಲಿ ಗಾಳಿ, ಮಳೆಗೆ ಮೆಸ್ಕಾಂ ವ್ಯಾಪ್ತಿಯ ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6,91,37,000 ರು. ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 3,85,60,000 ರು. ಮೊತ್ತದ ಆಸ್ತಿಗಳಿಗೆ ಹಾನಿಯಾಗಿದೆ. ಉಳಿದ೦ತೆ ಉಡುಪಿ ಜಿಲ್ಲೆಯಲ್ಲಿ 3,73,53,000 ರು. ಮತ್ತು ಶಿವಮೊಗ್ಗದಲ್ಲಿ 1,95,14,000 ರು. ಮೊತ್ತದ ಮೆಸ್ಕಾಂ ಆಸ್ತಿಗಳು ಹಾನಿಗೊಳಗಾಗಿದೆ. ಹಾನಿಗೊಳಗಾದ ಬಹುತೇಕ ವಿದ್ಯುತ್‌ ಕಂಬಗಳು ಪರಿವರ್ತಕಗಳು ಹಾಗೂ ವಿದ್ಯುತ್‌ ಮಾರ್ಗಗಳನ್ನು ಬದಲಾಯಿಸಿ ವಿದ್ಯುತ್‌ ಪೂರೈಕೆ ಸುಗಮಗೊಳಿಸಲಾಗಿದೆ. ಕೆಲವೊಂದು ಕಡೆ ದುರಸ್ತಿ ಮತ್ತು ಬದಲಾವಣೆ ಕಾರ್ಯ ಮುಂದುವರಿದಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ದ.ಕ.ದಲ್ಲಿ ಅತೀ ಹೆಚ್ಚು ಹಾನಿ:

ಮೆಸ್ಕಾಂ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ ಹೋಲಿಸಿದರೆ ಗಾಳಿ-ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 4,227 ಕಂಬಗಳಿಗೆ ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 2,238, ಶಿವಮೊಗ್ಗದಲ್ಲಿ 1,945, ಉಡುಪಿ ಜಿಲ್ಲೆಯಲ್ಲಿ 2,173 ಕಂಬಗಳು ಹಾನಿಗೊಳಗಾಗಿವೆ.

ಒಟ್ಟಾರೆ ಹಾನಿಗೊಳಗಾಗಿರುವ 10,583 ವಿದ್ಯುತ್ ಕಂಬಗಳ ಪೈಕಿ 10,338 ಕಂಬಗಳನ್ನು ಬದಲಾಯಿಸಲಾಗಿದೆ. ಇದೇ ರೀತಿ ಮೆಸ್ಕಾಂ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ 180 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿವೆ. ದಕ್ಷಿಣ ಕನ್ನಡದಲ್ಲಿ 120, ಉಡುಪಿ ಜಿಲ್ಲೆಯಲ್ಲಿ 6, ಶಿವಮೊಗ್ಗದಲ್ಲಿ 52 ವಿದ್ಯುತ್ ಪರಿವರ್ತಕಗಳು ಹಾನಿಗೊಂಡಿವೆ. ವಿದ್ಯುತ್‌ ಪರಿವರ್ತಕಗಳಿಗೆ ಸ೦ಬ೦ಧಿಸಿದ೦ತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕನಿಷ್ಠ ಅಂದರೆ 2 ಪರಿವರ್ತಕಗಳಿಗೆ ಹಾನಿಯಾಗಿವೆ. ಹಾನಿಗೊಳಗಾಗಿರುವ ಎಲ್ಲ 180 ವಿದ್ಯುತ್ ಪರಿವರ್ತಕಗಳನ್ನು ದುರಸ್ತಿ ಮಾಡಲಾಗಿದೆ ಇಲ್ಲವೇ ಬದಲಾಯಿಸಲಾಗಿದೆ. ಇದಲ್ಲದೆ, 326.58. ಕಿ.ಮೀ. ವಿದ್ಯುತ್ ಮಾರ್ಗಗಳು ಹಾನಿಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 211. 35 ಕಿ.ಮೀ., ಉಡುಪಿ ಜಿಲ್ಲೆಯಲ್ಲಿ 32.83 ಕಿ.ಮೀ., ಚಿಕ್ಕಮಗಳೂರು ಜಿಲ್ಲೆಯಲ್ಲಿ 44.76 ಕಿ.ಮೀ. ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 37.6 4 ಕಿ.ಮಿ. ವಿದ್ಯುತ್ ಮಾರ್ಗ ಹಾನಿಗೊಂಡಿದೆ. ಇದರಲ್ಲಿ 323. ಕಿ.ಮೀ. ವಿದ್ಯುತ್ ಮಾರ್ಗ ಸರಿಪಡಿಸಲಾಗಿದೆ.

ಸಹಕರಿಸಲು ಮನವಿ: ಮೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಗಾಳಿ, ಮಳೆ ಲೆಕ್ಕಿಸದೆ ಅವಿರತವಾಗಿ ಶ್ರಮಿಸಿ, ಗ್ರಾಹಕರ ಸಹಕಾರದಿಂದ ವಿದ್ಯುತ್‌ ಪೂರೈಕೆಯಲ್ಲಿ ಆಗಿರುವ ಅಡಚಣೆಗಳನ್ನು ಸರಿಪಡಿಸುತ್ತಿದ್ದಾರೆ. ಇನ್ನೂ ಹಲವೆಡೆ ದುರಸ್ತಿ ಕಾರ್ಯ ಮುಂದುವರಿದಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.